ಕುಂದಾಪುರ: ಕುಂದಾಪುರ, ಬೈಂದೂರು ಭಾಗಗಳಲ್ಲಿ ಅವಶ್ಯವಿರುವ ಕಡೆಗಳಲ್ಲಿ ಮರಳು ತೆಗೆಯುವ ಕುರಿತು ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ಕುಂದಾಪುರ ಹಾಗೂ ಬೈಂದೂರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ(ಸಿಐಟಿಯು) ಸಂಘಟನೆಯ ನೇತೃತ್ವದಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಮನೆಗೆ ಕಾರ್ಮಿಕರು ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದರು.
ಬೆಳಿಗ್ಗೆ ಕುಂದಾಪುರದ ವಿನಾಯಕ ಥಿಯೇಟರ್ ಎದುರಿನಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ದಾರಿಯೂದ್ದಕ್ಕೂ ವಿವಿಧ ಗ್ರಾಮ ಘಟಕಗಳ ಕಾರ್ಯಕರ್ತರು ಹೂವನ್ನು ಎಸೆಯುವುದರ ಮೂಲಕ ಪಾದಯಾತ್ರೆಯನ್ನು ಸ್ವಾಗತಿಸಿದರು. ಸಂಜೆ ೪.೩೦ರ ಸುಮಾರಿಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಕಾರ್ಮಿಕರನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಆತ್ಮೀಯವಾಗಿ ಬರಮಾಡಿಕೊಂಡರು.

ಈ ವೇಳೆಯಲ್ಲಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು, ಹತ್ತು ದಿನದೊಳಗೆ ಅವಶ್ಯವಿರುವ ಕಡೆಗಳಲ್ಲಿ ಬಳ್ಕೂರು ಹಾಗೂ ಮಾಬುಕಳದಿಂದ ಮರಳನ್ನು ಪೂರೈಸುವ ಕೆಲಸ ಮಾಡುತ್ತೇನೆ. ದಿನೇ ದಿನೇ ಹೋದಂತೆ ಮರಳಿನ ಪ್ರಮಾಣವನ್ನು ಅಧಿಕ ಮಾಡಿ ಅರ್ಧ ನಡೆದ ಕಾಮಗಾರಿಗಳಿಗೆ ಕೂಡಲೇ ಮರಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಈ ಬಗ್ಗೆ ಈ ಹಿಂದಿನಿಂದಲೂ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಮರಳನ್ನು ಕೊಡಿಸುವುದಕ್ಕಾಗಿ ಸದನದಲ್ಲಿ ಸರ್ಕಾವರನ್ನು ಸೆಳೆಯು ಕೆಲಸವನ್ನು ಮಾಡುತ್ತಾ ಬಂದಿರುವೆ ಎಂದರು.
ಒಂದಷ್ಟು ಮಾತುಕತೆ….
ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಬಿಸಿಲಲ್ಲೇ ೨೫ಕ್ಕೂ ಅಧಿಕ ಕಿ.ಮೀ ದೂರದ ಹಾಲಾಡಿಯಲ್ಲಿರುವ ಶಾಸಕರ ಮನೆಗೆ ಬರುತ್ತಿದ್ದಂತೆಯೇ ಶಾಸಕರು ಓಡೋಡಿ ಬಂದು ಕಾರ್ಮಿಕರನ್ನು ಬರಮಾಡಿಕೊಂಡರು. ಬಳಿಕ ಮರಳು ಸಮಸ್ಯೆಯ ಬಗ್ಗೆ ಉಂಟಾದ ಕಾನೂನು ತೊಡಕುಗಳನ್ನು ಸವಿಸ್ತಾರವಾಗಿ ವಿವರಿಸಲು ಆರಂಭಿಸಿದ ವೇಳೆಯಲ್ಲಿ ಕಾರ್ಮಿಕ ಮುಖಂಡರು ಮಧ್ಯಪ್ರವೇಶಿಸಿ ಸಮಸ್ಯೆಗಳ ಬಗ್ಗೆ ಚುಟುಕಾಗಿ ಹೇಳಿ ಎಂದು ಮನವಿ ಮಾಡಿಕೊಂಡರು. ಕಾರ್ಮಿಕರೆಲ್ಲರೂ ಉರಿಬಿಸಿಲನ್ನೂ ಲೆಕ್ಕಿಸಿದೇ ಪಾದಯಾತ್ರೆಯ ಮೂಲಕ ಬಂದಿದ್ದಾರೆ. ತುಂಬಾ ಸುಸ್ತಾಗಿದ್ದಾರೆ. ನಮ್ಮ ಮನವಿ ಸ್ವೀಕರಿಸಿ ಕಳುಹಿಸಿಕೊಡಿ ಎಂದರು. ಬಳಿಕ ಶಾಸಕರು ಕೆಲ ಭರವಸೆಗಳನ್ನು ಕೊಟ್ಟ ಬಳಿಕ ಕಾರ್ಮಿಕರು ಪಾದಯಾತ್ರೆಯನ್ನು ಅಂತ್ಯಗೊಳಿಸಿದರು.
ಕಾಳಾವರ ಘಟಕದಿಂದ ಊಟೋಪಚಾರ:
ಬೆಳಿಗ್ಗೆ ಆರಂಭವಾದ ಪಾದಯಾತ್ರೆಯು ಮಧ್ಯಾಹ್ನದ ಸುಮಾರಿಗೆ ಕಾಳಾವರ ತಲುಪಿದ್ದು, ಅಲ್ಲಿ ಪಾದಯಾತ್ರೆಯ ಮೂಲಕ ಸಾಗಿ ಬಂದ ಎಲ್ಲಾ ಕಾರ್ಮಿಕರು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಕಾಳಾವರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘವು ಊಟೋಪಚಾರದ ವ್ಯವಸ್ಥೆ ಕಲ್ಪಿಸಿತು.
ದಣಿದವರಿಗೆ ಬೆಲ್ಲ ನೀರು:
ಪಾದಯಾತ್ರೆಯ ಮೂಲಕ ಸಾಗಿಬಂದ ಕಾರ್ಮಿಕರಿಗೆ ಬೆಲ್ಲ ನೀರು ಹಾಗೂ ಲಘುಉಪಹಾರವನ್ನು ನೀಡಲಾಯಿತು. ಅಲ್ಲದೇ ಕಾರ್ಮಿಕರಿಗಾಗಿಯೇ ಶಾಸಕರ ಮನೆಯ ಎದುರು ಬೃಹತ್ ಆಗಿ ಪೆಂಡಾಲ್ ಅನ್ನು ಅಳವಡಿಸಿ ಆಸನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಕೊನೆಗೆ ಶಾಸಕರ ಈ ಎಲ್ಲಾ ವ್ಯವಸ್ಥೆಗಳಿಗೆ ಕಾರ್ಮಿಕ ಮುಖಂಡರು ಧನ್ಯವಾದ ಸಮರ್ಪಿಸಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷರಾದ ಯು. ದಾಸ ಭಂಡಾರಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲಾ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕೆ. ಶಂಕರ್, ಹೆಚ್. ನರಸಿಂಹ, ಮಹಾಬಲ ವಡೇರಹೋಬಳಿ, ರಾಜು ಪಡುಕೋಣೆ, ತಾಲೂಕು ಮುಖಂಡರಾದ ಜಗದೀಶ್ ಆಚಾರ್ಯ, ಸಂತೋಷ ಹೆಮ್ಮಾಡಿ, ರಮೇಶ್ ಗುಲ್ವಾಡಿ, ಅರುಣ್ ಕುಮಾರ್ ಗಂಗೊಳ್ಳಿ, ವಿಜಯೇಂದ್ರ ಕೋಣಿ, ಚಿಕ್ಕ ಮೊಗವೀರ, ಸುಧಾಕರ ಕುಂಭಾಶಿ, ಪ್ರಶಾಂತ್ ಸಳ್ವಾಡಿ, ಶ್ರೀನಿವಾಸ ಪೂಜಾರಿ, ರಾಮಚಂದ್ರ ನಾವಡ ಮೊದಲಾದವರು ಪಾದಯಾತ್ರೆಯ ನೇತೃತ್ವ ವಹಿಸಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.