ಕರಾವಳಿ

ಉಗ್ರರ ಪರ ಗೋಡೆ ಬರಹ ಬರೆದ ದೇಶದ್ರೋಹಿಗಳ ಪರ ವಕಾಲತು ವಹಿಸದಂತೆ ಯುವಮೊರ್ಚ ಮನವಿ

Pinterest LinkedIn Tumblr

ಮಂಗಳೂರು, ಡಿಸೆಂಬರ್.05: ಕೆಲವು ದಿನಗಳ ಹಿಂದೆ ನಗರದ ಪ್ರತ್ಯೇಕ ಸ್ಥಳಗಳಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಪರವಾಗಿ ವಕಾಲತು ವಹಿಸದಂತೆ ಮಂಗಳೂರು ದಕ್ಷಿಣ ಬಿಜೆಪಿ ಯುವಮೊರ್ಚ ವತಿಯಿಂದ ಮಂಗಳೂರು ವಕೀಲರ ಸಂಘಕ್ಕೆ ಮನವಿ ಸಲಿ಼ಸಲಾಯಿತು.

ನ.27ರಂದು ನಗರದ ಬಿಜೈ ಮತ್ತು ಕೋರ್ಟ್ ಸಮೀಪ ಕೆಲದಿನಗಳ ಹಿಂದೆ ಕಂಡು ಬಂದ ಉಗ್ರರನ್ನು ಬೆಂಬಲಿಸಿ ಬರೆದ ಗೋಡೆ ಬರಹ ಕಂಡು ಬಂದಿತ್ತು. ಕದ್ರಿ‌ ಪೊಲೀಸ್ ಠಾಣೆ ಸಮೀಪದ ಬಿಜೈ ಬಳಿಯ ರಸ್ತೆಯ ಗೋಡೆಯೊಂದರಲ್ಲಿ “ನಮ್ಮನ್ನು ವಿದ್ವಂಸಕ ಕೃತ್ಯ ನಡೆಸಲು ಉತ್ತೇಜಿಸಲು ಬರಬೇಡಿ, ಲಷ್ಕರ್ ಇ ತೊಯಿಬಾ ಮತ್ತು ತಾಲಿಬಾನ್ ಗಳಿಗೆ ಸಂಘಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎನ್ನುವುದು ತಿಳಿದಿದೆ.” ಅಲ್ಲದೆ ‘ಲಷ್ಕರ್ ಝಿಂದಾಬಾದ್’ ಎಂದು ಬರೆಯಲಾಗಿತ್ತು.

“Do not force us to invite Lashkar-e-Toiba and Taliban to Deal with Sanghis and Manvedis” ಎಂದು ಉಗ್ರರ ಪರವಾಗಿ ಕಿಡಿಗೇಡಿಗಳು ಬರೆದಿದ್ದರು. ಅಷ್ಟೇ ಅಲ್ಲದೇ ಹ್ಯಾಷ್ ಟ್ಯಾಗ್ ಹಾಕಿ, “ಲಷ್ಕರ್‌‌ ಜಿಂದಾಬಾದ್”‌‌‌‌‌ ಎಂದು ಬರೆಯಲಾಗಿತ್ತು. ಬಳಿಕ ಕದ್ರಿ ಪೊಲೀಸರು ವಿವಾದಿತ ಬರಹದ ಮೇಲೆ ಪೈಂಟ್‌ ಬಳಿದು ಅದನ್ನು ಅಳಿಸಿ ಹಾಕಿದ್ದಾರೆ.

ಬಳಿಕ ನ.29ರಂದು ನಗರದ ಪಿವಿಎಸ್ ಸಮೀಪದ ನ್ಯಾಯಾಲಯದ ಆವರಣದ ಹಳೆ ಕಟ್ಟಡದ ಗೋಡೆಯ ಮೇಲೆ “Gustak e rasool ek hi saza tan say juda” ಎಂದು ಬರಹ ಪ್ರತ್ಯಕ್ಷವಾಗಿತ್ತು.

ನಗರದ ಕೋರ್ಟ್ ರೋಡ್‌ನಲ್ಲಿ ಕೋರ್ಟ್‌ಗೆ ಸಮೀಪವಾಗಿರುವ ಕೋರ್ಟ್ ಪ್ರಿಮಿಸಸ್‌ನ ಹಳೇ ಪೊಲೀಸ್ ಔಟ್ ಪೋಸ್ಟ್‌ನ ಗೋಡೆಯ ಮೇಲೆ ಕಿಡಿಗೇಡಿಗಳು ಉರ್ದು ಭಾಷೆಯಲ್ಲಿ ‘Gustuk e Rasool ek hi saza sar tan say juda’ ಅಂದರೆ, “ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ಅದು ತಲೆ ದೇಹದಿಂದ ಬೇರ್ಪಡುವುದು” ಎಂಬ ವಿವಾದಾತ್ಮಕ ಬರಹವನ್ನು ಬರೆದಿದ್ದಾರೆ. ಕಪ್ಪು ಬಣ್ಣದ ಪೈಂಟ್ ಬಳಸಿ ರಾತ್ರಿ ವೇಳೆ ಬರೆಯಲಾಗಿದ್ದು, ಮರುದಿನ ಬೆಳಗ್ಗೆ ವಿಷಯ ಬೆಳಕಿಗೆ ಬಂದಿದೆ.

ಈ ಬಗ್ಗೆ ಕದ್ರಿ ಹಾಗೂ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಬಗ್ಗೆ ಮೂರು ಪ್ರತ್ಯೇಕ ಪೊಲೀಸ್‌ ತಂಡಗಳು ವಿವಿಧ ಆಯಾಮಗಳಿಂದ ತನಿಖೆ ಕೈಗೊಂಡಿದ್ದ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಉಗ್ರರ ಪರ ಗೋಡೆ ಬರಹ ಬರೆಯುವ ಮೂಲಕ ದೇಶದ್ರೋಹ ಎಸಗಿರುವ ಆರೋಪಿಗಳ ಬಂಧನವಾದರೆ ಆರೋಪಿಗಳ ಪರವಾಗಿ ಯಾರು ಕೂಡ ವಕಾಲತು ವಹಿಸ ಬಾರದು ಎಂದು ಮಂಗಳೂರು ದಕ್ಷಿಣ ಬಿಜೆಪಿ ಯುವಮೊರ್ಚ ಘಟಕವು ಮಂಗಳೂರು ವಕೀಲರ ಸಂಘಕ್ಕೆ ಮನವಿ ಸಲ್ಲಿಸಿದೆ.

ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ನರಸಿಂಹ ಹೆಗ್ಡೆ ಕಾರ್ಯದರ್ಶಿ ಎಚ್ ವಿ. ರಾಘವೇಂದ್ರ, ವಕೀಲರಾದ ರಾಘವೇಂದ್ರ ರಾವ್, ಬಿಜೆಪಿ ಯುವಮೊರ್ಚ ಅಧ್ಯಕ್ಷರಾದ ಸಚಿನ್ ರಾಜ್ ರೈ, ಪ್ರಧಾನ ಕಾರ್ಯದರ್ಶಿ ಸುಶಾಂತ್ ಕೋಟಿಮುರ, ಉಪಾಧ್ಯಕ್ಷರುಗಳಾದ ಪ್ರಕಾಶ್ ಗರೋಡಿ, ಮೌನೀಶ್ ಚೌಟ, ನಿಕೀತ್ ಕೊಠಾ಼ರಿ, ಜಯರಾಜ್ ಶೆಟ್ಟಿ, ಕಾರ್ಯದರ್ಶಿ ದೀಕ್ಷಿತ್ ಅಳಪೆ, ಮೋಹಿತ್ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

Comments are closed.