ಉಡುಪಿ: ರಾಜ್ಯದ ಉಡುಪಿ ಜಿಲ್ಲೆ ಸೇರಿದಂತೆ 7 ಜಿಲ್ಲಾ ಕೇಂದ್ರಗಳಲ್ಲಿ ಏಪ್ರಿಲ್ 10ರಿಂದ 20ರವರೆಗೆ ಕೊರೋನಾ ಹಿನ್ನೆಲೆ ರಾತ್ರಿ ಕರ್ಪ್ಯೂ ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಗುರುವಾರ ನಡೆದ ಸಭೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಏಪ್ರಿಲ್ 10 ರಿಂದ 20 ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಬೆಂಗಳೂರು ನಗರ, ಮೈಸೂರು ನಗರ, ಮಂಗಳೂರು, ಕಲಬುರ್ಗಿ, ಬೀದರ್, ತುಮಕೂರು, ಉಡುಪಿ, ಮಣಿಪಾಲದಲ್ಲಿ ನೈಟ್ ಕೊರೋನಾ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಲ್ಲದೆ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಮತ್ತೆ ಕಠಿಣ ನಿಯಮ ಜಾರಿಗೊಳಿಸಲಾಗುತ್ತದೆ ಎನ್ನಲಾಗಿದೆ.
ರಾತ್ರಿ ವೇಳೆ ಜನರ ಓಡಾಟಕ್ಕೆ ನಿರ್ಬಂಧ ಇರುತ್ತದೆ. ಮದುವೆ ಸಮಾರಂಭಗಳಿಗೆ ಇತಿ ಮಿತಿ ಇರಬೇಕು. ಜನರು ಹೊರಗೆ ಓಡಾಡುವಂತಿಲ್ಲ.10 ಗಂಟೆಯ ಒಳಗೆ ವ್ಯಾಪಾರ-ವಹಿವಾಟು ಬಂದ್ ಮಾಡುವಂತೆ ಆದೇಶದಲ್ಲಿ ಹೇಳಲಾಗುತ್ತದೆ.
ಆರೋಗ್ಯ ಸಚಿವ ಕೆ.ಸುಧಾಕರ್ ಈ ಬಗ್ಗೆ ಮಾತನಾಡಿ, ಜನರಿಗೆ ಕೊರೊನಾ ಪಿಡುಗು ಇನ್ನೂ ಹೋಗಿಲ್ಲ ಎನ್ನುವುದನ್ನು ನೆನಪಿಸುವ ಉದ್ದೇಶದಿಂದ ಕೊರೊನಾ ಕರ್ಫ್ಯೂ ಜಾರಿ ಮಾಡುತ್ತಿದ್ದೇವೆ. ಕೊರೊನಾ ರಾತ್ರಿಹೊತ್ತು ಮಾತ್ರ ಬರುತ್ತಾ? ಹಗಲು ಬರಲ್ವಾ ಎಂದು ಕೆಲವರು ಕೇಳುತ್ತಿರುತ್ತಾರೆ. ‘ಇದು ಜನರಿಗೆ ಎಚ್ಚರಿಕೆ ನೀಡುವ ಪ್ರಯತ್ನ’ ಎಂದು ಅಂಥವರಿಗೆ ಉತ್ತರಿಸುತ್ತೇನೆ. ರಾತ್ರಿ 10ರ ನಂತರ ಅನಗತ್ಯ ಓಡಾಟ ನಿರ್ಬಂಧಿಸುವುದು ನಮ್ಮ ಉದ್ದೇಶ. ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತೇವೆ, ಅಗತ್ಯ ಸೇವೆಗಳು ಎಂದಿನಂತೆ ಇರುತ್ತವೆ ಎಂದು ಹೇಳಿದರು.
Comments are closed.