https://youtu.be/WijbJvnf5fM
ಡೆಹ್ರಾಡೂನ್: ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಬ್ಲಾಕ್ ಬಸ್ಟರ್ ಚಿತ್ರ ಬಾಹುಬಲಿ ಕೇವಲ ಪ್ರೇಕ್ಷಕರನ್ನು ಮಾತ್ರವಲ್ಲ ರಾಜಕೀಯ ಪಕ್ಷಗಳ ಮೇಲೂ ತನ್ನ ಪ್ರಭಾವವನ್ನು ಬೀರಿದ್ದು, ಯಾವ ಮಟ್ಟಿಗೆ ಅಂದರೆ ಪ್ರಸ್ತುತ ನಡೆಯುತ್ತಿರುವ ಉತ್ತರಾಖಂಡ ಚುನಾವಣೆಯಲ್ಲಿ ಬಾಹುಬಲಿ ಚಿತ್ರದ ಕ್ಲಿಪಿಂಗ್ ಳನ್ನೇ ಗ್ರಾಫಿಕ್ಸ್ ಮಾಡಿ ಪ್ರಚಾರ ನಡೆಸಲಾಗುತ್ತಿದೆ.
ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ಕೂಡ ಆಗಿರುವ ಹರೀಶ್ ರಾವತ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಉತ್ತರಾಖಂಡದ ಇತರೆ ರಾಜಕೀಯ ಮುಖಂಡರನ್ನು ಬಳಕೆ ಮಾಡಿ ಅಭಿಮಾನಿಗಳು ತಯಾರಿಸಿರುವ ಈ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿವೆ. ವಿಡಿಯೋದಲ್ಲಿ ಬಾಹುಬಲಿಯಾಗಿ ಹರೀಶ್ ರಾವತ್, ಪ್ರಧಾನಿ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು ಕಾಣಿಸಿಕೊಂಡಿದ್ದಾರೆ.
ಬಾಹುಬಲಿ ಚಿತ್ರದಲ್ಲಿ ನಟ ಪ್ರಭಾಸ್ ಶಿವಲಿಂಗವನ್ನು ಹೊತ್ತು ಸಾಗಿದರೆ, ಒಂದೂವರೆ ನಿಮಿಷದ ಈ ವಿಡಿಯೋ ತುಣುಕಿನಲ್ಲಿ ಸಿಎಂ ಹರೀಶ್ ರಾವತ್ ಅವರು ಉತ್ತರಾಖಂಡ ರಾಜ್ಯದ ಜವಾಬ್ದಾರಿಯನ್ನು ತಮ್ಮ ಭುಜದ ಮೇಲೆ ಹಾಕಿಕೊಂಡು ರಾಜ್ಯವನ್ನು ರಕ್ಷಿಸಿ ಹೊತ್ತು ಸಾಗುತ್ತಿರುವಂತೆ ಮತ್ತು ಅದನ್ನು ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ವಿಜಯ್ ಬಹುಗುಣ ಅವರು ಆಶ್ಚರ್ಯದಿಂದ ವೀಕ್ಷಿಸುತ್ತಿರುವಂತೆ ಗ್ರಾಫಿಕ್ಸ್ ಮಾಡಲಾಗಿದೆ.
ಈ ವಿಡಿಯೋವನ್ನು ಯುಪಿ/ಯುಕೆ ಎಂಬ ಫೇಸ್ ಬುಕ್ ಖಾತೆದಾರರು ಅಪ್ಲೋಡ್ ಮಾಡಿದ್ದು, ಈವರೆಗೂ ಈ ವಿಡಿಯೋವನ್ನು 2. 69,048 ಖಾತೆದಾರರು ವೀಕ್ಷಿಸಿದ್ದಾರೆ. ಅಂತೆಯೇ 5, 912 ಮಂದಿ ಶೇರ್ ಮಾಡಿದ್ದಾರೆ.
ಉತ್ತರಾಖಂಡ ವಿಧಾನಸಭೆ ಚುನಾವಣೆ ನಿಮಿತ್ತ ವಿವಿಧ ರಾಜಕೀಯ ಪಕ್ಷಗಳ ಪ್ರಚಾರ ವ್ಯಾಪಕವಾಗಿದ್ದು, 70 ಕ್ಷೇತ್ರಗಳಿಗೆ ಇದೇ ಫೆಬ್ರವರಿ 15ರಂದು ಉತ್ತರಾಖಂಡದಲ್ಲಿ ಮತದಾನ ನಡೆಯಲಿದೆ.
Comments are closed.