ತಿರುವನಂತಪುರಂ: ಇತಿಹಾಸ ಪ್ರಸಿದ್ಧ ಶಬರಿಮಲೆ ದೇಗುಲಕ್ಕೆ ಪ್ರವೇಶ ಮಾಡಿದ್ದ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದಿದ್ದ ದಲಿತ ನಾಯಕಿ ಬಿಂದು ಅಮ್ಮಣ್ಣಿ ಮೇಲೆ ಬುಧವಾರ ದಾಳಿ ನಡೆದಿದೆ.
ಕಲ್ಲಿಕೋಟೆ ಬೀಚ್ನಲ್ಲಿ ಬಿಂದು ಅಮ್ಮಣ್ಣಿ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಬಿಂದು ಮೇಲಿನ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳೆಯರಿಗೂ ಶಬರಿಮಲೆ ದೇಗುಲಕ್ಕೆ ಪ್ರವೇಶ ಕಲ್ಪಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪಿತ್ತ ಬಳಿಕ, 2019ರಲ್ಲಿ ಬಿಂದು ಅಮ್ಮಣ್ಣಿ ಅಯ್ಯಪ್ಪ ಮಾಲೆ ಧರಿಸಿ ದೇಗುವಲವನ್ನು ಪ್ರವೇಶ ಮಾಡಿದ್ದರು. ಈ ಘಟನೆ ಬಳಿಕ ಬಿಂದು ಮೇಲೆ ಹಲ್ಲೆ ನಡೆದಿದ್ದು ಇದೀಗ ಕಲ್ಲಿಕೋಟೆಯ ಸಮುದ್ರ ತೀರದಲ್ಲಿ ಬಿಂದು ಮೇಲೆ ಮತ್ತೆ ದಾಳಿ ನಡೆದಿದೆ.
ಬಿಂದು ಮೇಲೆ ವ್ಯಕ್ತಿಯೊಬ್ಬ ದಾಳಿ ನಡೆಸುವ ಹಾಗೂ ದಾಳಿಯಿಂದ ಬಿಂದು ಸ್ವಯಂ ರಕ್ಷಣೆ ಮಾಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೊಬ್ಬ ವ್ಯಕ್ತಿ ಬಂದು ಹಲ್ಲೆ ಮಾಡುತ್ತಿದ್ದವನ್ನು ಹಿಡಿದು ಎಳೆಯುವ ದೃಶ್ಯಾವಳಿ ಕೂಡ ವಿಡಿಯೋದಲ್ಲಿ ದಾಖಲಾಗಿದೆ. ಘಟನೆ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಂದು ಅಮ್ಮಣ್ಣಿ, ‘ನನ್ನ ಮೇಲೆ ಈ ಥರ ಹಲ್ಲೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ನನ್ನ ಮೇಲೆ ದಾಳಿಗಳು ನಡೆದಿವೆ. ಹಿಂದುತ್ವ ಸಂಘಟನೆಗಳು ನನ್ನನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿವೆ. ನಾನು ನನ್ನ ವಕೀಲರೊಂದಿಗೆ ಮಾತುಕತೆ ನಡೆಸಲು ಬೀಚ್ಗೆ ಬಂದಿದ್ದೆ. ಈ ವೇಳೆ ಆಗಂತುಕನೊಬ್ಬ ಏಕಾಏಕಿ ನನ್ನ ಸ್ಕೂಟರ್ ಅಡ್ಡಗಟ್ಟಿದ. ಬೈಗುಳ ಶುರುಮಾಡಿದ ಆತ ನನ್ನ ಮೇಲೆ ಹಲ್ಲೆ ಮಾಡಿದ. ಸಾರ್ವಜನಿಕರು ಮಧ್ಯ ಪ್ರವೇಶ ಮಾಡಿದ ಬಳಿಕ ಆತ ಓಡಿ ಹೋದ ಎಂದು ಬಿಂದು ವಿವರಿಸಿದ್ದಾರೆ.
ಮಹಿಳೆಯರೂ ಕೂಡ ಶಬರಿಮಲೆ ದೇಗುಲಕ್ಕೆ ಪ್ರವೇಶ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದಾದ ಬಳಿಕ 2019ರ ಜನವರಿ 2 ರಂದು ಬಿಂದು ಅಮ್ಮಣ್ಣಿ ಶಬರಿಮಲೆ ದೇಗುಲ ಪ್ರವೇಶ ಮಾಡಿದ್ದರು. ಇದಾದ ಬಳಿಕ ಅಲ್ಲಿ ಗಲಭೆ ಉಂಟಾಗಿತ್ತು.ಅನಂತರ ದೇಗುಲವನ್ನು ಶುದ್ಧೀಕರಣ ಮಾಡುವ ಪ್ರಕ್ರಿಯೆಯೂ ನಡೆದಿತ್ತು.
Comments are closed.