ಆರೋಗ್ಯ

“ವಿದ್ಯಾರ್ಥಿಗಳು ನಮ್ಮ ದೇಶದ ನಿಜವಾದ ಆಸ್ತಿ” :ಕೆ. ಪ್ರಕಾಶ್ ಶೆಟ್ಟಿ – ಎಂ ಆರ್ ಗ್ರೂಪ್‌ನಿಂದ ಅಶಕ್ತರಿಗೆ 1.25 ಕೋಟಿ ರೂ. ನೆರವು ವಿತರಣೆ

Pinterest LinkedIn Tumblr

ಮಂಗಳೂರು: ಎಂ ಆರ್ ಜಿ ಗ್ರೂಪ್ ಇದರ ವತಿಯಿಂದ ಅನಾರೋಗ್ಯ ಪೀಡಿತರಿಗೆ, ಅಶಕ್ತರಿಗೆ, ವಿದ್ಯಾಭ್ಯಾಸದ ನೆರವಿಗೆ 1,25,75,000 ಕೋಟಿ ರೂ. ಮೊತ್ತದ ಸಹಾಯಧನ ವಿತರಣಾ ಕಾರ್ಯಕ್ರಮ ಸೋಮವಾರ ಸಂಜೆ ಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಪ್ರಕಾಶಭಿನಂದನ ಆಯ್ಕೆ ಸಮಿತಿ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಫಲಾನುಭವಿಗಳ ಪಟ್ಟಿಯನ್ನು ವಾಚಿಸಿದರು.

ಬಳಿಕ ಮಾತಾಡಿದ ಎಂ ಆರ್ ಜಿ ಗ್ರೂಪ್ ಸಂಸ್ಥಾಪಕ ಕೆ. ಪ್ರಕಾಶ್ ಶೆಟ್ಟಿ ಅವರು, “1959 ರ ಜುಲೈ 19ರಂದು ನಾನು ಜನಿಸಿದೆ. ನಾನು ಅಂದಿನಿಂದ 20 ವರ್ಷಗಳ ಕಾಲ ಅನುಭವಿಸಿದ ಸಂಕಷ್ಟ ಇನ್ನು ಯಾರಿಗೂ ಬರಬಾರದು ಎಂಬ ಉದ್ದೇಶದಿಂದ ಅಶಕ್ತರಿಗೆ ಸಹಾಯ ಮಾಡುವ ನಿರ್ಧಾರ ಕೈಗೊಂಡೆ.

ಅನಂತರ ಬೆಂಗಳೂರಿಗೆ ಹೋಗಿ ಸಾಹಸಮಯವಾಗಿ ಜೀವನ ಕಟ್ಟಿಕೊಂಡೆ. ಇಂದು ಸಹಾಯ ಪಡೆದಿರುವ ವಿದ್ಯಾರ್ಥಿಗಳು ನಮ್ಮ ದೇಶದ ಆಸ್ತಿ, ಕಷ್ಟ ಎಲ್ಲರಿಗೂ ಬರುತ್ತದೆ, ಯಾವುದೂ ಶಾಶ್ವತವಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಒಳಿತಾಗುತ್ತದೆ. ವಿದ್ಯಾರ್ಥಿಗಳು, ಅಶಕ್ತರು ಎದೆಗುಂದಬೇಕಿಲ್ಲ ಇಂದು ನಿಮ್ಮಲ್ಲಿ ಒಬ್ಬ ಪ್ರಕಾಶ್ ಶೆಟ್ಟಿ ಇರಬಹುದು ಆದರೆ ನಾಳೆ ನೂರಾರು ಪ್ರಕಾಶ್ ಶೆಟ್ಟಿ ಅಂತಹವರು ಹುಟ್ಟುತ್ತಾರೆ. ಇಂದು ನನ್ನ ಸಂಸ್ಥೆಯಲ್ಲಿ ನೂರಾರು ಮಂದಿ ಕಷ್ಟಪಟ್ಟು ದುಡಿದ ಕಾರಣ ನಾನು ಇಂದು ನಿಮಗೆ ಸಹಾಯ ಮಾಡಲು ಸಾಧ್ಯವಾಗಿದೆ.” ಎಂದರು.

ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ 540ಕ್ಕೂ ಹೆಚ್ಚು ಸಂತ್ರಸ್ತರಿಗೆ ಸಹಾಯಧನ ವಿತರಿಸಿದ್ದು, ಅವರಲ್ಲಿ 50,000 ರೂ. ಚೆಕ್ ಅನ್ನು 50 ಜನರಿಗೆ, 25,000 ರೂ. ಚೆಕ್ ಅನ್ನು 160 ಜನರಿಗೆ, 20,000 ರೂ. ಚೆಕ್ ಅನ್ನು 60 ಜನರಿಗೆ,15,000 ರೂ. ಚೆಕ್ ಅನ್ನು 25 ಜನರಿಗೆ ಮತ್ತು 10,000 ರೂ. ಮೊತ್ತದ ಚೆಕ್ ಅನ್ನು 250 ಜನರಿಗೆ ವಿತರಿಸಲಾಯಿತು.

ಎಂಡೋಸಲ್ಫಾನ್ ಪೀಡಿತರು, ಕ್ಯಾನ್ಸರ್, ಕಿಡ್ನಿ ವೈಫಲ್ಯ, ಬುದ್ಧಿಮಾಂದ್ಯತೆ, ಪಕ್ಷವಾತ, ಬೆನ್ನುಹುರಿ ಮುರಿತಕ್ಕೊಳಗಾಗಿ ಹಾಸಿಗೆ ಹಿಡಿದಿರುವ ರೋಗಿಗಳಿಗೆ ಸಹಾಯಧನದ ಚೆಕ್ ಹಸ್ತಾಂತರಿಸಲಾಯಿತು.  ಇದೇ ವೇಳೆ 10 ಅಸಹಾಯಕ ವಿದ್ಯಾರ್ಥಿಗಳಿಗೆ ತಲಾ 25,000 ರೂ. ಸಹಾಯಧನ ನೀಡಲಾಯಿತು.

ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಜನರಿಗೆ ಎರಡು ಕೋಟಿ ರೂ. ಮೌಲ್ಯದ ಆಹಾರ ಕಿಟ್ ವಿತರಿಸುವ ಮೂಲಕ ನೆರವಾಗಿತ್ತು.

ವೇದಿಕೆಯಲ್ಲಿ ಎಂ ಆರ್ ಜಿ ಗ್ರೂಪ್ ಸಂಸ್ಥಾಪಕ ಕೆ. ಪ್ರಕಾಶ್ ಶೆಟ್ಟಿ, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ವಿಶ್ವ ಬಂಟರ ಸಂಘದ ಅಧ್ಯಕ್ಷ ಎ.ಜೆ. ಶೆಟ್ಟಿ, ಸದಾನಂದ ಶೆಟ್ಟಿ, ಆಳ್ವಾಸ್ ಫೌಂಡೇಶನ್ ಅಧ್ಯಕ್ಷ ಮೋಹನ್ ಆಳ್ವ, ಮನೋಹರ್ ಶೆಟ್ಟಿ ಸಾಯಿರಾಧ, ಜಯಕರ್ ಶೆಟ್ಟಿ ಇಂದ್ರಾಳಿ, ಪುರುಷೋತ್ತಮ್ ಶೆಟ್ಟಿ ಉಡುಪಿ,    ಮಂಗಳೂರು ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಸಂತೋಷ್ ಕುಮಾರ್ ಶೆಟ್ಟಿ, ರತ್ನಾಕರ್ ಶೆಟ್ಟಿ ಮುಂಡ್ಕೂರು, ಸುರೇಶ್ ಶೆಟ್ಟಿ, ರವಿ ಶೆಟ್ಟಿ ಉಡುಪಿ ಉಪಸ್ಥಿತರಿದ್ದರು.

ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.

Comments are closed.