ಕರಾವಳಿ

ಕೊಲ್ಲೂರು ಠಾಣೆ ವ್ಯಾಪ್ತಿಯಲ್ಲಿ‌ ಮನೆ ಕಳವು | ಆರೋಪಿ ದೋಷಿಯೆಂದು ತೀರ್ಪು, ಶಿಕ್ಷೆ ಪ್ರಕಟ | ಬಿ.ಎನ್.ಎಸ್ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ

Pinterest LinkedIn Tumblr

ಕುಂದಾಪುರ: ಕಳೆದ ಆರು ತಿಂಗಳ ಹಿಂದೆ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳವು ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಮೇಲಿನ ದೋಷಾರೋಪಣೆಗಳು ಸಾಭೀತಾಗಿದ್ದು ಆತ ಅಪರಾಧಿಯೆಂದು ಕುಂದಾಪುರದ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಬಿ. ಅವರು ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣದಲ್ಲಿ ಕಾರ್ಕಳ ಮೂಲದ ಉಮಾನಾಥ ಪ್ರಭು (59) ಅಪರಾಧಿಯಾಗಿದ್ದು ಪ್ರಸ್ತುತ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಕಳವು ಪ್ರಕರಣದಲ್ಲಿ 1 ವರ್ಷ 6 ತಿಂಗಳು ಕಠಿಣ ಕಾರಾಗ್ರಹ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಲಾಗಿದೆ.

ಪ್ರಕರಣದ ವಿವರ: 2025 ಮೇ ತಿಂಗಳಿನಲ್ಲಿ ಕೊಲ್ಲೂರು ಠಾಣಾ ವ್ಯಾಪ್ತಿಯ ಇಡೂರು-ಕುಂಜ್ಞಾಡಿ ಗ್ರಾಮದ ಜನತಾ ಕಾಲೋನಿಯ ಮನೆಯೊಂದರಲ್ಲಿ ರಾತ್ರಿ ಯಾರೂ ಇಲ್ಲದ ವೇಳೆ ಎರಡು ಚಿನ್ನದ ಬಳೆಗಳ ಕಳ್ಳತನ ನಡೆದಿದ್ದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಜಾಡು ಹಿಡಿದ ಪೊಲೀಸರು ಜೂ.17ರಂದು ಅಜೆಕಾರು ಎಂಬಲ್ಲಿ ಆರೋಪಿಯನ್ನು ಬಂಧಿಸಿದ್ದರು.

ಅಭಿಯೋಜನೆ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಉದಯ್ ಕುಮಾರ್ ಬಿ.ಎ. ವಾದಿಸಿದ್ದರು. ಆರೋಪಿಯು ರೂಢಿಗತವಾಗಿ ಕಳ್ಳತನ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದು ಆತನಿಗೆ ಬಿ.ಎನ್.ಎಸ್ ಕಾಯ್ದೆಯಡಿ ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಸಹಾಯಕ ಸರಕಾರಿ ಅಭಿಯೋಜಕ ಉದಯ್ ಕುಮಾರ್ ಬಿ.ಎ. ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಒಟ್ಟು 20 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಬೆರಳು‌ ಮುದ್ರೆ ಘಟಕದ ಇನ್ಸ್‌ಪೆಕ್ಟರ್ ಮೋಹನ ಕುಮಾರಿ ಅವರು ನೀಡಿದ ಆರೋಪಿಯ ಬೆರಳಚ್ಚು ವಿಚಾರಣೆ ವೇಳೆ ಪ್ರಮುಖ ಸಾಕ್ಷಿಯಾಗಿತ್ತು. ಮೊದಲಿಗೆ ಅಂದಿನ ಕೊಲ್ಲೂರು ಠಾಣೆ ತನಿಖಾ ವಿಭಾಗದ ಪಿಎಸ್ಐ ಸುಧಾರಾಣಿ ಎಫ್.ಐ.ಆರ್ ದಾಖಲಿಸಿಕೊಂಡು‌ ಹೇಳಿಕೆಗಳು, ಮಹಜರು ಪ್ರಕ್ರಿಯೆ ನಡೆಸಿದ್ದರು. ಕಾನೂನು ಸುವ್ಯವಸ್ಥೆ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪಿ ಬಂಧನ ಹಾಗೂ ಕಾನೂನು ಪ್ರಕ್ರಿಯೆಯಲ್ಲಿ ಠಾಣಾ ಸಿಬ್ಬಂದಿಗಳಾದ ರಾಘವೇಂದ್ರ, ನಾಗೇಂದ್ರ, ರತ್ನಾಕರ, ಉದಯಗೌಡ, ಸುರೇಶ್, ನರಸಿಂಹ, ರಾಮ ಪೂಜಾರಿ, ಗುಣಪಾಲ್, ಸಂತೋಷ್, ಠಾಣೆಯ ನ್ಯಾಯಾಲಯ ಕರ್ತವ್ಯ ಸಿಬ್ಬಂದಿ ನವೀನ್ ಕುಮಾರ್ ಎಸ್., ಬೆರಳಚ್ಚು ವಿಭಾಗದ ಸಿಬ್ಬಂದಿ ವಿನಾಯಕ ಮೇಸ್ತ ಮೊದಲಾದವರು ಪಾಲ್ಘೊಂಡಿದ್ದರು.

ಬಿ.ಎನ್.ಎಸ್. ಕಾಯ್ದೆಯಡಿ ಪ್ರಕರಣ ದಾಖಲು: ಕಳೆದ ವರ್ಷ ಜಾರಿಗೆ ಬಂದ ‘ಭಾರತೀಯ ನ್ಯಾಯ ಸಂಹಿತೆ’ (ಬಿ.ಎನ್.ಎಸ್) ಕಾಯ್ದೆಯಡಿ ಈ ಪ್ರಕರಣ ದಾಖಲಾಗಿದ್ದು ಆರೋಪಿಗೆ ಜಾಮೀನು ಸಿಗದ ಹಿನ್ನೆಲೆ ಆತ ನ್ಯಾಯಾಂಗ ಬಂಧನದಲ್ಲಿಯೇ ಇದ್ದ.  ಹೀಗಾಗಿ ನ್ಯಾಯಾಲಯದಲ್ಲಿ ಶೀಘ್ರ ವಿಚಾರಣೆ ನಡೆಸಿದ್ದು ಸಾಕ್ಷ್ಯಗಳನ್ನು ಸರಿಯಾದ ಸಮಯಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯದಲ್ಲಿ 2025  ಆಗಸ್ಟ್ 1 ರಿಂದ ಸಾಕ್ಷ್ಯಗಳ ವಿಚಾರಣೆ ನಡೆಸಲಾಗಿದ್ದು ಸುಮಾರು ಎರಡೂವರೆ ತಿಂಗಳಿನಲ್ಲಿ ಪ್ರಕ್ರಿಯೆ ಮುಗಿಸಲಾಗಿತ್ತು. ಕಳ್ಳತನ ಪ್ರಕರಣವೊಂದರಲ್ಲಿ ಅತೀ ಶೀಘ್ರವಾಗಿ ಬಿ.ಎನ್.ಎಸ್. ಕಾಯ್ದೆಯಡಿ ವಿಚಾರಣೆ ಮುಗಿಸಿ ಆರೋಪಿಗೆ ಶಿಕ್ಷೆ ವಿಧಿಸಿರುವುದು ವಿಶೇಷವಾಗಿದೆ.  ಹೊಸ ಕಾಯ್ದೆಯಲ್ಲಿ ತಾಂತ್ರಿಕ ಸಾಕ್ಷಿಗಳ ವಿಚಾರಣೆಗೆ ಹೆಚ್ಚಿನ ಮಹತ್ವವಿರುವುದು ಇಲ್ಲಿ ಗಮನಾರ್ಹ.

(ವರದಿ- ಯೋಗೀಶ್ ಕುಂಭಾಸಿ)

Comments are closed.