ಮಂಗಳೂರು, ಮಾರ್ಚ್.೦2: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರುಗಳ ಚುನಾವಣೆಯು ಇಂದು ದಿನಾಂಕ: 02-03-2021 ರಂದು ಮಧ್ಯಾಹ್ನ 1 ಗಂಟೆಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ.
ಹಿಂದಿನ ಮೇಯರ್ ಆಗಿ ದಿವಾಕರ್ ಪಾಂಡೇಶ್ವರ, ಉಪ ಮೇಯರ್ ಆಗಿ ವೇದಾವತಿ ಅವರು 2020ರ ಫೆ. 28ರಂದು ಆಯ್ಕೆಯಾಗಿದ್ದರು. ಈ ವರ್ಷ ಫೆ. 28ಕ್ಕೆ ಅವರ ಅವಧಿ ಮುಕ್ತಾಯಗೊಂಡಿದ್ದು, ಈ ಹಿನ್ನೆಲೆಯಲ್ಲಿ ನೂತನ ಮೇಯರ್/ಉಪ ಮೇಯರ್ ಆಯ್ಕೆ ಮಾರ್ಚ್ 2ರಂದು ನಡೆಸಲು ತೀರ್ಮಾನಿಸಲಾಗಿದೆ.
ಮೇಯರ್ ಪ್ರೇಮಾನಂದ ಶೆಟ್ಟಿ – ಉಪಮೇಯರ್ ಸುಮಂಗಲಾ ರಾವ್ ಖಚಿತ:
ಮಂಗಳೂರು ಮಹಾನಗರ ಪಾಲಿಕೆಯ ಈ ಬಾರಿಯ ಮೇಯರ್/ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಈಗಾಗಲೇ ಪ್ರಕಟಗೊಂಡಿದ್ದು, ಮೇಯರ್ ಸಾಮಾನ್ಯ ಮತ್ತು ಉಪ ಮೇಯರ್ ಸ್ಥಾನವು ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ.
ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಹಿರಿಯ ಸದಸ್ಯರಾದ ಪ್ರೇಮಾನಂದ ಶೆಟ್ಟಿ ಅವರ ಹೆಸರನ್ನು ಅಂತಿಮ ಮಾಡಲಾಗಿದೆ. ಅದೇ ರೀತಿ ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಅಧಾರದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಅಕಾಂಕ್ಷಿಗಳಿದ್ದರೂ.. ಕೊನೆ ಗಳಿಗೆಯಲ್ಲಿ ಕುಂಜತ್ಬೈಲ್ ಸೌತ್ ಬಿಜೆಪಿ ಸದಸೈ ಸುಮಂಗಲಾ ರಾವ್ ಅವರನ್ನು ಅಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಅಧಿಕೃತ ಫಲಿತಾಂಶ ಚುನಾವಣೆಯ ಬಳಿಕ ಅಂದರೆ ಮಧ್ಯಾಹ್ನ 1.30ರ ಸುಮಾರಿಗೆ ಹೊರ ಬೀಳಲಿದೆ.
ಮಂಗಳೂರು ಪಾಲಿಕೆ ಚುನಾವಣೆಯು 2019ರ ನ. 12ರಂದು ನಡೆದು, ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಎಸ್ಡಿಪಿಐ 2 ಸ್ಥಾನ ಪಡೆದಿತ್ತು. ಆದರೆ ಈ ವೇಳೆ ಮೇಯರ್-ಉಪಮೇಯರ್ ಮೀಸಲಾತಿ ವಿಚಾರದಲ್ಲಿ ಮೂಡಿದ್ದ ಗೊಂದಲದಿಂದಾಗಿ 3 ತಿಂಗಳವರೆಗೆ ಪಾಲಿಕೆ ಸದಸ್ಯರಿಗೆ ಅಧಿಕಾರ ದೊರೆತಿರಲಿಲ್ಲ.
Comments are closed.