ಕುಂದಾಪುರ: ಮೀನುಗಾರ ಸದಸ್ಯರ ಆರ್ಥಿಕ ಸಬಲೀಕರಣ, ಉಳಿತಾಯ, ಸಂಘಟನೆಯ ಉದ್ದೇಶದಿಂದ ಪ್ರಾರಂಭವಾದ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ರಜತ ಮಹೋತ್ಸವದ ಸಂಭ್ರಮದಲ್ಲಿದ್ದು, ಇದೇ ಡಿ.21 ರಂದು ಹೆಮ್ಮಾಡಿಯಲ್ಲಿ ರಜತ ಸಂಭ್ರಮ ನಡೆಯಲಿದೆ ಎಂದು ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ರಾಜೀವ ಎನ್.ಶ್ರೀಯಾನ್ ಹೇಳಿದರು.

ಕುಂದಾಪುರ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಇದರ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ., ಬೆಂಗಳೂರು ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಸ್ಮರಣ ಸಂಚಿಕೆ ಅನಾವರಣಗೊಳಿಸಲಿದ್ದು, ದ.ಕ, ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾ ಮಂಡಳದ ಅಧ್ಯಕ್ಷರು, ಶಾಸಕ ಯಶಪಾಲ್ ಸುವರ್ಣ ವಿದ್ಯಾರ್ಥಿವೇತನ ವಿತರಿಸಲಿದ್ದಾರೆ. ಕುಂದಾಪುರ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಿಶೇಷ ಚೇತನರಿಗೆ ಸಹಾಯಧನ ವಿತರಣೆ ಮಾಡಲಿದ್ದು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸ್ವ-ಸಹಾಯ ಗುಂಪುಗಳಿಗೆ ಪುರಸ್ಕಾರ ವಿತರಿಸಲಿದ್ದಾರೆ. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಿದ್ದು, ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ರಜತ ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಹಟ್ಟಿಯಂಗಡಿ ಮಾತನಾಡಿ, 1999 ಆಗಸ್ಟ್ 9 ರಂದು ಸಹಕಾರಿ ಕಾಯ್ದೆ ಕಾನೂನಿನ ಅಡಿಯಲ್ಲಿ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ., ಹೆಮ್ಮಾಡಿ ಹೆಸರಿನಲ್ಲಿ ನೋಂದಾವಣೆಗೊಂಡು 1999ರ ಅಕ್ಟೋಬರ್ 4ರಂದು ವಿದ್ಯುಕ್ತವಾಗಿ ಕಛೇರಿ ಕಾರ್ಯಾರಂಭ ಮಾಡಿತು. 1999-2000ನೇ ಪ್ರಥಮ ಆರ್ಥಿಕ ವರ್ಷದಲ್ಲಿ 1024 ಎ ತರಗತಿ ಮತ್ತು 83 ಸಿ ತರಗತಿ ಸದಸ್ಯರಿಂದ ರೂ. 686980 ಪಾಲು ಬಂಡವಾಳ ಮತ್ತು 463662 ರೂ. ಠೇವಣಿ ಸಂಗ್ರಹದೊಂದಿಗೆ ಕಾರ್ಯಾರಾಂಭಿಸಿದ ಸಂಸ್ಥೆ 31-3-2025ಕ್ಕೆ ಒಟ್ಟು 26994 ಸದಸ್ಯರಿಂದ ಒಟ್ಟು 1,41,43,610 ರೂ. ಪಾಲು ಭಂಡವಾಳ ಸಂಗ್ರಹಿಸಿರುವುದರ ಜೊತೆಗೆ ರೂ. 57.40 ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿದೆ. 2024-25ನೇ ಆರ್ಥಿಕ ವರ್ಷದಲ್ಲಿ ರೂ. 247.95 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ ಮಾಡಿ ಒಂದು ಸದೃಢ ಸಂಸ್ಥೆಯಾಗಿ ಸಹಕಾರಿ ಕ್ಷೇತ್ರದಲ್ಲಿ ತನ್ನದೆ ವೈಶಿಷ್ಟತೆಯಿಂದ ಜನ ಮನ್ನಣೆಗೆ ಪಾತ್ರವಾಗಿದೆ ಎಂದರು.
ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಆಗಿನ ಹಾಗೂ ಈಗಿನ ಅಧ್ಯಕ್ಷರಾಗಿರುವ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರ ಬೆಂಬಲ, ಸಹಕಾರ, ಆರ್ಥಿಕ ಶಕ್ತಿಯ ಕೊಡುಗೆ, ನಾಡೋಜ ಡಾ.ಜಿ.ಶಂಕರ್ ಆವರ ಮಾರ್ಗದರ್ಶನ, ಪ್ರೋತ್ಸಾಹ ಸಂಘ ಇಷ್ಟೊಂದು ಪ್ರಬಲ ಬೆಳೆಯಲು ಕಾರಣವಾಯಿತು. ಅಂದಿನ ಶಾಸಕರಾದ ಕೆ.ಗೋಪಾಲ ಪೂಜಾರಿಯವರು ಸಂಘದ ಆರಂಭಕ್ಕೆ ಸ್ಪೂರ್ತಿಯಾದರು. ರಾಮು ಎನ್. ಚಂದನ್ ಅವರು ದೊಡ್ಡ ಮೊತ್ತದ ಷೇರು ನೀಡಿ ಪ್ರೋತ್ಸಾಹಿಸಿದರು. ಸದಸ್ಯರ ಸಹಕಾರ, ಆಡಳಿತ ಮಂಡಳಿ, ನೌಕರ ವೃಂದದ ಪ್ರಾಮಾಣಿಕ ಪರಿಶ್ರಮದಿಂದ ಸಂಘ ಉತ್ತಮ ಸೇವೆ ನೀಡುತ್ತಾ ಪ್ರತೀ ವರ್ಷವೂ ಲಾಭದಲ್ಲಿ ಮುನ್ನೆಡೆಯುವಂತಾಯಿತು ಎಂದರು.
ಸದಸ್ಯರಲ್ಲಿ ಉಳಿತಾಯ ಮತ್ತು ಸಂಘಟನೆಯನ್ನು ಜಾಗೃತಿಗೊಳಿಸಲು ಮಹಿಳಾ ಸದಸ್ಯರನ್ನು ಒಗ್ಗೂಡಿಸಿ ತಲಾ 10 ಜನರಿರುವ 850 ಮತ್ಯಜ್ಯೋತಿ ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಿ ಗುಂಪಿನ ಆಂತರಿಕ ಸಾಲ ಹೊರತುಪಡಿಸಿ, ಸಂಸ್ಥೆಯ ಸ್ವಂತ ನಿಧಿಯಿಂದ ರೂ. 12.90 ಕೋಟಿ ಸಾಲ ಸೌಲಭ್ಯ ಒದಗಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ದೊರಕಿಸಿಕೊಡುವುದರ ಜೊತೆಗೆ ರಾಜ್ಯ ಸರ್ಕಾರ ವಾಣಿಜ್ಯ ಬ್ಯಾಂಕ್ ಮೂಲಕ ಕೊಡಮಾಡಿದ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯವನ್ನು ಒದಗಿಸಿ ಕೊಟ್ಟಿರುವುದಲ್ಲದೇ, ಸುಮಾರು ರೂ. 17 ಕೋಟಿ ಸಾಲ ಮನ್ನಾದ ಸೌಲಭ್ಯವನ್ನು ಜನರಿಗೆ ಲಭಿಸಲು ಪ್ರಯತ್ನಿಸಿ ಯಶಸ್ವಿಯಾಗಿದೆ ಎಂದರು.
ಸದ್ಯಸ್ಯರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ಸಹಕಾರಿ ಸದಸ್ಯರಿಗೆ ಗೌರವಿಸುವುದರ ಜೊತೆಗೆ ಸಹಕಾರಿ ಯೂನಿಯನ್ ಮತ್ತು ಸಹಕಾರಿ ಇಲಾಖೆ ಜೊತೆಗೂಡಿ ವಿವಿಧ ಸಹಕಾರಿ ಸಂಘಗಳ ಸಿಬ್ಬಂದಿ ಮತ್ತು ನಿರ್ದೇಶಕರಿಗೆ ವಿವಿಧ ಮಾಹಿತಿ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಸಾಲ ವಸೂಲಾತಿ, ಆರ್ಥಿಕ ಸದ್ಬಳಕೆ, ಸೇವೆ, ದಾಖಲಾತಿ ನಿರ್ವಹಣೆ ಇತ್ಯಾದಿಗಳಿಂದಾಗಿ ಸಂಸ್ಥೆಯು “ಎ” ತರಗತಿ ಆಡಿಟ್ ವರ್ಗೀಕರಣದ ಜೊತೆಗೆ ಪ್ರಥಮ ಆರ್ಥಿಕ ವರ್ಷ ಹೊರತುಪಡಿಸಿ ಲಾಭದೊಂದಿಗೆ ಸತತವಾಗಿ ಮುನ್ನಡೆಯುತ್ತಿದ್ದು, ಆರ್ಥಿಕ ವರ್ಷದಲ್ಲಿ ರೂ. 90.77 ಲಕ್ಷ ವಾರ್ಷಿಕ ನಿವ್ವಳ ಲಾಭ ಗಳಿಸಿ ಯಶಸ್ವಿಯಾಗಿ ಪ್ರಗತಿ ಪಥದತ್ತ ಸಾಗುತ್ತಿದೆ. ಸಂಘದ ಸಾಧನೆಗೆ ಕೇಂದ್ರ ಸರ್ಕಾರದ ಎನ್.ಸಿ.ಡಿ.ಸಿ ಆವಾರ್ಡ್, ರಾಜ್ಯ ಮೀನುಗಾರಿಕಾ ಇಲಾಖೆಯಿಂದ ಪ್ರಶಸ್ತಿ, ಸಹಕಾರ ಸಪ್ತಾಹದಲ್ಲಿ ಎರಡು ಬಾರಿ ಪ್ರಶಸ್ತಿ ಲಭಿಸಿದೆ ಎಂದರು.
ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಸುಮಾರು ಐದು ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿವೇತನ ವಿತರಣೆ, ವಿಶೇಷಚೇತನರಿಗೆ ಸಹಾಯಧನ ವಿತರಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಸದಸ್ಯರಿಗೆ ಉಡುಗೊರೆ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷೆ ಸುಮತಿ ಬಿ. ಮೊಗವೀರ, ಹಿರಿಯ ಸದಸ್ಯರಾದ ಎಂ.ಎ. ಸುವರ್ಣ, ಸಂಘದ ನಿರ್ದೇಶಕರಾದ ಲೋಹಿತಾಶ್ಚ ಆರ್.ಕುಂದರ್, ರಾಮ ಮೊಗವೀರ ಕೊಡ್ಲಾಡಿ, ರಾಮ ಮೊಗವೀರ ಬೈಂದೂರು, ಸುಶೀಲ ಮೊಗವೀರ, ಶ್ಯಾಮಲ ಜಿ.ಚಂದನ್, ಅಶೋಕ ಆರ್. ಸುವರ್ಣ ಉಪಸ್ಥಿತರಿದ್ದರು.
Comments are closed.