ಕರಾವಳಿ

ವಂಚನೆ ಪ್ರಕರಣದ ಆರೋಪಿಗಳ ಐಷಾರಾಮಿ ಕಾರು ಮಾರಾಟ ಪ್ರಕರಣ : ಮತ್ತಿಬ್ಬರು ಪೊಲೀಸರ ಅಮಾನತು

Pinterest LinkedIn Tumblr

ಮಂಗಳೂರು : ವಂಚನೆ ಪ್ರಕರಣದ ಆರೋಪಿಗಳ ಬಳಿಯಿದ್ದ ಐಷಾರಾಮಿ ಕಾರನ್ನು ಸಿಸಿಬಿ ಪೊಲೀಸರು ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮತ್ತಿಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಈ ಆರೋಪದಲ್ಲಿ ನಾರ್ಕೊಟಿಕ್ ಆಯಂಡ್ ಇಕಾನಮಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಾಮಕೃಷ್ಣ ಮತ್ತು ಪ್ರಸ್ತುತ ಚಿಕ್ಕಮಗಳೂರು ಡಿಸಿಆರ್‌ಬಿ ಎಸ್ಸೈ ಕಬ್ಬಾಳ್ ‌ರಾಜ್ ಎಂಬವರನ್ನು ಫೆ.27ರಂದು ಅಮಾನತುಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದರು.

ಇದೀಗ ಕಾರು ಮಾರಾಟ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸಿಸಿಬಿ ಹೆಡ್‌ಕಾನ್ಸ್‌ಟೇಬಲ್ ಆಶಿತ್ ಡಿಸೋಜ ಮತ್ತು ರಾಜಾ ಎಂಬವರನ್ನು ಮಂಗಳೂರು ಪೊಲೀಸ್ ಕಮಿನಷರ್ ಎನ್. ಶಶಿಕುಮಾರ್ ಅವರು ಅಮಾನತುಗೊಳಿಸಿದ್ದಾರೆ. ಇದರೊಂದಿಗೆ ಕಾರು ಮಾರಾಟ ಪ್ರಕರಣದಲ್ಲಿ ಅಮಾನತುಗೊಂಡವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಜನರಿಗೆ ಹಣ ದ್ವಿಗುಣ ಮಾಡಿಕೊಡುವ ಆಮಿಷವೊಡ್ಡಿ 30 ಕೋಟಿ ರೂಪಾಯಿ ವಂಚಿಸಿದ್ದ ಕನ್ಸ್‌ಸ್ಟ್ರಕ್ಷನ್ ಆಯಂಡ್ ಬಿಲ್ಡರ್ ಪ್ರೈ.ಲಿ. ಸಂಸ್ಥೆಯೊಂದರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಸಿಬಿ ಪೊಲೀಸರು, ವಂಚನೆ ಆರೋಪದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳಿಂದ ಜಾಗ್ವಾರ್, ಬಿಎಂಡಬ್ಲೂ, ಪೋರ್ಷ್ ಸೇರಿ ಮೂರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಪ್ರಾಥಮಿಕ ಹಂತದ ತನಿಖೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್‌ ಗಾಂವ್ಕರ್‌ ಅವರು ನಡೆಸಿದ್ದು, ಅದರ ವರದಿಯಲ್ಲಿ ಕಮಿಷನರ್‌ಗೆ ಸಲ್ಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅಪರಾಧ ಪತ್ತೆದಳ ಹಿಂದಿನ ಎಸ್‌ಐ ಕಬ್ಬಳ್‌ರಾಜ್‌, ಸಿಸಿಬಿಯ ಆಶಿತ್‌, ರಾಜ ಹಾಗೂ ನಾರ್ಕೊಟಿಕ್‌ ಆಯಂಡ್‌ ಎಕನಾಮಿಕ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ರಾಮಕೃಷ್ಣ ಅವರ ಹೆಸರು ಹಾಗೂ ಬ್ರೋಕರ್‌ ದಿವ್ಯದರ್ಶನ್‌ ಹೆಸರನ್ನು ಉಲ್ಲೇಖ ಮಾಡಲಾಗಿತ್ತು.

ಅಮಾನತುಗೊಂಡ ಆರೋಪಿಗಳಾದ ಕಬ್ಬಾಳ್ ‌ರಾಜ್, ರಾಮಕೃಷ್ಣ, ಆಶಿತ್ ಡಿಸೋಜ, ರಾಜಾ ಹಾಗೂ ಮಧ್ಯವರ್ತಿ ದಿವ್ಯದರ್ಶನ್‌ಗೆ ರಾಜ್ಯ ಸಿಐಡಿ (ಕೇಂದ್ರ ತನಿಖಾ ದಳ) ನೋಟಿಸ್ ನೀಡಿದ್ದು, ನಾಲ್ಕು ಮಂದಿಯೂ ವಿಚಾರಣೆಗಾಗಿ ಬೆಂಗಳೂರು ಸಿಐಡಿ ಕಚೇರಿಗೆ ತೆರಳಬೇಕಿದೆ.

ಈ ತನಿಖೆಯನ್ನು ಸಿಐಡಿ ತನಿಖೆ ನೀಡಲಾಗಿದ್ದು, ಸಿಐಡಿ ಎಸ್‌ಪಿ ರೋಹಿಣಿ ಕಟ್ಟೋಚ್‌‌ ಅವರ ನೇತೃತ್ವದ ತಂಡ ಪ್ರಾರಂಭಿಸಿದೆ. ಪ್ರಕರಣದ ತನಿಖಾಧಿಕಾರಿ ಸಿಐಡಿ ಎಸ್ಪಿ ರೋಹಿಣಿ ಕಟ್ಟೋಚ್ ನೇತೃತ್ವದ ತಂಡ ಮಂಗಳೂರಿಗೆ ಆಗಮಿಸಿ ತನಿಖೆ ನಡೆಸುವ ಸಾಧ್ಯತೆಯಿದೆ. ಬಳಿಕ ತನಿಖಾಧಿಕಾರಿ ಸಮಗ್ರ ವರದಿಯನ್ನು ಸಿಐಡಿ ಡಿಜಿಗೆ ಸಲ್ಲಿಸಲಿದ್ದಾರೆ. ಆ ವರದಿಯನ್ನು ಸಿಐಡಿ ಡಿಜಿ ರಾಜ್ಯ ಡಿಜಿಪಿ ಪ್ರವೀಣ್ ಸೂದ್‌ರಿಗೆ ಸಲ್ಲಿಸಲಿದ್ದಾರೆ.

Comments are closed.