ಕರಾವಳಿ

ಗುರು ಹಾದಿಯಲ್ಲಿ ಶಿಷ್ಯರ ಹೆಜ್ಜೆ: ದಲಿತ ಕೇರಿಗೆ ಪೇಜಾವರ ಶ್ರೀ ಭೇಟಿ

Pinterest LinkedIn Tumblr

ಉಡುಪಿ: ಹಿಂದೂ ಸಮಾಜದಲ್ಲಿದ್ದ ಅಸ್ಪ್ರಶ್ಯತೆಯನ್ನು ನಿವಾರಿಸಿ ಸಶಕ್ತ ಸದೃಢಗೊಳಿಸುವ ನಿಮಿತ್ತ ದೇಶದ ಹಲವೆಡೆ ದಲಿತರ ಕಾಲೊನಿಗಳಿಗೆ ಭೇಟಿ ನೀಡಿ ಕ್ರಾಂತಿಕಾರ್ಯ ನಡೆಸಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಂಚಲನ ಮೂಡಿಸಿದ್ದರು.

ಇದೀಗ ಅವರ ಶಿಷ್ಯ ಶ್ರೀ ವಿಶ್ವಪ್ರಸನ್ನ ತೀರ್ಥರೂ ಗುರುಗಿನ ದಾರಿಯಲ್ಲಿ ಹೆಜ್ಜೆ ಹಾಕುವ ಮಹತ್ವದ ನಿರ್ಧಾರ ಕೈಗೊಂಡಿದ್ದು ಭಾನುವಾರ ಉಡುಪಿಯ ಕೊಡವೂರು ಗ್ರಾಮದ ಪಾಳೆಕಟ್ಟೆ ಎಂಬಲ್ಲಿ ಪರಿಶಿಷ್ಟರ ಬಡಾವಣೆಗೆ ತಮ್ಮ ಮೊದಲ ಭೇಟಿ ನೀಡಿ ಹಿಂದೂ ಸಮಾಜ ಸಂಘಟನೆಗೆ ತಾವೂ ಸಿದ್ಧ ಎಂದಿದ್ದಾರೆ .

ಅಯೋಧ್ಯೆ ರಾಮ ಮಂದಿರ ನಿರ್ಮಾಣವನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಭಾರತದಲ್ಲಿ ಹಿಂದೂ ಸಮಾಜವನ್ನು ಸಂಘಟನಾತ್ಮಕವಾಗಿ ಸಶಕ್ತ ಮತ್ತು ಸುದೃಢಗೊಳಿಸಬೇಕಾಗಿದೆ . ಈ ಆಶಯದೊಂದಿಗೆ ಸುಮಾರು 120 ಮನೆಗಳನ್ನು ಹೊಂದಿರುವ ಈ ಬಡಾವಣೆಗೆ ಭೇಟಿ ನೀಡಿ 400 ರಷ್ಟು ದಲಿತ ಬಂಧುಗಳಲ್ಲಿ ಹಿಂದವಃ ಸೋದರಾ ಸರ್ವೇ ಎಂಬ ಗುರು ವಿಶ್ವೇಶತೀರ್ಥ ಸಂದೇಶದಂತೆ ವಿಶ್ವಾಸ ತುಂಬಿದರು .

ಶ್ರೀಗಳು ಆಗಮಿಸುವ ಬಗ್ಗೆ ಸ್ಥಳೀಯ ನಗರಸಭಾ ಸದಸ್ಯ ಮತ್ತು ಸಂಘ ಪರಿವಾರದ ಸ್ವಯಂ ಸೇವಕ ವಿಜಯ ಕೊಡವೂರು ಮತ್ತು ಶ್ರೀಗಳ ಆಪ್ತರಾಗಿರುವ ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಎರಡು ದಿನಗಳ ಮೊದಲೇ ಕಾಲೊನಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದರು. ಅದರಂತೆ ಉತ್ಸಾಹ ಮತ್ತು ಸಂತೋಷದಿಂದ ನಿವಾಸಿಗಳು ಕಾಲೊನಿಯ ರಸ್ತೆಗಳಲ್ಲಿ ತಳಿರು ತೋರಣ ರಂಗೋಲಿ ಹಾಕಿ ಸಿಂಗರಿಸಿದ್ದರು.ಸಾಮೂಹಿಕ ಭಜನೆಯೊಂದಿಗೆ ಶ್ರೀಗಳನ್ನು ಬರಮಾಡಿಕೊಂಡರು. ಬಳಿಕ ಅಲ್ಲಿನ ಮೂರು ಮನೆಗಳಿಗೆ ಭೇಟಿ ನೀಡಿ ರಾಮದೀಪಗಳನ್ನು ಬೆಳಗಿಸಿ ಮನೆ ಮಂದಿಯೊಂದಿಗೆ ಕುಶಲೋಪರಿ ನಡೆಸಿದ ಶ್ರೀಗಳು ಶ್ರೀರಾಮ ಜಯರಾಮ ಜಯಜಯರಾಮ ಮಂತ್ರದೀಕ್ಷೆ ಕೊಟ್ಡು ನಿತ್ಯ ಶುದ್ಧ ಮನಸ್ಸಿನಿಂದ ಈ ಮಂತ್ರ ಜಪಿಸುವಂತೆ ತಿಳಿಸಿದರು. ಮೂರು ಮನೆಯವರು ಶ್ರೀಗಳಿಗೆ ಫಲ ಪುಷ್ಟ ಸಹಿತ ಭಕ್ತಿ ಗೌರವ ಅರ್ಪಿಸಿದರು. ಶ್ರೀ ಮಠದ ವತಿಯಿಂದ ಎಲ್ಲ ಮನೆಗಳಿಗೆ ದೀಪ ಒದಗಿಸಿ ರಾಮದೀಪ ಬೆಳಗಿಸಲಾಯಿತು. ಅಲ್ಲಿಂದ ಬಡಾವಣೆಯ ಶ್ರೀ ಮೂಕಾಂಬಿಕಾ ಭಜನಾ ಮಂದಿರಕ್ಕೆ ಬಂದು ಶ್ರೀ ದೇವಿಯ ಮುಂಭಾಗದಲ್ಲಿ ದೀಪ ಹಚ್ಚಿ ಮಂಗಳಾರತಿ ಬೆಳಗಿದರು‌‌. ಮುಂಭಾಗದ ಅಂಗಣದಲ್ಲಿ ಸಮಸ್ತ ನಿವಾಸಿಗಳಿಗೆ ಸಂದೇಶ ನೀಡಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಸಮಸ್ತ ಹಿಂದೂ ಸಮಾಜದ ಸಹಕಾರ ಸಹಭಾಗಿತ್ವ ಪಡೆಯಲು ಎಲ್ಲ ಸ್ತರಗಳ ಹಿಂದೂ ಬಂಧುಗಳನ್ನು ಭೇಟಿಯಾಗುತ್ತಿದ್ದೇವೆ ಅದರಂತೆ ಇಲ್ಲಿಗೆ ಆಗಮಿಸಿದ್ದೇವೆ. ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆದು ಇಡೀ ದೇಶಕ್ಕೆ ರಾಮನ ಕೃಪೆಯಾಗಿ ಶಾಂತಿ ಸುಭಿಕ್ಷೆ ಸಮೃದ್ಧಿ ನೆಲೆಸಲು ನಾವೆಲ್ಲ ಪ್ರತೀನಿತ್ತ ಮನೆಮನೆಗಳಲ್ಲಿ ರಾಮನಿಗಾಗಿ ದೀಪ ಬೆಳಗಿ ರಾಮಂತ್ರಜಪ ರಾಮ ಭಜನೆ ನಡೆಸಬೇಕು. ಪ್ರತಿಯೊಬ್ಬರಲ್ಲಿ ರಾಮನ ಜೀವನಾದರ್ಶಗಳು ನೆಲೆಗೊಳ್ಳಬೇಕು.ನಾವೆಲ್ಲ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದರು‌ಎಲ್ಲರಿಗೂ ರಾಮ ಮಂತ್ರ ಬೋಧಿಸಿದರು. ಸುಬ್ರಹ್ಮಣ್ಯ ಷಷ್ಠೀಯಾದ್ದರಿಂದ ಶ್ರೀ ಮಠದ ಅಧೀನದಲ್ಲಿರುವ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ಮಾಡಿಸಿ ತಂದಿದ್ದು ಎಲ್ಲರಿಗೂ ಶ್ರೀಗಳು ನೀಡಿ ಆಶೀರ್ವದಿಸಿದರು.

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ವಿಧಿವಶರಾಗಿ ಒಂದು ವರ್ಷದೊಳಗೆ ಶ್ರೀಮಠದ ಎಲ್ಲ ಜವಾಬ್ದಾರಿಗಳಿಗೆ ಹೆಗಲು ಕೊಟ್ಟ ಶ್ರೀವಿಶ್ವಪ್ರಸನ್ನತೀರ್ಥರು ಗುರುಗಳು ನಿರ್ವಹಿಸಿದ್ದ ಸಾಮಾಜಿಕ ಕಾರ್ಯಗಳನ್ನೂ ಮುನ್ನಡೆಸುವ ಸಂಕಲ್ಪ ಮಾಡಿರುವುದು ಅತ್ಯಂತ ಶ್ಲಾಘನೀಯ ಎಂದು ವಿಜಯ ಪೂಜಾರಿ ತಿಳಿಸಿದರು. ವಿಹಿಂಪ‌ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.

Comments are closed.