ಆರೋಗ್ಯ

ಕರ್ನಾಟಕದಲ್ಲಿ ಮಧುಮೇಹ ಮತ್ತು ಬೊಜ್ಜಿನಿಂದ ಬಳಲುತ್ತಿರುವವರ ಆರೈಕೆಗೆ ಎನ್ಎನ್ಇಎಫ್ ಮತ್ತು ರಾಜ್ಯ ಸರ್ಕಾರ ಪ್ರತಿಜ್ಞೆ

Pinterest LinkedIn Tumblr

ಬೆಂಗಳೂರು: ನೊವೊ ನಾರ್ಡಿಸ್ಕ್ ಎಜುಕೇಶನ್ ಫೌಂಡೇಶನ್ (ಎನ್ಎನ್ಇಎಫ್) ಮತ್ತು ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಮಧುಮೇಹ ಮತ್ತು ಬೊಜ್ಜು ಹೊಂದಿರುವ ಜನರಿಗೆ ಶಿಕ್ಷಣ, ಚಿಕಿತ್ಸೆ ಮತ್ತು ಆರೈಕೆಯ ಮಟ್ಟವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಒಟ್ಟಾಗಿ ಕಾರ್ಯನಿರ್ವಹಣೆ ಮಾಡಲು ಪ್ರತಿಜ್ಞೆ ಮಾಡಿದೆ.

ಈ ಎರಡು ದೀರ್ಘಕಾಲದ ರೋಗಗಳನ್ನು ಹೊಂದಿರುವ ಜನರ ಜೀವನವನ್ನು ಧನಾತ್ಮಕವಾಗಿ ಪರಿಣಾಮ ಬೀರುವ ಕ್ರಿಯಾಯೋಜನೆಯನ್ನು ರಚಿಸುವ ನಿಟ್ಟಿನಲ್ಲಿ ಎರಡೂ ಸಂಸ್ಥೆಗಳು ಒಗ್ಗಟ್ಟಾಗಿ ಕೆಲಸ ಮಾಡುತ್ತವೆ. ಪ್ರಸ್ತಾವಿತ ಕ್ರಿಯಾ ಯೋಜನೆಯು ಕರ್ನಾಟಕದ ವೈದ್ಯಕೀಯ ಕಾಲೇಜುಗಳಾದ್ಯಂತ ಬಹು ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸುವುದು ಹಾಗೂ ಇಂತಹ ಸಮಸ್ಯೆಗಳ ಬಗ್ಗೆ ವೈದ್ಯರು ಮತ್ತು ರೋಗಿಗಳಿಗೆ ಶಿಕ್ಷಣವನ್ನು ಒಳಗೊಂಡಿರುತ್ತದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ- 5 ಪ್ರಕಾರ ಅಧಿಕ ತೂಕ ಅಥವಾ ಬೊಜ್ಜು (BMI =25.0 kg/m2) ಹೊಂದಿರುವ ಮಹಿಳೆಯರ ಶೇಕಡಾವಾರು ಪ್ರಮಾಣವು 2015-16 ರಲ್ಲಿ ಶೇ.23.3 ರಿಂದ 2019-20 ರಲ್ಲಿ ಶೇ.30.1 ಕ್ಕೆ ಹೆಚ್ಚಳವಾಗಿದೆ. ಇದೇ ಸಮಯದಲ್ಲಿ ಪುರುಷರಲ್ಲಿ ಶೇ.22.1 ರಿಂದ ಶೇ.30.9 ಕ್ಕೆ ಹೆಚ್ಚಳವಾಗಿದೆ. ಮಕ್ಕಳಲ್ಲಿ ಇದರ ಪ್ರಮಾಣ ಶೇ.3.2 ರಷ್ಟರವರೆಗೆ ಏರಿಕೆಯಾಗಿದೆ. ಅಲ್ಲದೇ, ಭಾರತದಲ್ಲಿ ಶೇ.67 ರಷ್ಟು ಜನರು ಅಧಿಕ ತೂಕ ಅಥವಾ ಬೊಜ್ಜಿನೊಂದಿಗೆ ಟೈಪ್ 2 ಡಯಾಬಿಟಿಸ್ (ಟಿ2ಡಿ) ಸಮಸ್ಯೆಯಲ್ಲಿದ್ದರೆ, ಸುಮಾರು ಶೇ.57% ರಷ್ಟು ಜನರು ಡಯಾಬಿಟಿಸ್ ಇದ್ದರೂ ಅದಕ್ಕೆ ಚಿಕಿತ್ಸೆ ಪಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಡಯಾಬಿಟಿಸ್ ಮತ್ತಿತರೆ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು, ಡಯಾಬಿಟಿಸ್ ಆರೈಕೆಯನ್ನು ಮಾಡುವುದು ಮತ್ತು ರೋಗಿಗಳಿಗೆ ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡುವಂತಹ ಕಾರ್ಯಗಳು ಜರೂರಾಗಿ ಆಗಬೇಕಿದೆ.

ಈ ಪ್ರತಿಜ್ಞೆ ಬಗ್ಗೆ ಮಾತನಾಡಿದ ಎನ್ಎನ್ಇಎಫ್ ನ ವ್ಯವಸ್ಥಾಪಕ ಟ್ರಸ್ಟಿ ವಿಕ್ರಾಂತ್ ಶ್ರೋತ್ರಿಯಾ ಅವರು, “ಮಧುಮೇಹ ಮತ್ತು ಬೊಜ್ಜು ಭಾರತದಲ್ಲಿ ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಮುಂದುವರಿದಿದೆ ಹಾಗೂ ಮಧುಮೇಹ ಮತ್ತು ಬೊಜ್ಜನ್ನು ನಿರ್ವಹಣೆ ಮಾಡುವುದು ದಿನನಿತ್ಯದ ಕೆಲಸವಾಗಿದೆ. ಆದ್ದರಿಂದ ನಾವು ರಾಜ್ಯ ಮತ್ತು ಪ್ರಾಥಮಿಕ ಆರೈಕೆ ಹಂತದಲ್ಲಿ ಇನ್ಸುಲಿನ್ ನಂತಹ ಚಿಕಿತ್ಸೆಗಳಿಗೆ ಉತ್ತಮ ಪ್ರವೇಶವನ್ನು ಖಚಿತಪಡಿಸಿಕೊಳ್ಳಬೇಕು. ಇಂದು ಆರೋಗ್ಯವು ರಾಷ್ಟ್ರೀಯ ಆದ್ಯತೆಯಾಗಿದೆ ಮತ್ತು ಕರ್ನಾಟಕವು ಈ ಮಹತ್ವದ ವಿಷಯದಲ್ಲಿ ಮುನ್ನಡೆಯುವುದನ್ನು ನೋಡಲು ಸ್ಫೂರ್ತಿದಾಯಕವಾಗಿದೆ. ಎನ್ಎನ್ಇಎಫ್ ನಮ್ಮ ವಿವಿಧ ಕಾರ್ಯಕ್ರಮಗಳ ಮೂಲಕ ಈ ರೂಪಾಂತರವನ್ನು ಚಾಲನೆ ಮಾಡಲು ಬದ್ಧವಾಗಿದೆ ಮತ್ತು ರೋಗಿಗಳ ಕೇಂದ್ರಿತ ಆರೈಕೆಯೊಂದಿಗೆ ಕೇಂದ್ರೀಕೃತವಾಗಿರುವ ಚೌಕಟ್ಟನ್ನು ರಚಿಸಲು ಇತರ ರಾಜ್ಯ ಸರ್ಕಾರಗಳೊಂದಿಗೆ ಪಾಲುದಾರಿಕೆಯನ್ನು ನಾವು ಎದುರು ನೋಡುತ್ತಿದ್ದೇವೆ’’ ಎಂದರು.

ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, “ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ನಮ್ಮ ರಾಜ್ಯ ಸರ್ಕಾರವು ಕಳೆದ 2 ವರ್ಷಗಳಿಂದ ಅತ್ಯಂತ ಕ್ರಿಯಾಶೀಲವಾಗಿದೆ. ಸಾಂಕ್ರಾಮಿಕ ರೋಗದ ನಂತರ ನಾವು ನಮ್ಮ ರಾಜ್ಯ ನಿವಾಸಿಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಅವಲೋಕಿಸಿದಾಗ ಮಧುಮೇಹ ಮತ್ತು ಬೊಜ್ಜು ಗಂಭೀರ ಸ್ವರೂಪದ್ದಾಗಿದ್ದು, ಈ ರೋಗಗಳು ಮೌನ ಕೊಲೆಗಾರರ ಎಂಬುದನ್ನು ಅರಿತುಕೊಂಡಿದ್ದೇವೆ’’ ಎಂದರು.
“ನೊವೊ ನಾರ್ಡಿಸ್ಕ್ ಎಜುಕೇಶನ್ ಫೌಂಡೇಶನ್ ನಂತಹ ಜಾಗತಿಕ ಮಟ್ಟದ ಸಂಸ್ಥೆಯು ಬೆಂಗಳೂರಿನಲ್ಲಿ ಭಾರತದ ತನ್ನ ಕೇಂದ್ರ ಕಚೇರಿಯನ್ನು ಸ್ಥಾಪಿಸಿರುವುದು ಸಂತಸ ತಂದಿದೆ. ಮಧುಮೇಹ ಮತ್ತು ಬೊಜ್ಜಿನಿಂದ ಉಂಟಾಗುವ ತೊಡಕುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಸಂಸ್ಥೆಯು ಕೆಲಸ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ. ಈ ಸಂಸ್ಥೆಯು ಕೆಲವು ಪರಿಣತಿ ಮತ್ತು ಜ್ಞಾನವನ್ನು ಕರ್ನಾಟಕದೊಂದಿಗೆ ಹಂಚಿಕೊಳ್ಳಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ’’ ಎಂದು ಅವರು ಹೇಳಿದರು.

ಆರೋಗ್ಯ ರಕ್ಷಣೆ ಮತ್ತು ಸುಸ್ಥಿರತೆಯ ಅಗತ್ಯತೆಗಳ ಬಗ್ಗೆ ಮಾತನಾಡಿದ ರಾಯಲ್ ಡ್ಯಾನಿಶ್ ಎಂಬೆಸ್ಸಿಯ ರಾಯಭಾರಿ ಫ್ರೆಡ್ಡಿ ಸ್ವೇನ್ ಅವರು, “ದೀರ್ಘಕಾಲದ ಕಾಯಿಲೆಗಳ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅರ್ಥಪೂರ್ಣವಾದ ಪರಿಣಾಮ ಬೀರಲು ನಾವು ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವಗಳು ಸಮಾನಮನಸ್ಕ ಪಾಲುದಾರರಿಗೆ ಸಾಮಾನ್ಯ ಗುರಿಗಳ ಮೇಲೆ ಕೆಲಸ ಮಾಡಲು ಉತ್ತಮ ಮಾರ್ಗವಾಗಿದೆ. ಎನ್ಎನ್ಇಎಫ್ ಮತ್ತು ಕರ್ನಾಟಕ ಸರ್ಕಾರದ ಈ ಪ್ರತಿಜ್ಞೆಯು ರಾಜ್ಯದಲ್ಲಿ ಮಧುಮೇಹ ಮತ್ತು ಬೊಜ್ಜನಿಂದ ಬಳಲುತ್ತಿರುವ ಜನರ ಆರೈಕೆಗೆ ಉತ್ತಮ ಅವಕಾಶವನ್ನು ಕಲ್ಪಿಸುವ ಮಹತ್ತರವಾದ ಪ್ರಗತಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ’’ ಎಂದು ಹೇಳಿದರು.

Comments are closed.