ಆರೋಗ್ಯ

ಸೋಂಕಿತರನ್ನು ಕೋವಿಡ್‌ಕೇರ್ ಸೆಂಟರ್’ಗೆ ವರ್ಗಾಯಿಸಿ; ನಿತ್ಯ 5000ಕ್ಕೂ ಹೆಚ್ಚು ಟೆಸ್ಟ್ ನಡೆಸಿ- ಡಾ|| ನವೀನ್ ಭಟ್ ಸೂಚನೆ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿನ ಕೋವಿಡ್ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್‌ಕೇರ್ ಸೆಂಟರ್‌ಗಳಿಗೆ ವರ್ಗಾಯಿಸಿ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ನವೀನ್ ಭಟ್ ಸೂಚನೆ ನೀಡಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಕೈಗೊಳ್ಳುವ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೋಂಕಿತ ವ್ಯಕ್ತಿಗಳನ್ನು ಗುರುವಾರದಿಂದ ಕಡ್ಡಾಯವಾಗಿ ಕೋವಿಡ್‌ಕೇರ್ ಸೆಂಟರ್‌ಗಳಿಗೆ ವರ್ಗಾಯಿಸಿ ಅವರುಗಳಿಗೆ ಉತ್ತಮ ಚಿಕಿತ್ಸೆ ನೀಡುವುದರಿಂದ ಕೊರೋನಾ ಸೋಂಕು ಹರಡುವಿಕೆಯ ಸರಪಳಿಯನ್ನು ಕಡಿತಗೊಳಿಸಲು ಸಾಧ್ಯ, ಈ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿಯೂ ಕೋವಿಡ್‌ಕೇರ್ ಸೆಂಟರ್‌ಗಳನ್ನು ತೆರೆದು, ಅಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಕೊರೋನಾ ಪೀಡಿತರಿಗೆ ಆರೈಕೆ ಮಾಡಲು ಮುಂದಾಗಬೇಕು ಎಂದ ಅವರು ಕೋವಿಡ್‌ಕೇರ್ ಸೆಂಟರ್‌ಗಳಿಗೆ ಅಗತ್ಯ ಇರುವ ವೈದ್ಯರು ಶುಶ್ರೂಷಕರು ಮತ್ತಿತರ ಸಿಬ್ಬಂದಿಗಳನ್ನು ಅಗತ್ಯಕ್ಕನುಣವಾಗಿ ನಿಯೋಜಿಸಬೇಕು ಎಂದು ಸೂಚಿಸಿದರು.

(ಸಾಂದರ್ಭಿಕ ಚಿತ್ರ)

ಜಿಲ್ಲೆಯಲ್ಲಿ ಪ್ರತಿದಿನ 5000 ಕ್ಕೂ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಪರೀಕ್ಷೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಗೆ ಸೂಚನೆ ನೀಡಿದ ಅವರು, ಗ್ರಾಮ ಪಂಚಾಯತ್‌ಗಳು ಕೋವಿಡ್ ಪರೀಕ್ಷೆ ಮಾಡಲು ಅಗತ್ಯ ಸಹಕಾರ ನೀಡುವಂತೆ ಸೂಚಿಸಲಾಗುವುದು ಎಂದರು.

ಮಹಾರಾಷ್ಟ್ರ ,ಕೇರಳ ಸೇರಿದಂತೆ ಹೊರ ರಾಜ್ಯಗಳಿಂದ ರೈಲುಗಳ ಮೂಲಕ ಆಗಮಿಸುವವರು ಕಡ್ಡಾಯವಾಗಿ 72 ಗಂಟೆ ಅವಧಿಯ ಒಳಗೆ ಪಡೆದ ಆರ್.ಟಿ.ಪಿ.ಸಿ.ಆರ್ ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರುವ ಬಗ್ಗೆ ತಪಾಸಣೆ ಮಾಡಬೇಕು, ನೆಗೆಟಿವ್ ವರದಿ ಇಲ್ಲದೆ ಬಂದವರಿಗೆ ಸ್ಥಳದಲ್ಲಿಯೇ ಪರೀಕ್ಷೆಯನ್ನು ಮಾಡಬೇಕು ಎಂದರು.

ಕೋವಿಡ್ ಸೋಂಕಿತರ ಮನೆಗಳನ್ನು ಕಡ್ಡಾಯವಾಗಿ ಸೀಲ್‌ಡೌನ್ ಮಾಡಬೇಕು ಎಂದ ಅವರು 5 ಕ್ಕಿಂತ ಹೆಚ್ಚಿನ ಪ್ರಕರಣಗಳು ಒಂದೇ ಪರಿಸರದಲ್ಲಿ ಕಂಡು ಬಂದಲ್ಲಿ ಕಂಟೇನ್ಮೆಂಟ್ ಝೋನ್‌ಗಳಾಗಿ ಘೋಷಿಸಿ ಅವುಗಳ ಮೇಲೆ ನಿಗಾ ವಹಿಸುವ ಕೆಲಸವಾಗಬೇಕು ಎಂದರು.

ಸಂಭಾವ್ಯ ಕೋವಿಡ್ ಮೂರನೇ ಅಲೆ ಹರಡುವುದನ್ನು ಸಮರ್ಪಕವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಬೇಕು. ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ 1000 ಬೆಡ್ ಗಳು ಕಾಯ್ದಿರಿಸುವ ಅಗತ್ಯವಿದೆ ಎಂದರು.

ಗ್ರಾಮೀಣ ಭಾಗಗಳಲ್ಲಿ ಟಾಸ್ಕ್ ಪೋರ್ಸ್ ಸಮಿತಿಗಳು ಕಾರ‍್ಯ ಪ್ರವೃತ್ತಿಯಾಗುವುದರೊಂದಿಗೆ ಕೋರೋನಾ ನಿಯಂತ್ರಣಕ್ಕೆ ಮುಂದಾಗಬೇಕು ಎಂದ ಅವರು, ಸೋಂಕಿತರನ್ನು ಕೋವಿಡ್‌ಕೇರ್ ಸೆಂಟರ್ ಗೆ ವರ್ಗಾಯಿಸಲು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ, ಗ್ರಾಮ ಲೆಕ್ಕಿಗರು, ಪಿ.ಡಿ.ಒ ಗಳು ಹಾಗೂ ಪೋಲಿಸ್ ಸಿಬ್ಬಂದಿಗಳು ಸಹಕಾರ ನೀಡಬೇಕು ಎಂದು ಸೂಚನೆ ನೀಡಿದರು.

ಪ್ರತಿದಿನ ಸಂಜೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರುಗಳು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರ ಸ್ಥಿತಿಗತಿ ಬಗ್ಗೆ ಸಭೆ ನಡೆಸಿ, ಚರ್ಚಿಸಿ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಲಸಿಕಾ ಕೇಂದ್ರಗಳಲ್ಲಿ ಹೆಚ್ಚು ಜನಸಂದಣಿಯನ್ನು ತಡೆಯಲು ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಂಡು ಲಸಿಕೆ ನೀಡುವ ಕಾರ್ಯ ಮಾಡಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ , ಉಡುಪಿ ,ಕುಂದಾಪುರ ಮತ್ತು ಬೈಂದೂರು ರೈಲ್ವೆ ನಿಲ್ದಾಣದಲ್ಲಿ 24*7 ಕಾರ್ಯನಿರ್ವಹಿಸುವ ತಪಾಸಣಾ ಕೆಂದ್ರಗಳನ್ನು ತರೆದು, ಮಹಾರಾಷ್ಟ ಮತ್ತು ಕೇರಳದಿಂದ ಬರುವವರನ್ನು ತಪಾಸಣೆ ನಡೆಸಬೇಕು, ಈ ತಂಡದಲ್ಲಿ ವೈದ್ಯರು, ಪೊಲೀಸ್ ಮತ್ತು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ , ಗುರುವಾರದಿಂದಲೇ 3 ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ಗಳು ಕಾರ್ಯಾರಂಭ ಮಾಡುವಂತೆ ಎಲ್ಲಾ ಅಗತ್ಯ ಸಿದ್ದತೆ ಮಾಡಿಕೊಳ್ಳಿ ಎಂದರು.

ಸಾರ್ವಜನಿಕರು ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಪಾಡದೇ ಇರುವುದು ಕಂಡು ಬರುತ್ತಿದ್ದು, ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳಿಗೆ ನಿಗಾ ವಹಿಸುವುದರೊಂದಿಗೆ ನಿಯಮ ಉಲ್ಲಂಘಿಸಿದ್ದಲ್ಲಿ ದಂಡ ವಿಧಿಸಲು ಮುಂದಾಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ.ನಾಗಭೂಷಣ್‌ ಉಡುಪ, ಹೆಚ್ಚುವರಿ ಪೋಲಿಸ್ ಅಧೀಕ್ಷಕ ಕುಮಾರ್‌ಚಂದ್ರ, ಕುಂದಾಪುರ ಉಪವಿಭಾಗಧಿಕಾರಿ ರಾಜು, ತಹಶೀಲ್ದಾರರು ಪ್ರದೀಪ್‌ ಎಸ್‌. ಕುರ್ಡೆಕರ್, ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.