ಪಾಟ್ನಾ: ಬಿಹಾರ್ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬರುತ್ತಿದ್ದಂತೆ ಹಿರಿಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ, ನನ್ನ ಮಾತಿಗೆ ನಾನು ಬದ್ಧವಾಗಿದ್ದು, ಒಂದು ವೇಳೆ, ಹೈಕಮಾಂಡ್ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುವುದಾದಲ್ಲಿ ನಾನು ತಡೆಯುವುದಿಲ್ಲ ಎಂದು ಹೇಳಿದ್ದಾರೆ.
ಬಿಹಾರ್ ಚುನಾವಣೆಯಲ್ಲಿ ಜೆಡಿಯು-ಆರ್ಜೆಡಿ ಮೈತ್ರಿಕೂಟ ಜಯಗಳಿಸಿದ್ದರಿಂದ ನಿತೀಶ್ ಕುಮಾರ್ ಅವರನ್ನು ಅಭಿನಂದಿಸಲು ಅವರ ನಿವಾಸಕ್ಕೆ ತೆರಳಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ, ಬಿಜೆಪಿ ಹೈಕಮಾಂಡ್ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುವುದಾದಲ್ಲಿ ನಾನು ಪಕ್ಷವನ್ನು ತಡೆಯುವುದಿಲ್ಲ. ಜ್ಯೋತಿಬಸು ನಂತರ ನಿತೀಶ್ ಕುಮಾರ್ ದೇಶದಲ್ಲಿಯೇ ಅತ್ಯಂತ ಯಶಸ್ವಿ ಮುಖ್ಯಮಂತ್ರಿ ಎಂದು ಹೊಗಳಿದರು.
ಕಳೆದ ಕೆಲ ವಾರಗಳಿಂದ ನಿರಂತರವಾಗಿ ಬಿಜೆಪಿ ಹೈಕಮಾಂಡ್ನೊಂದಿಗೆ ಶತ್ರುಘ್ನ ಸಿನ್ಹಾ ವಾಗ್ದಾಳಿ ನಡೆಸುತ್ತಿರುವುದರಿಂದ ಪಕ್ಷ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ವರದಿ ಮಾಡಿವೆ.
ಬಿಹಾರ್ನಲ್ಲಿ ಬಿಜೆಪಿ ಸೋಲಿಗೆ ಎದುರಾಗಿರುವ ಕಾರಣಗಳನ್ನು ಸಿನ್ಹಾ, ಬಹಿರಂಗವಾಗಿ ಟೀಕಿಸಿದ್ದರಿಂದ ಬಿಜೆಪಿ ಹೈಕಮಾಂಡ್ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ.
ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಗೆಲುವು ಪ್ರಜಾಪ್ರಭುತ್ವದ ಗೆಲುವಾಗಿದೆ ಎಂದು ಬಾಲಿವುಡ್ ನಟ, ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಶ್ಲಾಘಿಸಿದ್ದರು.