ಪಾಟ್ಣಾ: ಬಿಹಾರದ ಮಾಜಿ ಸಿಎಂ ಮತ್ತು ಹಾಲಿ ಸಿಎಂಗಳ ನಡುವೆ ಮಾವಿನ ಹಣ್ಣಿಗಾಗಿ ನಡೆಯುತ್ತಿರುವ ಕಚ್ಚಾಟದಲ್ಲಿ ಮೂರನೇ ವ್ಯಕ್ತಿಯ ಪ್ರವೇಶವಾಗಿದೆ. ವಿಶೇಷವೆಂದರೆ ಅವರು ಕೂಡ ಹಿಂದೆ ಬಿಹಾರ್ ಮುಖ್ಯಮಂತ್ರಿಯಾಗಿದ್ದವರೇ.
ತಾವು ಮಾವಿನ ಹಣ್ಣು ತಿನ್ನಬಾರದೆಂದು ಪೊಲೀಸರನ್ನು ನೇಮಿಸಿದ್ದಾರೆ ಎಂದು ಮಾಂಝಿ ನಿತೀಶ್ ಕುಮಾರ್ ಮೇಲೆ ಕಿಡಿಕಾರುತ್ತಿದ್ದರೆ, ಮಾವು ಮತ್ತು ಲಿಚಿ ಹಣ್ಣುಗಳ ಮೇಲೆ ನಿಜವಾದ ಹಕ್ಕಿರುವುದು ತನಗೆ ಎಂದು ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ವಾದಿಸಲು ಪ್ರಾರಂಭಿಸಿದ್ದಾರೆ.
‘ತಾನು ಸಿಎಂ ಆಗಿದ್ದ ಸಮಯದಲ್ಲಿ ಮಾವು, ಹಲಸು ಮತ್ತು ಲಿಚಿ ಹಣ್ಣುಗಳ ಗಿಡಗಳನ್ನು ನೆಡಲಾಗಿತ್ತು. ಆದ್ದರಿಂದ ಆ ಫಲಗಳ ಮೇಲೆ ನನಗೆ ಮತ್ತು ನನ್ನ ಪತ್ನಿ ರಾಬ್ಡಿ ದೇವಿಗೆ ಮೊದಲ ಹಕ್ಕಿದೆ’, ಎಂದು ಲಾಲು ಹೇಳುತ್ತಿದ್ದಾರೆ.
ಬಿಹಾರ್ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಈಗಲೂ ಸಹ ಮುಖ್ಯಮಂತ್ರಿ ಅಧಿಕೃತ ನಿವಾಸವನ್ನು ತೆರವುಗೊಳಿಸಿಲ್ಲ. ಆ ನಿವಾಸದ ಸುತ್ತು ನೂರಾರು ಮಾವು, ಲಿಚಿ ಮತ್ತು ಹಲಸಿನ ಹಣ್ಣಿನ ಮರಗಳಿದ್ದು ಅವುಗಳಿಂದ ಮಾವಿನ ಹಣ್ಣುಗಳನ್ನು ಯಾರು ಕೂಡ ಕಿತ್ತು ತಿನ್ನದಂತೆ, ಕದ್ದು ತಿನ್ನದಂತೆ ನೋಡಿಕೊಳ್ಳಲು ಬಿಹಾರ್ನ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ 24 ಶಸ್ತ್ರಾಸ್ತ್ರಧಾರಿ ಪೊಲೀಸರನ್ನು ನೇಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.
“ನನ್ನ ಮನೆಗೆ ನನ್ನನ್ನು ಭೇಟಿಯಾಗಲು ದಲಿತರು ಬರುತ್ತಾರೆ. ದಲಿತರು ಮಾವಿನ ಹಣ್ಣು ತಿನ್ನದಂತೆ ಸರ್ಕಾರ ಈ ರಕ್ಷಣೆ ಏರ್ಪಾಟು ಮಾಡಿರಬಹುದು’. ತಾವು ಮತ್ತು ತಮ್ಮ ಬೆಂಬಲಿಗರು ಮರದಲ್ಲಿನ ಮಾವಿನ ಹಣ್ಣುಗಳನ್ನು ಕಿತ್ತು ತಿನ್ನದಂತೆ ನೋಡಿಕೊಳ್ಳಲು ನಿತೀಶ್ ಕುಮಾರ್ 8 ಇನ್ಸಪೆಕ್ಟರ್ ಸೇರಿದಂತೆ 24 ಪೊಲೀಸರನ್ನು ನೇಮಿಸಿದ್ದಾರೆ. ಸಿಎಂ ಈ ಮಟ್ಟಕ್ಕೆ ಇಳಿಯಬಾರದಾಗಿತ್ತು ಎಂದು ಮಾಂಝಿ ಆರೋಪಿಸಿದ್ದ ಮಾಂಝಿ ನಾನು ಮಾವಿನ ಹಣ್ಣನ್ನು ಕದ್ದು ತಿನ್ನುವ ಪರಿಸ್ಥಿತಿಯನ್ನು ತಂದಿಡಬೇಡಿ ಎಂದು ಪೊಲೀಸರಿಗೆ ಹೇಳಿದ್ದರು.
“ಈ ಆರೋಪಗಳು ಕಪೋಲ ಕಲ್ಪಿತ. ಮಾಂಝಿ ಅವರ ನಿವಾಸದಲ್ಲಿ ಪೊಲೀಸರನ್ನು ನಿಯೋಜಿಸಿದ ಬಗ್ಗೆ ನನಗೇನೂ ತಿಳಿದಿಲ್ಲ. ನಾನು ಪೊಲೀಸರನ್ನು ಕಳಿಸಿಯೂ ಇಲ್ಲ. ಏನಿದ್ದರೂ ನಾನು ಆಡಳಿತ ವಿಚಾರದಲ್ಲಿ ನಿರತವಾಗಿದ್ದು, ಬಿಹಾರ ಜನತೆ ಬಗ್ಗೆ ಗಮನಹರಿಸಿದ್ದೇನೆ”, ಎಂದು ನಿತೀಶ್ ಹೇಳಿದ್ದರು.
ಈಗ ಲಾಲು ಪ್ರಸಾದ್ ಯಾದವ್ ಪ್ರವೇಶ ಈ ಕದನವನ್ನು ಮತ್ತಷ್ಟು ರಂಗೇರಿಸಿದೆ.