ಕರಾವಳಿ

ಗೋ ಮಾಫಿಯಾ ಜತೆ ಸಚಿವ ಖಾದರ್‌ ಕೈವಾಡ, ಆರೋಪ : ಮಂಗಳೂರಿನ ಕಸಾಯಿಖಾನೆ ಮುಚ್ಚಲು ಆಗ್ರಹ

Pinterest LinkedIn Tumblr

ಮಂಗಳೂರು, ಅಕ್ಟೋಬರ್.13: ಮಂಗಳೂರಿನ ಕುದ್ರೋಳಿಯಲ್ಲಿ ಕಾರ್ಯಾಚರಿಸುತ್ತಿರುವ ಕಸಾಯಿಖಾನೆಗೆ ಸ್ಮಾರ್ಟ್ ಸಿಟಿ ಯೋಜನೆಯ 15 ಕೋ.ರೂ. ಮಂಜೂರು ಮಾಡಲು ಹೊರಟಿರುವುದನ್ನು ಖಂಡಿಸಿ ದ.ಕ.ಜಿಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ವಿರುದ್ಧ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಶುಕ್ರವಾರ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರು, ಗೋ ಮಾಫಿಯಾ ಜತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ರ ಕೈವಾಡವಿದೆ. ಹಾಗಾಗಿಯೇ ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯ 15 ಕೋ.ರೂ.ವನ್ನು ಸಚಿವರು ಕಸಾಯಿಖಾನೆಗೆ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ದ.ಕ.ಜಿಲ್ಲೆಯಲ್ಲಿ ಮರಳು ಮಾಫಿಯಾ, ಡ್ರಗ್ಸ್ ಮಾಫಿಯಾ ಜತೆಗೆ ಗೋ ಮಾಫಿಯಾ ಕೂಡಾ ಕಾರ್ಯಾಚರಿಸುತ್ತಿದೆ. ಗೋ ಮಾಫಿಯಾ ಜತೆ ಸಚಿವ ಖಾದರ್ ಕೈಜೋಡಿಸಿರುವುದರಿಂದಲೇ ಕುದ್ರೋಳಿಯ ಕಸಾಯಿಖಾನೆಗೆ 15 ಕೋ.ರೂ. ನೀಡುವ ಪ್ರಸ್ತಾಪ ಮಾಡಿದ್ದಾರೆ. ಈ ಮೂಲಕ ಸ್ಮಾರ್ಟ್ ಸಿಟಿ ಯೋಜನೆಯ ಹಣವನ್ನು ದುರುಪಯೋಗ ಮಾಡಲು ಹೊರಟ್ಟಿದ್ದಾರೆ ಎಂದು ಶರಣ್ ಪಂಪ್ವೆಲ್ ಅರೋಪಿಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ವಿಎಚ್‌ಪಿ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ಬಿಜೆಪಿ ಗೋ ಪ್ರಕೋಷ್ಠ ರಾಜ್ಯ ಸಹ ಸಂಚಾಲಕ ವಿನಯ ಎಲ್. ಶೆಟ್ಟಿ, ದುರ್ಗಾವಾಹಿನಿ ಸಂಚಾಲಕಿ ವಿದ್ಯಾ ಮಲ್ಯ ಮಾತನಾಡಿದರು. ಸ್ಮಾರ್ಟ್ ಸಿಟಿ ಹೆಸರಲ್ಲಿ ಕಸಾಯಿಖಾನೆಗೆ ನೀಡಲು ಪ್ರಸ್ತಾಪಿಸಿರುವ ಅನುದಾನವನ್ನು ಹಿಂಪಡೆಯಬೇಕು ಹಾಗೂ ಈಗಿರುವ ಕಸಾಯಿಖಾನೆಯನ್ನು ಮುಚ್ಚಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ ಕುತ್ತಾರ್, ಜಿಲ್ಲಾ ಗೋರಕ್ಷಾ ಪ್ರಮುಖ್ ಪ್ರದೀಪ್ ಪಂಪ್‌ವೆಲ್, ಬಜರಂಗದಳ ಜಿಲ್ಲಾ ಸಂಚಾಲಕ ಪ್ರವೀಣ್ ಕುತ್ತಾರ್, ಪುಮುಖರಾದ ಭುಜಂಗ ಕುಲಾಲ್, ಪ್ರದೀಪ್ ಅತ್ತಾವರ, ನವೀನ್ ಮೂಡುಶೆಡ್ಡೆ ಹಾಗು ಮತ್ತಿತ್ತರರು ಪಾಲ್ಗೊಂಡಿದ್ದರು.

Comments are closed.