ಆರೋಗ್ಯ

ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ತಪ್ಪದೇ ಕೋವಿಡ್ ಲಸಿಕೆ ನೀಡಿ: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಅರ್ಹರಿರುವ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡುವುದರೊಂದಿಗೆ ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತರಲು ಮುಂದಾಗಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾ. ಪಿ.ವಿಶ್ವನಾಥ ಶೆಟ್ಟಿ ಹೇಳಿದರು. ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 9.99 ಲಕ್ಷ ಜನರಿಗೆ ಕೋವಿಡ್ ನಿರೋಧಕ ಲಸಿಕೆ ಹಾಕಲು ಗುರುತಿಸಲಾಗಿದ್ದು, ಈಗಾಗಲೇ 9.22 ಲಕ್ಷ ಜನರಿಗೆ ಪ್ರಥಮ ಡೋಸ್ ಲಸಿಕೆ ನೀಡುವುದರೊಂದಿಗೆ, 93.5 ರಷ್ಟು ಪ್ರಗತಿಯಾಗಿದೆ. ಇದುವರೆಗೆ 2 ನೇ ಡೋಸ್ ಗೆ ಅರ್ಹರಿರುವ 6.29 ಲಕ್ಷ ಮಂದಿಯಲ್ಲಿ 5.81 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಶೇ. 58.16 ರಷ್ಟು ಮಂದಿ 2 ಡೋಸ್ ಲಸಿಕೆಯನ್ನು ಪಡೆದಿರುತ್ತಾರೆ. ಇದುವರೆಗೆ ಲಸಿಕೆಯನ್ನು ಪಡೆಯದೇ ಇರುವವರು ಶೇ.8 ರಷ್ಟಿದ್ದು, ಇವರುಗಳು ಅನ್ಯ ಕಾರಣಗಳಿಂದ ಲಸಿಕೆ ಪಡೆಯಲು ಬಾರದೇ ಇರುವುದು ಕಂಡು ಬಂದಿರುತ್ತದೆ , ಇವರುಗಳನ್ನು ಸ್ಥಳೀಯ ಜನಪ್ರತಿನಿಧಿಗಳು , ಇಲಾಖಾಧಿಕಾರಿಗಳು ಹಾಗೂ ಸಮಾಜದ ಮುಖಂಡರುಗಳು ಮನವೊಲಿಸುವುದರೊಂದಿಗೆ ಲಸಿಕೆಯನ್ನು ಪಡೆಯುವಂತೆ ಉತ್ತೇಜಿಸಬೇಕು ಎಂದರು.

ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳು ಸಹಾ ಪ್ರತಿಶತ 100 ರಷ್ಟು ಸಾರ್ವಜನಿಕರು ಲಸಿಕೆಯನ್ನು ಪಡೆಯಲು ಕೈಜೋಡಿಸಬೇಕು. ಈ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು , ಸಾರ್ವಜನಿಕರು ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು , ತಮ್ಮ ದಿನನಿತ್ಯದ ಭಾಗವನ್ನಾಗಿಸಿಕೊಳ್ಳಬೇಕು ಎಂದರು.ಮೀನು ಹಿಡಿಯಲು ತೆರಳುವ ಕಾರ್ಮಿಕರು ಬಾಕಿ ಉಳಿದವರಲ್ಲಿ ಹೆಚ್ಚು ಇರುವುದು ಕೇಳಿಬರುತ್ತಿದೆ ಈ ಬಗ್ಗೆ ಸಂಬಂದಪಟ್ಟ ಇಲಾಖಾಧಿಕಾರಿಗಳು ಇವರುಗಳಿಗೆ ಲಸಿಕೆ ನೀಡುವ ಜವಾಬ್ದಾರಿ ತೆಗದುಕೊಂಡು ಅವರುಗಳಿಗೆ ಲಸಿಕೆ ಕೊಡಿಸಬೇಕು, ಹೊರ ರಾಜ್ಯಗಳಿಗೆ ತೆರಳಿರುವ ಜಿಲ್ಲೆಯ ನಾಗರೀಕರು ತಮ್ಮ ಮನೆಗಳಿಗೆ ಆಗಮಿಸಿದಾಗ , ಅವರು ಲಸಿಕೆ ಪಡೆದಿರುವ ಕುರಿತು ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

ಈಗಾಗಲೇ ಜಿಲ್ಲೆಯಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗಿದ್ದು, ಭೌತಿಕ ತರಗತಿಗಳು ಸಹ ನಡೆಯುತ್ತಿವೆ ಆದರೆ ಕೆಲವು ಖಾಸಗಿ ಸಂಸ್ಥೆಗಳ ಶಿಕ್ಷಕರು ಪೂರ್ಣ ಪ್ರಮಾಣದ ಲಸಿಕೆಯನ್ನು ಪಡೆಯದೇ ಇರುವುದು ಕಂಡು ಬಂದಿದೆ , ಇವರುಗಳ ಮೆಲೆ ನಿರ್ದಾಕ್ಷಿಣ್ಯವಾದ ಕ್ರಮಗಳನ್ನು ಕೈಗೊಂಡು , ತ್ವರಿತವಾಗಿ ಲಸಿಕೆ ಪಡೆಯುವಂತೆ ನೋಡಿಕೊಳ್ಳಬೇಕು , ಶಾಲೆಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ ಕೋವಿಡ್ ಮಾರ್ಗಸೂಚಿಗಳು ಪಾಲನೆಯಾಗುತ್ತಿವೆಯೇ ಎಂಬ ಬಗ್ಗೆ ಪರಿಶೀಲಿಸಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರು ವಿವಿಧ ಸೌಲಭ್ಯಗಳನ್ನು ಕೋರಿ ಅರ್ಜಿಗಳನ್ನು ಸಲ್ಲಿಸಿದಾಗ , ಅವುಗಳಲ್ಲಿರುವ ಸಣ್ಣಪುಟ್ಟ ತಪ್ಪುಗಳಿಗೆ ಅರ್ಜಿಗಳನ್ನು ವಜಾಗೊಳಿಸಿದೆ , ಆವುಗಳನ್ನು ಅರ್ಜಿದಾರರಿಂದ ಸರಿಪಡಿಸಿ ನಿಯಮಾನುಸಾರ ವಿಲೇವಾರಿ ಮಾಡಿ, ಅವರುಗಳಿಗೆ ನ್ಯಾಯ ಒದಗಿಸಬೇಕು ಎಂದರು
ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಇರುವ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರದಲ್ಲಿಯೇ ವಿಲೇವಾರಿ ಮಾಡಬೇಕೆಂದು ಸೂಚನೆ ನೀಡಿದರು.

ಎಲ್ಲಾ ಇಲಾಖೆಗಳು, ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು , ಸಿಬ್ಬಂದಿಗಳು ಅಂದಿನ ದಿನಗಳಲ್ಲಿಯೇ ವಿಳಂಬವಿಲ್ಲದೇ , ತಮ್ಮ ಕಾರ್ಯಗಳನ್ನು ಬಾಕಿ ಇಡದೇ ವಿಲೇವಾರಿ ಮಾಡುವುದು ಸೂಕ್ತ ಎಂದ ಅವರು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳು ಅಗಿಲ್ಲವೆಂಬ ದೂರುಗಳು ಬಾರದ ರೀತಿಯಲ್ಲಿ ಎಚ್ಚರಿಕೆ ವಹಿಸಿ ಕೆಲಸ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು. ಕೆಲವು ಗ್ರಾಮೀಣ ಭಾಗದಲ್ಲಿ ಮೊಬೈಲ್ ನೆಟ್ವರ್ಕ್ನ ಸಂಪರ್ಕಗಳು ಲಭ್ಯವಾಗುತ್ತಿಲ್ಲವೆಂಬ ಬಗ್ಗೆ ದೂರುಗಳು ಕೇಳಿಬರುತ್ತಿವೆ , ಸರ್ಕಾರಿ ಸೇರಿದಂತೆ ಖಾಸಗಿ ಸಂಸ್ಥೆಗಳು ಮೊಬೈಲ್ ಟವರ್ ಗಳ ನಿರ್ಮಾಣಕ್ಕೆ ಅರ್ಜಿಗಳನ್ನು ಸಲ್ಲಿಸಿದಾಗ , ವಿಳಂಬವಿಲ್ಲದೇ ನಿಯಮಾನುಸಾರ ಅವುಗಳಿಗೆ ಸ್ಥಳೀಯ ಸಂಸ್ಥೆಗಳು ಅನುಮತಿ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರನ್ , ಲೋಕಾಯುಕ್ತ ಎಸ್ಪಿ ಕುಮಾರಸ್ವಾಮಿ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.