ಆರೋಗ್ಯ

ವಕ್ವಾಡಿಯಲ್ಲಿ ‘ಸ್ಪಂದನ-2024’; ಬೃಹತ್ ರಕ್ತದಾನ ಶಿಬಿರ ಹಾಗೂ ಗೌರವಾಭಿನಂದನೆ

Pinterest LinkedIn Tumblr

ಕುಂದಾಪುರ: ರಕ್ತಕ್ಕೆ ಯಾವ ವ್ಯಕ್ತಿ, ಯಾವ ಜಾತಿ ಎಂಬುದು ತಿಳಿದಿಲ್ಲ. ಅಗತ್ಯ ಸಂದರ್ಭದಲ್ಲಿ ರಕ್ತದ ವಿಚಾರ ಬಂದಾಗ ಜಾತಿ-ಧರ್ಮ ಹುಡುಕುವುದು ಸಾಧ್ಯವಿಲ್ಲ ಎಂಬುದನ್ನು ಎಲ್ಲರು ಅರಿಯಬೇಕಿದೆ. ರಕ್ತದಾನ ಮಾಡುವ ಧೈರ್ಯದ ಜೊತೆಗೆ ವಿಶಾಲ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ಮೊದಲಿಗೆ ಹೋಲಿಸಿದರೆ ರಕ್ತ ದಾನದ ಬಗೆಗಿನ ಭಯದ ಸ್ಥಿತಿ ಕಡಿಮೆಯಾಗಿದ್ದು ಈ ನಿಟ್ಟಿನಲ್ಲಿ ರಕ್ತದಾನ ಶಿಬಿರ ಆಯೋಜನೆಯಲ್ಲಿ ಇಂತಹ ಸಂಘಟನೆಗಳು ಇನ್ನಷ್ಟು ಮುಂದೆ ಬರಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.

ವಕ್ವಾಡಿ ಫ್ರೆಂಡ್ಸ್ (ರಿ) ವಕ್ವಾಡಿ ಇವರ ಆಶ್ರಯದಲ್ಲಿ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ, ರಕ್ತ ನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಯೋಗದೊಂದಿಗೆ ರವಿವಾರ ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ‘ಸ್ಪಂದನ- 2024’ ಅಂಗವಾಗಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರ ಹಾಗೂ ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರಲ್ಲಿ ರಕ್ತದಾನದ ಬಗ್ಗೆ ಇರುವ ಭಯ, ಗೊಂದಲ ನಿವಾರಣೆಯಾಗಬೇಕು. ಸ್ವತಃ ಅರಿವಿಗೆ ಬಂದಾಗ ರಕ್ತದ ಮಹತ್ವ ತಿಳಿಯುತ್ತದೆ. ಗ್ರಾಮೀಣ ಭಾಗವಾದ ವಕ್ವಾಡಿಯ ಊರಲ್ಲಿ ಯುವಕರ ತಂಡ ಸಂಘಟನೆ ಮಾಡಿಕೊಂಡು ಸಮಾಜಮುಖಿ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದ ಅವರು, 1984ರಿಂದ ನಿರಂತರವಾಗಿ ಮಣಿಪಾಲ ಕೆಎಂಸಿ ಆಶ್ರಯದಲ್ಲಿ ಅಮಾಸೆಬೈಲಿನಲ್ಲಿ 6-7 ವರ್ಷ ರಕ್ತದಾನ ಕಾರ್ಯಕ್ರಮ ಆಯೋಜಿಸಿದ್ದಲ್ಲದೆ ಅಲ್ಲಲ್ಲಿ ನಡೆಯುವ ಶಿಬಿರದಲ್ಲಿ ರಕ್ತದಾನ ಮಾಡಿದ್ದಾಗಿಯೂ ತಿಳಿಸಿದರು.

ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ಅಧ್ಯಕ್ಷ ನವೀನ್ ಅಧ್ಯಕ್ಷತೆ ವಹಿಸಿದ್ದರು.

ನ್ಯಾಯವಾದಿ ಎಮ್.ಕೆ ಸುವೃತ್ ಕುಮಾರ್ ಕಾರ್ಕಳ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ರಕ್ತದ ಆಪತ್ಪಾಂದವ ಸತೀಶ್ ಸಾಲಿಯಾನ್, ಎಫ್.ಎ.ಜಿ.ಇ ಚೀಪ್ ಕನ್ಸಲ್ಟೆಂಟ್ ತಪೋವನ ಲೈಫ್ ಸ್ಪೇಸ್ ಫ್ರೈ.ಲಿ. ಮಣಿಪಾಲದ ಎಂಡಿ ಡಾ. ವಾಣಿಶ್ರೀ ಐತಾಳ್, ಮಣಿಪಾಲ‌ ಕೆ.ಎಂ.ಸಿ ರಕ್ತನಿಧಿ ವಿಭಾಗದ ಮುಖ್ಯಸ್ಥರಾದ ಡಾ. ಸುಮಾಂಕಿತ ಉಪಸ್ಥಿತರಿದ್ದರು.

ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಕೀರ್ತಿ ಶೆಟ್ಟಿ ವಕ್ವಾಡಿ ಪ್ರಸ್ತಾವನೆಗೈದರು. ಶಿಕ್ಷಕ ಸದಾನಂದ ಶೆಟ್ಟಿ ನಿರೂಪಿಸಿ, ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ಸದಸ್ಯರಾದ ಮೂಕಾಂಬಿಕಾ ಸ್ವಾಗತಿಸಿ, ಕೃಷ್ಣ ಶೆಟ್ಟಿಗಾರ್ ವಂದಿಸಿದರು.

ಸನ್ಮಾನ: ಕೃಷಿ ಮತ್ತು ಕರಕುಶಲ ಕ್ಷೇತ್ರದಿಂದ ಬಾಬುರಾಯ್ ಆಚಾರ್, ರಂಗಕರ್ಮಿ ವಾಸುದೇವ ಶೆಟ್ಟಿಗಾರ್, ಭಜನೆಕಾರ ರಾಜು ದೇವಾಡಿಗ, ರಕ್ತದಾನಿ ಶರತ್ ಕಾಂಚನ್ ಆನಗಳ್ಳಿ‌ ಅವರನ್ನು ಸನ್ಮಾನಿಸಲಾಯಿತು.

Comments are closed.