Uncategorized

ಕೆಪಿಸಿಸಿ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಮೈಸೂರಿನ ಪುಷ್ಪಾ ಅಮರನಾಥ್​ ನೇಮಕ

Pinterest LinkedIn Tumblr


ಬೆಂಗಳೂರು: ಕೆಪಿಸಿಸಿ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಮೈಸೂರಿನ ಪುಷ್ಪಾ ಅಮರನಾಥ್​ ಅವರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಮಹಿಳಾ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೂ ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತರೇ ನೇಮಕವಾದಂತಾಗಿದೆ.

ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಸ್ಥಾನಕ್ಕೆ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪುಷ್ಪಾ ಅಮರನಾಥ ನೇಮಕವಾಗಿರುವುದು ಹಲವರಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ. ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ವಿರುದ್ಧ ಜಗಳಕ್ಕೆ ನಿಂತಿದ್ದ ಲಕ್ಷ್ಮೀ ಹೆಬ್ಬಾಳ್ಕರ್​ ವಿವಾದದ ಕೇಂದ್ರಬಿಂದುವಾಗಿದ್ದರು. ಆ ವೇಳೆ ಅವರು ನೀಡಿದ್ದ ಕೆಲ ಹೇಳಿಕೆಗಳಿಂದಾಗಿ ರಾಜ್ಯ ಕಾಂಗ್ರೆಸ್​ ನಾಯಕರು ಮುಜುಗರ ಅನುಭವಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕೆಪಿಸಿಸಿ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಸಲು ಆಗಿನಿಂದಲೇ ಕಸರತ್ತು ಆರಂಭವಾಗಿತ್ತು.

ರಾಜ್ಯದ ಕೆಲ ಕಾಂಗ್ರೆಸ್​ ನಾಯಕರು ಲಕ್ಷ್ಮೀ ಹೆಬ್ಬಾಳ್ಕರ್​ ಅವರನ್ನೇ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮುಂದುವರೆಸಬೇಕೆಂದು ಹೈಕಮಾಂಡ್​ ಮೇಲೆ ಒತ್ತಡ ಹೇರಿದ್ದರು. ಈ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿಗಳಾಗಿದ್ದ ಕೆಪಿಸಿಸಿ ಕಾರ್ಯದರ್ಶಿಗಳಾದ ನಾಗಲಕ್ಷ್ಮೀ ಚೌಧರಿ, ಶಾರದಾ ಗೌಡ, ಭಾರತಿ ಶಂಕರ್‌, ಮಂಗಳೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶೆರ್ಲೆಟ್‌ ಪಿಂಟೋ ಅವರನ್ನು ಹೈಕಮಾಂಡ್​ ನಾಯಕರು ದೆಹಲಿಗೆ ಕರೆಸಿ ಸಂದರ್ಶನ ನಡೆಸಿದ್ದರು.

ನಾಗಲಕ್ಷ್ಮೀ ಚೌಧರಿಗೆ ನಿರಾಸೆ:

ಐವರು ಆಕಾಂಕ್ಷಿಗಳನ್ನೂ ಪ್ರತ್ಯೇಕವಾಗಿ ಕರೆದು ಅವರ ರಾಜಕೀಯ ಹಿನ್ನೆಲೆ, ರಾಜಕೀಯ ಪ್ರವೇಶಕ್ಕೆ ಕಾರಣ ಹಾಗೂ ಪ್ರೇರಣೆ ಕುರಿತು ಮಾಹಿತಿ ಪಡೆದುಕೊಂಡಿದ್ದರು. ಅಂತಿಮವಾಗಿ ನಾಗಲಕ್ಷ್ಮೀ ಚೌಧರಿ ಮತ್ತು ಪುಷ್ಪಾ ಅಮರನಾಥ್​ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಖಚಿತ ಎನ್ನಲಾಗಿತ್ತು. ಖುದ್ದು ರಾಹುಲ್​ ಗಾಂಧಿಯೇ ಸಂದರ್ಶನ ನಡೆಸಿ ಪುಷ್ಪಾ ಅಮರನಾಥ್​ ಅವರ ಹೆಸರನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನಕ್ಕೆ ಅಂತಿಮಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪುಷ್ಪಾ ಅವರ ಆಯ್ಕೆಯಿಂದ ಅಧ್ಯಕ್ಷೆ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ನಾಗಲಕ್ಷ್ಮೀ ಚೌಧರಿ ಅವರಿಗೆ ಭಾರೀ ನಿರಾಸೆ ಉಂಟಾಗಿದೆ. ಈ ಸ್ಥಾನಕ್ಕಾಗಿ ಸಾಕಷ್ಟು ಲಾಬಿ ನಡೆಸಿದ್ದ ಚೌಧರಿಗೆ ಕೊನೆಗೂ ಹಿನ್ನಡೆಯಾಗಿದೆ. ಪುಷ್ಪಾ ಅಮರನಾಥ್ ಸಿದ್ದರಾಮಯ್ಯನವರ ತವರಿನವರಾಗಿದ್ದು, ಈ ಹಿಂದೆ ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿಯೂ ಅಧಿಕಾರ ನಿರ್ವಹಿಸಿದ್ದರು.

Comments are closed.