ಕರಾವಳಿ

ಪ್ರವಾದಿ ಮುಹಮ್ಮದ್ ಮುಸ್ತಫ (ಸ.)ರ ಜನ್ಮದಿನ ; ಕರಾವಳಿಯಾದ್ಯಂತ ಮೀಲಾದುನ್ನಬಿ ಸಂಭ್ರಮಾಚರಣೆ

Pinterest LinkedIn Tumblr

ಮಂಗಳೂರು, ನವೆಂಬರ್.20: ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫ (ಸ.)ರವರ ಜನ್ಮದಿನದ ಪ್ರಯುಕ್ತ ಇಂದು ಕರಾವಳಿಯಾದ್ಯಂತ ಬೆಳಗ್ಗೆಯಿಂದಲೇ ಮೀಲಾದುನ್ನಬಿ ಸಂಭ್ರಮಾಚರಣೆ ಆರಂಭಗೊಂಡಿದ್ದು, ಪ್ರವಾದಿ ಮುಹಮ್ಮದ್ (ಸ)ರ ಹೆಸರಿನಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಕರಾವಳಿಯ ವಿವಿಧೆಡೆಗಳಲ್ಲಿ ಮುಸ್ಲಿಂ ಭಾಂದವರು ಮೀಲಾದುನ್ನಬಿಯನ್ನು ಆಚರಿಸಿದರು. ನಗರದ ಬಂದರ್‌ನ ಪ್ರಮುಖ ರಸ್ತೆಗಳಲ್ಲಿ ವಿವಿಧ ಮದ್ರಸಗಳ ವಿದ್ಯಾರ್ಥಿಗಳು ಬೆಳಗ್ಗೆ ಆಕರ್ಷಕ ಮೀಲಾದ್ ರ್ಯಾಲಿ ನಡೆಸಿದರು. ಅಮೆಮಾರ್ ಬದ್ರಿಯಾ ಜುಮಾ ಮಸೀದಿ ಹಾಗೂ ಬದ್ರಿಯಾ ಮದ್ರಸದ ವತಿಯಿಂದ ಮೀಲಾದ್ ಜಾಥಾ ನಡೆಯಿತು. ಮಸೀದಿಯ ಅಧ್ಯಕ್ಷ ಹಾಜಿ ಉಮರಬ್ಬ ಧ್ವಜಾರೋಹಣಗೈದರು. ಸ್ಥಳೀಯ ಖತೀಬ್ ಅಬೂ ಸ್ವಾಲಿಹ್ ಫೈಝಿ ದುಆಗೈದರು. ಹಾಜಿ ಉಮರಬ್ಬ ಎಸ್ಕೆ.ಎಸ್.ಬಿ.ವಿ. ಅಮೆಮಾರ್ ಘಟಕಾಧ್ಯಕ್ಷ ಸೈಫುದ್ದೀನ್ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ನಗರದ ನಿತ್ಯಾನಂದ ಆಶ್ರಮ ಹಾಗೂ ಯುವಶಕ್ತಿ ಫ್ರೆಂಡ್ಸ್ ಮತ್ತು ತುಳುನಾಡ ಸಂಜೀವಿನಿ ಸಂಘಟನೆಗಳ ವತಿಯಿಂದ ಬಂದರ್ ನ ಕಂದಕ್ ಬಳಿಯ ಗೂಡ್ಸ್ ಶೆಡ್ ನಿರೇಶ್ವಾಲ್ಯದಲ್ಲಿ ಮೀಲಾದುನ್ನಬಿ ಪ್ರಯುಕ್ತ ಮೆರವಣಿಗೆ ನಡೆಸಿದ ಮುಸ್ಲಿಮರಿಗೆ ಸಿಹಿ ತಿಂಡಿ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ತುಳುನಾಡ ಸಂಜೀವಿನಿಯ ಸ್ಥಾಪಕಾಧ್ಯಕ್ಷ ಮಹೇಂದ್ರ ಕಾಶಿ, ಹೊರನಾಡಿನಲ್ಲಿ ಮಂಗಳೂರು ಸದಾ ಕೋಮು ಸಂಘರ್ಷ ನಡೆಯುತ್ತಿರುವ ಪ್ರದೇಶ ಎಂಬ ಭಾವನೆ ಇದೆ. ಆದರೆ ಇಲ್ಲಿ ನಾವೆಲ್ಲ ಸಹೋದರತೆಯಿಂದ, ಸೌಹಾರ್ದದಿಂದ ಬಾಳುತ್ತಿದ್ದೇವೆ. ಅದರ ಸಂಕೇತವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ನಿತ್ಯಾನಂದ ಆಶ್ರಮದ ಟ್ರಸ್ಟಿ ರೋಹಿತ್ ಮಾತನಾಡಿ, ಎಲ್ಲಾ ಧರ್ಮದವರು ಸೌಹಾರ್ದಯುತವಾಗಿ ಬಾಳುವಂತಾಗಬೇಕು. ಪರಸ್ಪರ ಸೌಹಾರ್ದ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.

ಸ್ಥಳೀಯ ಕಾರ್ಪೊರೇಟರ್ ಲತೀಫ್ ಮಾತನಾಡಿ, ನಿತ್ಯಾನಂದ ಆಶ್ರಮ ಹಾಗೂ ಯುವಶಕ್ತಿ ಫ್ರೆಂಡ್ಸ್ ಮತ್ತು ತುಳುನಾಡ ಸಂಜೀವಿನಿ ಸಂಘಟನೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮಗಳು ಸೌಹಾರ್ದ ವಾತವರಣಕ್ಕೆ ಪೂರಕ ಎಂದರು.

ಈ ಸಂದರ್ಭ ನಿತ್ಯಾನಂದ ಆಶ್ರಮದ ಸದಸ್ಯ ಸದಾಶಿವ ಶೆಟ್ಟಿ, ಬಿಜೆಪಿ ಪೋರ್ಟ್ ವಾರ್ಡ್ ಅಧ್ಯಕ್ಷ ಯೋಗೀಶ್, ತುಳುನಾಡ ಸಂಜೀವಿನಿಯ ಸ್ಥಾಪಕ ರಾಹುಲ್, ದೇವಿಪ್ರಸಾದ್, ಯುವಶಕ್ತಿ ಫ್ರೆಂಡ್ಸ್ ಅಧ್ಯಕ್ಷ ದೀಪಕ್ ಶೆಟ್ಟಿ, ವಿಕಾಸ, ಯತೀಶ್ ಮತ್ತಿತರರು ಉಪಸ್ಥಿತರಿದ್ದರು.

ಉಳ್ಳಾಲ ದರ್ಗಾ ಸಮಿತಿಯಿಂದ ಮೀಲಾದುನ್ನಬಿ ಕಾರ್ಯಕ್ರಮ :

ಉಳ್ಳಾಲ ದರ್ಗಾ ಸಮಿತಿಯ ವತಿಯಿಂದ ಮಂಗಳವಾರ ಜರುಗಿದ ಮೀಲಾದುನ್ನಬಿ ಕಾರ್ಯಕ್ರಮವನ್ನು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ (ಸ)ರ ಹೆಸರಿನಲ್ಲಿ ಇಂದು ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆದರೆ ಸ್ಥಳೀಯವಾಗಿ ಶಾಂತಿ-ಸೌಹಾರ್ದದ ವಾತಾವರಣ ರೂಪುಗೊಂಡಾಗ ಮಾತ್ರ ಪರಿಪೂರ್ಣ ಜೀವನ ನಡೆಸಲು ಸಾದ್ಯ. ಅಲ್ಲದೆ ಆ ಮೂಲಕ ಪ್ರವಾದಿ ಸಂದೇಶ ಪಾಲಿಸಿದಂತಾಗುತ್ತದೆ ಎಂದು ಹೇಳಿದರು.

ಸ್ವಚ್ಛತೆಗೆ ಇಸ್ಲಾಮ್ ಹೆಚ್ಚಿನ ಆದ್ಯತೆ ನೀಡಿದೆ. ಪ್ರವಾದಿಯ ಪ್ರೀತಿಯಿಂದ ಬಿಸಿಲನ್ನೂ ಲೆಕ್ಕಿಸದೆ ದೂರದ ಊರಿನಿಂದ ಸ್ವಲಾತ್ ಮೆರವಣಿಗೆ ನಡೆಸಲಾಗುತ್ತದೆ. ಈ ಸಂದರ್ಭ ದಾಹ ತೀರಿಸಲು ಬಳಸಿದ ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಚತೆ ಕಾಪಾಡಬೇಕು. ಪ್ರವಾದಿ ಮುಹಮ್ಮದ್ (ಸ.)ರ ಶಾಂತಿಯ ಸಂದೇಶದ ಫಲವಾಗಿ ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಮುಸ್ಲಿಮರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂಬುದನ್ನು ಮನಗಾಣಬೇಕು ಎಂದು ಹಾಜಿ ಅಬ್ದುಲ್ ರಶೀದ್ ನುಡಿದರು.

ಮೀಲಾದ್ ಪ್ರಯುಕ್ತ ಸೈಯದ್ ಮದನಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ, ಧ್ವಜಾರೋಹಣ ಮೂಲಕ ಕೋಟೆಪುರ ಜುಮಾ ಮಸೀದಿಯಿಂದ ಆರಂಭಗೊಂಡ ಸ್ವಲಾತ್ ಮೆರವಣಿಗೆಯು ಅಬ್ಬಕ್ಕ ವೃತ್ತ, ಮುಕ್ಕಚ್ಚೇರಿ, ಆಝಾದ್ ನಗರ, ಮಾಸ್ತಿಕಟ್ಟೆ ಮಾರ್ಗವಾಗಿ ದರ್ಗಾ ವಠಾರದಲ್ಲಿ ಸಮಾಪನಗೊಂಡಿತು. ಈ ಸಂದರ್ಭ ದರ್ಗಾ ಸಮಿತಿಯ ವತಿಯಿಂದ ತಯಾರಿಸಲಾದ 2019ರ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ಉಳ್ಳಾಲ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಬಾಖವಿ ದುಆಗೈದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್, ಅರಬಿಕ್ ಕಾಲೇಜಿನ ಪ್ರೊಫೆಸರುಗಳಾದ ಇಬ್ರಾಹೀಮ್ ಮದನಿ, ಉಸ್ಮಾನ್ ಫೈಝಿ, ದಅವಾ ಕಾಲೇಜಿನ ಪ್ರೊಫೆಸರ್ ಇಬ್ರಾಹೀಮ್ ಅಹ್ಸನಿ, ದರ್ಗಾದ ಪ್ರಧಾನ ಕಾರ್ಯದರ್ಶಿ ಹಾಜಿ ತ್ವಾಹ ಮುಹಮ್ಮದ್, ಉಪಾಧ್ಯಕ್ಷರಾದ ಯು.ಕೆ ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಅಡಿಟರ್ ಯು.ಟಿ. ಇಲ್ಯಾಸ್, ಕೋಶಾಧಿಕಾರಿ ಯು.ಕೆ. ಇಲ್ಯಾಸ್, ಜತೆ ಕಾರ್ಯದರ್ಶಿ ಆಝಾದ್ ಇಸ್ಮಾಯೀಲ್, ಸೈಯದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹಾಜಿ ಅಮೀರ್, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಉಪಾಧ್ಯಕ್ಷ ಹಾಜಿ ಮುಹಮ್ಮದ್ ಹಳೆಕೋಟೆ, ಕೋಶಾಧಿಕಾರಿ ಅಬ್ಬಾಸ್ ಹಾಜಿ, ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಎ.ಕೆ.ಮುಹಿಯುದ್ದೀನ್ ಹಾಜಿ, ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಕೋಶಾಧಿಕಾರಿ ಹಮೀದ್ ಕಲ್ಲಾಪು, ಮುಫತ್ತಿಶ್ ಸುಲೈಮಾನ್ ಸಖಾಫಿ, ಸದಸ್ಯರಾದ ಫಾರೂಕ್ ಉಳ್ಳಾಲ, ಮುಸ್ತಫಾ ಯು.ಕೆ., ಹಮೀದ್ ಕೋಡಿ, ಅಲಿ ಮೋನು, ಜಬ್ಬಾರ್ ಮೇಲಂಗಡಿ, ಮುಸ್ತಫ ಮಂಚಿಲ, ಮೊಯ್ದಿನಬ್ಬ ಉಳ್ಳಾಲಬೈಲು, ಖಾದರ್ ಮುಸ್ಲಿಯಾರ್ ಅಕ್ಕರೆಕರೆ, ಕುಂಞಿಮೋನು ಹಿದಾಯತ್ ನಗರ, ಅಶ್ರಫ್ ಮುಕ್ಕಚ್ಚೇರಿ, ಮೊಯ್ದಿನಬ್ಬ ಆಝಾದ್ ನಗರ, ಕುಂಞಿ ಅಹ್ಮದ್ ಅಳೇಕಲ, ಅಯ್ಯೂಬ್ ಮಂಚಿಲ, ಹನೀಫ್ ಸೋಲಾರ್, ಕೋಟೆಪುರ ಮಸೀದಿಯ ಅಧ್ಯಕ್ಷ ಅಬ್ಬಾಸ್, ಮಾಜಿ ಸದಸ್ಯರಾದ ಹಾಜಿ ಯು.ಎಸ್. ಅಬೂಬಕ್ಕರ್ ಹಾಜಿ, ಕಬೀರ್ ಚಾಯಬ್ಬ, ನಾಝಿಮ್ ಮುಕ್ಕಚ್ಚೇರಿ, ಎ.ಎ. ಖಾದರ್ ಹಾಜಿ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.