ಕರ್ನಾಟಕ

ಕ್ರಿಮಿನಲ್ ಹಿನ್ನೆಲೆಯುಳ್ಳವರಿಂದ ನೈತಿಕ ಪಾಠ ಬೇಕಿಲ್ಲ: ಅಮಿತ್ ಶಾ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು

Pinterest LinkedIn Tumblr

Siddu Congress Karnataka_3

ಬೆಂಗಳೂರು: ಕೇಂದ್ರ ಸರಕಾರದ ಕೃಪಾಕಟಾಕ್ಷ ಪಡೆದು ಕ್ರಿಮಿನಲ್ ಮೊಕದ್ದಮೆಯಿಂದ ಹೊರ ಬಂದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಂದ ನೈತಿಕತೆಯ ಪಾಠ ಕಲಿಯಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಚಿತ್ರಕಲಾ ಪರಿಷತ್‌ನಲ್ಲಿ 12ನೇ ಚಿತ್ರಸಂತೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ ”ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಚಿವರ ನಡುವೆ ಸಮನ್ವಯ ಇಲ್ಲ ಹೇಳಿಕೆ ಸುಳ್ಳು. ಶಾ ಹೇಳಿರುವುದಕ್ಕಿಂತ ಭಿನ್ನ ಸ್ಥಿತಿ ರಾಜ್ಯದಲ್ಲಿದ್ದು ಸರಕಾರ ಉತ್ತಮ ಆಡಳಿತ ನೀಡಿದೆ. ಹಿಂದಿನ ಸರಕಾರದ ಮಂತ್ರಿ, ಶಾಸಕರು ಜೈಲಿನಲ್ಲಿದ್ದರು. ಈಗಲೂ ಕೆಲವರು ಬಂಧಿಖಾನೆಯಲ್ಲೇ ಇದ್ದರೂ ಬಿಜೆಪಿಯವರಿಗೆ ಬುದ್ಧಿ ಬಂದಿಲ್ಲ,” ಎಂದರು.

”ಭ್ರಷ್ಟಾಚಾರಕ್ಕೆ ಬಿಜೆಪಿ ಹೊರತಲ್ಲ. ಆ ಪಕ್ಷ ಅಧಿಕಾರ ನಡೆಸಿದ ವೇಳೆ ಹಲವು ಹಗರಣಗಳು ನಡಿದಿವೆ. ಮಾಡಬಾರದ ಕೆಲಸ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದರೂ, ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಚಾಳಿ ಬಿಟ್ಟಿಲ್ಲ. ಒಂದಾದರೂ ಹಗರಣ ನಮ್ಮ ಸರಕಾರದಲ್ಲಿ ನಡೆದಿರುವ ಉದಾಹರಣೆ ಇದೆಯೆ,”ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ಕಾರ‌್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ”ಚಿತ್ರಸಂತೆ ಕಲಾವಿದರಿಗೆ ತಮ್ಮ ಪ್ರತಿಭೆ ಹೊರಗೆಡವಲು ಉತ್ತಮ ವೇದಿಕೆ. ಕಲಾವಿದರು ಹಾಗೂ ಕಲಾ ರಸಿಕರು ಅಪರೂಪದ ಕಾರ‌್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕಿದೆ,” ಎಂದು ಸಿಎಂ ಸಲಹೆ ನೀಡಿದರು.

ಸಚಿವರಾದ ರಾಮಲಿಂಗಾರೆಡ್ಡಿ, ಬಿಬಿಎಂಪಿ ಮೇಯರ್ ಶಾಂತಾಕುಮಾರಿ, ಆಯುಕ್ತ ಲಕ್ಷ್ಮಿನಾರಾಯಣ, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಪ್ರಧಾನ ಕಾರ‌್ಯದರ್ಶಿ ಡಿ.ಕೆ. ಚೌಟ, ಸಾಹಿತಿಗಳಾದ ಹಂ.ಪ.ನಾಗರಾಜಯ್ಯ, ಕಮಾಲ ಹಂಪನಾ ಮತ್ತಿತರರಿದ್ದರು.

ಅಧಿಕಾರದಲ್ಲಿದ್ದಾಗ ಕೊಳಕು ತಗೆಯದಿದ್ದರೆ ಹೇಗೆ: ಕಾಗೋಡು ಪ್ರಶ್ನೆ
ಬೆಂಗಳೂರು: ಅಧಿಕಾರದಲ್ಲಿ ಇದ್ದಾಗ ವ್ಯವಸ್ಥೆಯ ಕೊಳಕು ತೆಗೆಯದಿದ್ದರೆ ಹೇಗೆ ಎಂದ ಹೇಳುವ ಮೂಲಕ ಸ್ಪೀಕರ್ ಕಾಗೋಡು ತಿಮ್ಮಪ್ಪ ಸರಕಾರದ ವಿರುದ್ಧ ಮತ್ತೊಮ್ಮೆ ಚಾಟಿ ಬೀಸಿದ್ದಾರೆ.

ಚಿತ್ರಸಂತೆ ಕಾರ‌್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ ”ಆರೋಗ್ಯ ಹಾಗೂ ಅರಣ್ಯ ಇಲಾಖೆಯಲ್ಲಿನ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಹೇಳಿದ್ದರೂ, ಈವರೆಗೂ ಕಣ್ಣಿಗೆ ಕಾಣುವ ಬದಲಾವಣೆ ಆಗಿಲ್ಲ. ಜನರಿಗೆ ಸಂಬಂಧಿಸಿದ ವಿಚಾರಗಳಿಗೆ ಆದ್ಯತೆ ಮೇರೆಗೆ ಪರಿಹಾರ ನೀಡುವುದು ಆಯಾ ಇಲಾಖೆಗಳ ಜವಾಬ್ದಾರಿ. ಇದು ಆಗದಿದ್ದಲ್ಲಿ ಜನರೇ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು ಸಹಜ,” ಎಂದರು.

”ಸಾಗುವಳಿ ಭೂಮಿ ವಿಚಾರವಾಗಿ ಒತ್ತುವರಿ ತೆರವು ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಇದನ್ನು ಮಾಡದಂತೆ ಸರಕಾರ ಸೂಚಿಸಿದ್ದರೂ, ಅಧಿಕಾರಿಗಳು ತಮ್ಮ ಪಟ್ಟು ಸಡಿಲಿಸಿಲ್ಲ. ಕಾಯಿದೆಗಳಲ್ಲಿ ತಪ್ಪಾಗಿದ್ದಲ್ಲಿ ಅದಕ್ಕೆ ತಿದ್ದುಪಡಿ ತಂದು ಜನರಿಗೆ ರಿಲೀಫ್ ನೀಡಬೇಕು. ಕನಿಷ್ಠ ಪಕ್ಷ ಕೋರ್ಟ್ ಗಮನಕ್ಕೆ ತಂದು ತಪ್ಪು ಸರಿಪಡಿಸುವ ಯತ್ನ ಮಾಡದಿದ್ದಲ್ಲಿ ಸರಕಾರ ಅಧಿಕಾರದಲ್ಲಿ ಏಕೆ ಇರಬೇಕು,” ಎಂದು ಪ್ರಶ್ನಿಸಿದರು.

”ಸರಕಾರದ ವಿರುದ್ಧ ತಮಗೆ ಮುನಿಸಿಲ್ಲ. ಸರಕಾರವನ್ನು ಟೀಕಿಸುವುದು ತನ್ನ ಉದ್ದೇಶ ಅಲ್ಲ. ಜನರ ಸಂಕಷ್ಟ ಅರಿತು ಪರಿಹಾರ ಕೈಗೊಳ್ಳಲು ಕೆಲ ಸಲಹೆ-ಸೂಚನೆ ನೀಡಿದ್ದೇನೆ. ಮಠ-ಮಾನ್ಯಗಳ ಕುರಿತು ಮಂಡಿಸಿರುವ ವಿಧೇಯಕವನ್ನು ವಾಪಸ್ ಪಡೆಯುವುದು ಸರಕಾರಕ್ಕೆ ಬಿಟ್ಟ ವಿಚಾರ,” ಎಂದು ಕಾಗೋಡು ತಿಮ್ಮಪ್ಪ ವಿವರಿಸಿದರು.

ಯ ಒಳಾಂಗಣದ ನವೀಕರಣ ಕಾರ‌್ಯ ಪ್ರಗತಿಯಲ್ಲಿದ್ದು, ಇನ್ನಷ್ಟೇ ಪೂರ್ಣವಾಗಬೇಕಿದೆ. ಈ ತಿಂಗಳ ಕೊನೆಯಲ್ಲಿ ನಡೆಸುವ ಬದಲು ಫೆಬ್ರವರಿಯಲ್ಲಿ ಅಧಿವೇಶನ ನಡೆಸುವ ಉದ್ದೇಶ ಇದೆ.”
– ಕಾಗೋಡು ತಿಮ್ಮಪ್ಪ, ಸ್ಪೀಕರ್

Write A Comment