ಉಡುಪಿ: ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ರಥಬೀದಿಯಲ್ಲಿರುವ ಪೇಜಾವರ ಮಠಕ್ಕೆ ಕೃತಕ ಉಸಿರಾಟ ವ್ಯವಸ್ಥೆಯಲ್ಲೇ (ವೆಂಟಿಲೇಟರ್) ಮಣಿಪಾಲ ವಿಶೇಷ ಆಂಬುಲೆನ್ಸ್ನಲ್ಲಿ ಸ್ಥಳಾಂತರಿಸಲಾಯಿತು.
ಭಾನುವರ ಬೆಳಗ್ಗೆ 6:55 ಗಂಟೆಗೆ ತಜ್ಞ ವೈದ್ಯಕೀಯ ತಂಡ, ಬಿಗು ಪೊಲೀಸ್ ಭದ್ರತೆಯಲ್ಲಿ ಶ್ರೀಗಳನ್ನು ಮಣಿಪಾಲದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಪೇಜಾವರ ಮಠಕ್ಕೆ ಕರೆತಂದರು. 700 ಕ್ಕೂಅಧಿಕ ಮಂದಿ ಪೊಲಿಸ್ ಅಧಿಕಾರಿ ಮತ್ತು ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಭಕ್ತರಿಗೆ ಮಠದ ಭೇಟಿ ನಿರ್ಬಂಧಿಸಲಾಗಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ.
ಉಡುಪೊ ಶಾಸಕ ರಘುಪತಿ ಭಟ್ ಭೇಟಿ ನೀಡಿ ಶ್ರೀಗಳನ್ನು ಸ್ಥಳಾಂತರಿಸುವಾಗ ಜತೆಯಲ್ಲಿದ್ದರು. ಸಂಸದೆ ಶೋಭಾ ಕರಂದ್ಲಾಜೆ ಸದ್ಯ ಭೇಟಿ ನೀಡಿದ್ದು ಕೆಲವೇ ಕ್ಷಣಗಳಲ್ಲಿ ಸಿಎಂ ಯಡಿಯೂರಪ್ಪ ಕೂಡ ಪೇಜಾವರ ಮಠಕ್ಕೆ ಆಗಮಿಸಲಿದ್ದಾರೆ. ಶ್ರೀಗಳ ಪೂರ್ವಾಶ್ರಮದ ಸಂಬಂಧಿಗಳು ಕೂಡ ಆಶ್ರಮದತ್ತ ಬಂದಿದ್ದಾರೆ. ಶ್ರೀಗಳ ಚೇತರಿಕೆಗೆ ವಿಶೇಷ ಪೂಜೆ- ಪ್ರಾರ್ಥನೆ ನಡೆಯುತ್ತಿದೆ.
ನ್ಯುಮೇನಿಯ ಸಮಸ್ಯೆಯಿಂದಾಗಿ ಡಿ.20 ಶುಕ್ರವಾರ ಮುಂಜಾನೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡ ಶ್ರೀಗಳಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತಿದ್ದರು. ಕಳೆದ ಎಂಟು ದಿನಗಳ ನಡುವೆ ಆರೋಗ್ಯ ತುಸು ಚೇತರಿಕೆ ಕಂಡಿದ್ದರೂ ಕೃತಕ ಉಸಿರಾಟ ಮೂಲಕ ಗಂಭೀರ ಸ್ಥಿತಿಯಲ್ಲೆ ಚಿಕಿತ್ಸೆ ಮುಂದುವರೆಸಲಾಗಿತ್ತು.
ಶುಕ್ರವಾರ ಮತ್ತು ಶನಿವಾರ ಶ್ರೀಗಳ ದೇಹ ಸ್ಥಿತಿ ಚಿಂತಾಜನಕವಾಗಿತ್ತು. ಶನಿವಾರ ಸಾಯಂಕಾಲ ಮಿದುಳು ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ವೈದ್ಯರು ತಿಳಿಸಿದ್ದರು. ಪೇಜಾವರ ಕಿರಿಯ ಶ್ರೀಗಳು ಗುರುಗಳ ಆರೋಗ್ಯ ಸುಧಾರಣೆ ಕಂಡಿಲ್ಲ. ಅವರ ಇಚ್ಛೆಯಂತೆ ಮಠಕ್ಕೆ ಕರೆದುಕೊಂಡು ಹೋಗುವುದಾಗಿ ಶನಿವಾರ ರಾತ್ರಿ ಹೇಳಿಕೆ ನೀಡಿದ್ದರು.
Comments are closed.