ಆರೋಗ್ಯ

ಭಂಡಾರಿ ವೇದಿಕೆ ಹಮ್ಮಿಕೊಂಡ ರಕ್ತದಾನ, ಆರೋಗ್ಯ ತಪಾಸಣೆ ಶಿಬಿರ ಮಾದರಿ, ಸಮಾಜಮುಖಿ ಕಾರ್ಯ‌: ಡಾ.‌ನಾಗೇಶ್

Pinterest LinkedIn Tumblr

ಕುಂದಾಪುರ: ಭಂಡಾರಿ ಯುವವೇದಿಕೆ ಕುಂದಾಪುರ, ಕೆ.ಎಂ.ಸಿ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಬೃಹತ್ ರಕ್ತದಾನ ಶಿಬಿರ ಡಿ.26 ಭಾನುವಾರ ಕುಂದಾಪುರ ಜ್ಯೂನಿಯರ್ ‌ಕಾಲೇಜು ವಠಾರದಲ್ಲಿ ನಡೆಯಿತು.

ಕುಂದಾಪುರ ಸಾರ್ವಜನಿಕ ಆಸ್ಪತ್ರೆ ವೈದ್ಯರಾದ ಡಾ. ನಾಗೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಜೀವನಶೈಲಿ, ಸೇವಿಸುವ ಆಹಾರ ಕ್ರಮದಿಂದ ವಿವಿಧ ಆರೋಗ್ಯ ಸಮಸ್ಯೆಗಳು ಬರುತ್ತದೆ. ಅದನ್ನು ಪ್ರಾಥಮಿಕವಾಗಿ ತಿಳಿದು ಪರಿಣಾಮಕಾರಿ ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬರು ರಕ್ತದ ಮಹತ್ವವನ್ನು ಅರಿಯುವ ಕಾರ್ಯವಾಗಬೇಕು. ರಕ್ತಕ್ಕೆ ತತ್ಸಮಾನವಾಗಿ ಕೃತಕವಾದ ಔಷಧವನ್ನು ಈವರೆಗೆ ಕಂಡುಕೊಳ್ಳಲಾಗಿಲ್ಲ. ರಕ್ತಕ್ಕೆ ರಕ್ತವೇ ಸಮಾನ. ಬೇರೆಬೇರೆ ರೋಗಗಳಿಂದ ಬಳಲುವ ವ್ಯಕ್ತಿಗಳನ್ನು ಉಳಿಸಿಕೊಳ್ಳಲು ರಕ್ತ ದಾನದಿಂದ ಮಾತ್ರ ಸಾಧ್ಯ. ಆರೋಗ್ಯವಂತ ಮನುಷ್ಯ ವರ್ಷದಲ್ಲಿ ಒಂದರಿಂದ ನಾಲ್ಕು ಬಾರಿ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವ ಮಹತ್ಕಾರ್ಯ ಮಾಡಬಹುದು. ಈ ನಿಟ್ಟಿನಲ್ಲಿ ರಕ್ತದಾನ ಹಾಗೂ ಆರೋಗ್ಯ ತಪಾಸಣೆಯಂತಹ ಸಮಾಜಮುಖಿ ಕಾರ್ಯ ಹಮ್ಮಿಕೊಂಡು ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕುರಿತು ಸೂಕ್ತ ಮಾಹಿತಿ ಹಾಗೂ ವ್ಯವಸ್ಥೆ ಕಲ್ಪಿಸಲು ಮುಂದಾದ ಸಂಘಟನೆ ಕಾರ್ಯ ಅಭಿನಂದನಾರ್ಹ ಎಂದರು.

ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಮಾತನಾಡಿ, ವೈದ್ಯಕೀಯ ವ್ಯವಸ್ಥೆಯಲ್ಲಿ ಅವೈಜ್ಞಾನಿಕ ವಿಚಾರಗಳನ್ನು ಪಾಲಿಸುವುದು ಸೂಕ್ತವಲ್ಲ. ಬದಲಾಗಿ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಂಡು ಉತ್ತಮ ಪರಿಹಾರ ಕಂಡುಕೊಳ್ಳಬೇಕು. ನಮ್ಮ ಕೆ.ಎಂ.ಸಿ ಆಸ್ಪತ್ರೆ ನಮ್ಮ ಹೆಮ್ಮೆಯಾಗಿದೆ. ಕೋಟ್ಯಾಂತರ ರೂ.‌ಮೌಲ್ಯದ ಉಪಕರಣಗಳ ಮೂಲಕ ಯಾವುದೇ ರೋಗಗಳ ಗುಣಪಡಿಸಲು ಈ ಆಸ್ಪತ್ರೆ ಮೂಲಕ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಕೆಎಂಸಿ ಆಸ್ಪತ್ರೆ ತಜ್ಞ ವೈದ್ಯರನ್ನು ಕರೆಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಟ್ಟ ಭಂಡಾರಿ ಯುವ ವೇದಿಕೆ ಕಾರ್ಯ ಶ್ಲಾಘನೀಯ ಎಂದರು.

ತಜ್ಞ ವೈದ್ಯರು, ಸಿಬ್ಬಂದಿಗಳಿಗೆ ಗೌರವ…
ಇದೆ ಸಂದರ್ಭ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಮಣಿಪಾಲ‌ ಕೆಎಂಸಿ ಆಸ್ಪತ್ರೆಯ ವಿವಿಧ ವಿಭಾಗಳ ತಜ್ಞ ವೈದ್ಯಾರಾದ ಡಾ. ಕಿರಣ್ ಹೆಬ್ಬಾರ್, ಡಾ. ಸತೀಶ್ ಪೈ, ಡಾ.ಸಚಿನ್ ಕುಮಾರ್‌, ಡಾ. ಹರ್ಷ ಸಾಗರ್, ಡಾ. ಅಭಿಷೇಕ್ ಸಮ, ಡಾ. ಅರುಣ್ ಜಿ., ಕುಂದಾಪುರ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ನಾಗೇಶ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಭಂಡಾರಿ ಯುವವೇದಿಕೆ ಕುಂದಾಪುರದ ಅಧ್ಯಕ್ಷ ಲೋಕೇಶ್‌ ಭಂಡಾರಿ ಕೋಟೇಶ್ವರ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಸುರೇಂದ್ರ ಶೆಟ್ಟಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀಧರ ಭಂಡಾರಿ ಬಿರ್ತಿ, ಮಾಜಿ ಪ್ರ. ಕಾರ್ಯದರ್ಶಿ ಸೋಮಶೇಖರ್ ಭಂಡಾರಿ, ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ, ಜೆ.ಸಿ.ಐ ಕುಂದಾಪುರ ಸಿಟಿ ಅಧ್ಯಕ್ಷ ವಿಜಯ ಭಂಡಾರಿ ತೆಕ್ಕಟ್ಟೆ, ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ಅಶೋಕ ಭಂಡಾರಿ ಕೋಣಿ, ಕುಂದಾಪುರ ಸವಿತಾ ಸಮಾಜದ ಅಧ್ಯಕ್ಷ ಸುಭಾಷ್ ಭಂಡಾರಿ ಗುಜ್ಜಾಡಿ, ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಸುಭಾಷ್ ಭಂಡಾರಿ ಹಂಗಳೂರು, ಭಾರತ ಶ್ರೇಷ್ಟ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಾಗರಾಜ ಖಾರ್ವಿ, ಭಂಡಾರಿ ಯುವವೇದಿಕೆ ಕುಂದಾಪುರದ ಗೌರವಾಧ್ಯಕ್ಷ ಹರೀಶ್ ಭಂಡಾರಿ ಮೊಳಹಳ್ಳಿ,‌ಉಪಾಧ್ಯಕ್ಷ ಸುದೇಶ್ ಭಂಡಾರಿ, ಗೌರವ ಸಲಹೆಗಾರ ಹರೀಶ್ ಭಂಡಾರಿ ಕುಂಭಾಸಿ, ಜ್ಯೂನಿಯರ್ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ಚಂದ್ರ ಶೆಟ್ಟಿ ಮೊದಲಾದವರಿದ್ದರು.

ನಿಶಾ ಭಂಡಾರಿ ಮಲ್ಯಾಡಿ ಪ್ರಾರ್ಥಿಸಿದರು. ವೈಭವ ಭಂಡಾರಿ ಸ್ವಾಗತಿಸಿ ಕಾರ್ಯಕ್ರಮ‌ ನಿರೂಪಿಸಿದರು.

(ವರದಿ- ಯೋಗೀಶ್ ಕುಂಭಾಸಿ)

 

 

 

Comments are closed.