ಮನೋರಂಜನೆ

ಸುಲಭ ಜಯದೊಂದಿಗೆ ಸರಣಿ ಗೆದ್ದ ದೋನಿ ಬಳಗ

Pinterest LinkedIn Tumblr

jasprit-bumrah-yuzvendra-chahal

ಹರಾರೆ: ಯುವಪಡೆಯ ಶಿಸ್ತುಬದ್ಧ ಬೌಲಿಂಗ್‌ ದಾಳಿಯ ಬಲದಿಂದ 2ನೇ ಏಕದಿನ ಪಂದ್ಯದಲ್ಲಿಯೂ ಆತಿಥೇಯ ಜಿಂಬಾಬ್ವೆಯನ್ನು ಸುಲಭವಾಗಿ ಮಣಿಸಿದ ಭಾರತ, 3 ಪಂದ್ಯಗಳ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಇಲ್ಲಿನ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಮೈದಾನದಲ್ಲಿ ನಡೆದ ಸರಣಿಯ ದ್ವಿತೀಯ ಪಂದ್ಯದಲ್ಲಿ ಧೋನಿ ಪಡೆ ಆತಿಥೇಯರನ್ನು 8 ವಿಕೆಟ್‌ಗಳಿಂದ ಬಗ್ಗು ಬಡಿಯಿತು. ಇದರೊಂದಿಗೆ ಜಿಂಬಾಬ್ವೆ ನಾಡಿನಲ್ಲಿ ಟೀಮ್‌ ಇಂಡಿಯಾ ಸತತ 3ನೇ ಕ್ಲೀನ್‌ಸ್ವೀಪ್‌ ಸಾಧನೆಗೆ ಮತ್ತಷ್ಟು ಹತ್ತಿರವಾಯಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಜಿಂಬಾಬ್ವೆ, ಭಾರತದ ಯುವ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿ 34.3 ಓವರ್‌ಗಳಲ್ಲಿ ಕೇವಲ 126 ರನ್‌ಗಳಿಗೆ ಕುಸಿಯಿತು. ಸುಲಭ ಗುರಿ ಬೆನ್ನತ್ತಿದ ಭಾರತ 26.5 ಓವರ್‌ಗಳಲ್ಲಿ 2 ವಿಕೆಟ್‌ ಒಪ್ಪಿಸಿ 129 ರನ್‌ ಗಳಿಸುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿತು.

ಬರಿಂದರ್‌ ಭರ್ಜರಿ ಬೌಲಿಂಗ್‌

ಸರಣಿಯಲ್ಲಿ ಸತತ 2ನೇ ಬಾರಿಯೂ ಟಾಸ್‌ ಗೆದ್ದ ಟೀಮ್‌ ಇಂಡಿಯಾ ನಾಯಕ ಎಂ.ಎಸ್‌.ಧೋನಿ ಬೌಲಿಂಗ್‌ ಸ್ನೇಹಿ ಪಿಚ್‌ನಲ್ಲಿ ಫೀಲ್ಡಿಂಗ್‌ ಆಯ್ದುಕೊಂಡರು. ನಾಯಕ ನಿರ್ಧಾರಕ್ಕೆ ಮೊದಲ ಸಾಥ್‌ ನೀಡಿದ್ದು ಪಂಜಾಬ್‌ನ ಯುವ ಎಡಗೈ ವೇಗಿ ಬರಿಂದರ್‌ ಸ್ರನ್‌. ಇನಿಂಗ್ಸ್‌ನ 5ನೇ ಓವರ್‌ನಲ್ಲಿ ಹ್ಯಾಮಿಲ್ಟನ್‌ ಮಸಕಜ (9)ರನ್ನು ಪೆವಿಲಿಯನ್‌ಗಟ್ಟಿದ ಸ್ರನ್‌, ತಮ್ಮ ಮುಂದಿನ ಓವರ್‌ನಲ್ಲಿ ಪೀಟರ್‌ ಮೂರ್‌ (1) ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿ ಭಾರತಕ್ಕೆ ಆರಂಭಿಕ ಮೇಲುಗೈ ಒದಗಿಸಿದರು. ಜಿಂಬಾಬ್ವೆ ಮೊತ್ತ 39 ರನ್‌ಗಳಾಗುವಷ್ಟರಲ್ಲಿ ಚಾಮು ಚಿಬಾಬ (21) ಬಲಗೈ ವೇಗಿ ಧವಳ್‌ ಕುಲಕರ್ಣಿಗೆ ವಿಕೆಟ್‌ ಒಪ್ಪಿಸಿದರು.

ಚಾಹಲ್‌ ಸ್ಪಿನ್‌ ಮೋಡಿ

ಆರಂಭದಲ್ಲಿ ವೇಗದ ಬೌಲರ್‌ಗಳು ಜಿಂಬಾಬ್ವೆಗೆ ಆಘಾತ ನೀಡಿದರೆ, ಆತಿಥೇಯರ ಮಧ್ಯಮ ಕ್ರಮಾಂಕ ನಡುಗುವಂತೆ ಮಾಡಿದ್ದು ಲೆಗ್‌ಸ್ಪಿನ್ನರ್‌ ಯುಜ್ವೇಂದ್ರ ಚಾಹಲ್‌ ಅವರ ಸ್ಪಿನ್‌ ಮೋಡಿ. ಬಿಗು ದಾಳಿ ನಡೆಸಿದ 26ರ ಹರೆಯದ ಚಾಹಲ್‌ (25ಕ್ಕೆ3), 26ನೇ ಓವರ್‌ನ ಸತತ 2 ಎಸೆತಗಳಲ್ಲಿ ಸಿಕಂದರ್‌ ರಾಜಾ (16), ಮಾಜಿ ನಾಯಕ ಎಲ್ಟನ್‌ ಚಿಗುಂಬುರ (0) ವಿಕೆಟ್‌ ಪಡೆದರು. ಅರ್ಧಶತಕ ಗಳಿಸಿ ಆಸರೆಯಾಗಿದ್ದ ವುಸಿ ಸಿಬಾಂಡ (53) ಕೂಡ ಚಾಹಲ್‌ಗೆ ವಿಕೆಟ್‌ ಒಪ್ಪಿಸಿ ಹೊರ ನಡೆಯುತ್ತಿದ್ದಂತೆ ಜಿಂಬಾಬ್ವೆ ಹೋರಾಟ ಅಂತ್ಯಗೊಂಡಿತು.

ಆರಂಭಿಕರ ಉತ್ತಮ ಆಟ

127 ರನ್‌ಗಳ ಗುರಿಯ ಮುಂದೆ ಭಾರತಕ್ಕೆ ಕರ್ನಾಟಕದ ಆರಂಭಿಕರಾದ ಕೆ.ಎಲ್‌.ರಾಹುಲ್‌ ಹಾಗೂ ಕರುಣ್‌ ನಾಯರ್‌ ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಬಲಗೈ ಜೋಡಿ ಮೊದಲ ವಿಕೆಟ್‌ಗೆ 14.4 ಓವರ್‌ಗಳಲ್ಲಿ 58 ರನ್‌ಗಳ ಜತೆಯಾಟವಾಡಿತು. ಚೊಚ್ಚಲ ಪಂದ್ಯದಲ್ಲೇ ದಾಖಲೆಯ ಶತಕ ಸಿಡಿಸಿದ್ದ ರಾಹುಲ್‌, 33 ರನ್‌ ಗಳಿಸಿ ಅರ್ಧಶತಕದತ್ತ ಮುನ್ನಡೆದಿದ್ದರು. ಆದರೆ ಚಾಮು ಚಿಬಾಬ ದಾಳಿಯಲ್ಲಿ ಬ್ಯಾಟ್‌ನ ಒಳ ಅಂಚಿಗೆ ಬಡಿದ ಚೆಂಡು ಸ್ಟಂಪ್‌ಗೆ ಅಪ್ಪಳಿಸಿದ್ದರಿಂದ ರಾಹುಲ್‌ ಪೆವಿಲಿಯನ್‌ ಸೇರಿಕೊಳ್ಳಬೇಕಾಯಿತು.

ಮತ್ತೊಂದೆಡೆ ಚೊಚ್ಚಲ ಪಂದ್ಯದ ವೈಫಲ್ಯದಿಂದ ಹೊರ ಬರುವ ಯತ್ನದಲ್ಲಿ ಕರುಣ್‌ ನಾಯರ್‌ಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. 10 ರನ್‌ ಗಳಿಸಿದ್ದ ಸಂದರ್ಭದಲ್ಲಿ ಆಫ್‌ಸ್ಟಂಪ್‌ನಿಂದ ಹೊರ ಹೋಗುತ್ತಿದ್ದ ತೆಂಡೈ ಚಟಾರ ಅವರ ಎಸೆತವನ್ನು ಅನವಶ್ಯಕವಾಗಿ ಕೆಣಕಿದ ಕರುಣ್‌ ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತರು. ಆದರೆ ಕರುಣ್‌ ಅದೃಷ್ಟಕ್ಕೆ ಆ ಎಸೆತ ನೋಬಾಲ್‌ ಆಗಿತ್ತು. ಈ ಅವಕಾಶವನ್ನು ಬಳಸಿಕೊಂಡ ಕನ್ನಡಿಗ, ಎಚ್ಚರಿಕೆಯ ಆಟದೊಂದಿಗೆ ಚೊಚ್ಚಲ ಅರ್ಧಶತಕದತ್ತ ದಾಪುಗಾಲಿಟ್ಟರು. ಆದರೆ 39 ರನ್‌ ಗಳಿಸಿದ್ದ ವೇಳೆ ಸಿಕಂದರ್‌ ರಾಜಾ ದಾಳಿಯಲ್ಲಿ ಔಟಾಗಿ ನಿರಾಸೆ ಅನುಭವಿಸಿದರು.

ಔಟಾಗುವ ಮುನ್ನ ಕರುಣ್‌ ನಾಯರ್‌, ಅಂಬಾಟಿ ರಾಯುಡು (ಔಟಾಗದೆ 41) ಜತೆ 2ನೇ ವಿಕೆಟ್‌ಗೆ 72 ಎಸೆತಗಳಲ್ಲಿ 67 ರನ್‌ ಸೇರಿಸಿ ತಂಡದ ಗೆಲುವಿಗೆ ನೆರವಾದರು.

Comments are closed.