ನವದೆಹಲಿ: ಮಹಿಳಾ ಆಯೋಗದ ಅಧ್ಯಕ್ಷರ ನೇಮಕಾತಿ ವಿಷಯ ಸಂಬಂಧ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವಿನ ಹಗ್ಗಜಗ್ಗಾಟದ ನಂತರ ಇಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಸ್ವಾತಿ ಮಳಿವಾಳ್ ಅಧಿಕಾರ ಸ್ವೀಕರಿಸಿದ್ದಾರೆ.
ನಂತರ ತಮ್ಮ ಕಚೇರಿಯಲ್ಲಿ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಗೆ ಸ್ವಾತಿ ಮಳಿವಾಳ್ ಶ್ರದ್ದಾಂಜಲಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ಡಾ.ಕಲಾಂ ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಇದುವರೆದೂ ಒಮ್ಮೆಯೂ ಅವರನ್ನು ಭೇಟಿ ಮಾಡುವ ಅದೃಷ್ಟ ನನಗೆ ಸಿಗಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ತಾವು ಸತ್ತಾಗ ಸರ್ಕಾರ ರಜೆ ಘೋಷಿಸದೇ ಅಂದು ಹೆಚ್ಚಿನ ಸಮಯ ಕೆಲಸ ಮಾಡಬೇಕು ಎಂಬುದು ಡಾ. ಕಲಾಂ ಅವರ ಆಶಯವಾಗಿತ್ತು. ಅವರ ಆಸೆಯಂತೆ ಇಂದು ತಾವು ತಮ್ಮ ಕಚೇರಿಯಲ್ಲಿ ಇಂದು ಹೆಚ್ಚುವರಿ ಕೆಲಸ ಮಾಡುವುದಾಗಿ ಹೇಳಿದರು. ದೆಹಲಿ ಮಹಿಳಾ ಆಯೋಗವನ್ನು ಸದೃಢಗೊಳಿಸುವುದು ತಮ್ಮ ಮುಖ್ಯ ಧ್ಯೇಯವಾಗಿದೆ ಎಂದು ಸ್ವಾತಿ ಮಳಿವಾಳ್ ತಿಳಿಸಿದರು.