ಆರೋಗ್ಯ

ಹಲವಾರು ಆರೋಗ್ಯ ಸಮಸ್ಯೆಗಳಿಗೆ ಅರಿಶಿಣ ಉತ್ತಮ ಚಿಕಿತ್ಸೆ.

Pinterest LinkedIn Tumblr

ಅರಿಷಿಣ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ ಎನ್ನುವುದು ಹೊಸ ವಿಷಯವೇನಲ್ಲ. ಅದು ನಮ್ಮ ದೃಷ್ಟಿಯನ್ನೂ ಉತ್ತಮಗೊಳಿಸುತ್ತದೆ ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ಬೆಳಕಿಗೆ ತಂದಿದೆ.

ತನ್ನ ವೈದ್ಯಕೀಯ ಗುಣಗಳಿಗಾಗಿ ಪ್ರಸಿದ್ಧವಾಗಿರುವ ಅರಿಷಿಣವನ್ನು ಶತಮಾನಗಳಿಂದಲೂ ವೈದ್ಯಕೀಯ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಭಾರತೀಯ ಅಡುಗೆಮನೆಗಳಲ್ಲಿ ಖಾಯಂ ಸದಸ್ಯನಾಗಿರುವ ಅರಿಷಿಣವು ನೋವಿನಿಂದ ಉರಿಯೂತದವರೆಗೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡುತ್ತದೆ. ಇತ್ತೀಚಿನ ಅಧ್ಯಯನ ವರದಿಯು ಅದರ ಆರೋಗ್ಯಲಾಭಗಳ ಇನ್ನಷ್ಟು ವಿವರಗಳನ್ನು ನೀಡಿದೆ.

ಈ ಹಿಂದಿನ ವಿವಿಧ ಅಧ್ಯಯನಗಳೂ ಕ್ಯಾಟರಾಕ್ಟ್(ಕಣ್ಣಿನ ಪೊರೆ) ಮತ್ತು ಗ್ಲುಕೋಮಾ ಸಮಸ್ಯೆಗಳ ನಿವಾರಣೆಯಲ್ಲಿ ಅರಿಷಿಣದ ಉಪಯುಕ್ತತೆಯ ಬಗ್ಗೆ ಹೇಳಿವೆ. ಅದರಲ್ಲಿರುವ ಕರ್ಕುಮಿನ್ ಕಣ್ಣುಗಳನ್ನು ಆರೋಗ್ಯಯುತವಾಗಿರಿಸಲು ನೆರವಾಗುತ್ತದೆ.
ಅರಿಷಿಣವನ್ನು ಇತ್ತೀಚಿಗೆ ಕಣ್ಣಿನ ಕ್ರೀಮ್‌ಗಳಲ್ಲಿ ಬಳಸಲಾಗುತ್ತಿದೆ. ತಜ್ಞರು ಅರಿಷಿಣವನ್ನು ಕಣ್ಣಿನ ಕ್ರೀಮ್‌ಗಳ ಅಂಗವಾಗಿಸಲು ನಡೆಸಿದ ಪ್ರಯತ್ನ ಅದ್ಭುತ ಪರಿಣಾಮಗಳನ್ನು ನೀಡಿತ್ತು. ಕಣ್ಣಿನ ಸುತ್ತಲಿನ ಕಪ್ಪು ವರ್ತುಲಗಳು,ಶುಷ್ಕತೆ,ದೃಢತೆ ಮತ್ತು ಸ್ಥಿತಿಸ್ಥಾಪಕತ್ವದ ಕುಂದುವಿಕೆಗಳ ಚಿಕಿತ್ಸೆಯಲ್ಲಿ ಅರಿಷಿಣಗಳಿರುವ ಕ್ರೀಮ್ ನೆರವಾಗುತ್ತದೆ. ಅರಿಷಿಣ ಹಲವಾರು ಸೌಂದರ್ಯ ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ಇರುವ ವಸ್ತುವಾಗಿದೆ. ಅದರ ಉರಿಯೂತ ನಿರೋಧಕ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳು ವಿವಿಧ ಚರ್ಮ ಸಮಸ್ಯೆಗಳಿಂದ ಪಾರಾಗಲು ನೆರವಾಗುತ್ತವೆ. ಅರಿಷಿಣದ ಇತರ ಕೆಲವು ಆರೋಗ್ಯಲಾಭಗಳು ಹೀಗಿವೆ:

ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ
ಕೆಟ್ಟ ಕೊಲೆಸ್ಟ್ರಾಲ್ ಅಥವಾ ಎಲ್‌ಡಿಎಲ್ ಹೆಚ್ಚಾದರೆ ಅದು ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಹೃದ್ರೋಗಗಳು ಅಥವಾ ಪಾರ್ಶ್ವವಾಯುವಿನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಅರಿಷಿಣವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಅರಿಷಿಣದ ಬಳಕೆಯು ಕೊಲೆಸ್ಟ್ರಾಲ್ ಮಟ್ಟಗಳನ್ನು ಸಮತೋಲನದಲ್ಲಿರಿಸಲು ನೈಸರ್ಗಿಕ ಮತ್ತು ಸುರಕ್ಷಿತ ವಿಧಾನವಾಗಿದೆ.

ಉರಿಯೂತ ನಿರೋಧಕ ಗುಣ
ಅರಿಷಿಣವು ತನ್ನ ಉರಿಯೂತ ನಿರೋಧಕ ಗುಣಕ್ಕಾಗಿ ಹೆಸರಾಗಿದೆ. ಸಂಧಿವಾತ ರೋಗಿಗಳಿಗಂತೂ ಇದು ಅತ್ಯಂತ ಉಪಯೋಗಿಯಾಗಿದೆ. ಸಂಧಿವಾತ ರೋಗಿಗಳಲ್ಲಿ ಉರಿಯೂತವನ್ನು ನೈಸರ್ಗಿಕವಾಗಿ ಶಮನಗೊಳಿಸಲು ಮತ್ತು ಸಂಧಿವಾತ ನೋವನ್ನು ನಿಭಾಯಿಸಲು ನೆರವಾಗುತ್ತದೆ.

ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಅರಿಷಿಣವು ನಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಕೆಲವು ಗುಣಗಳನ್ನು ಹೊಂದಿದೆ ಮತ್ತು ವಿವಿಧ ಕಾಯಿಲೆಗಳಿಗೆ ಗುರಿಯಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ
ಅರಿಷಿಣವು ನಮ್ಮ ಕರುಳುಗಳ ಆರೋಗ್ಯಕ್ಕೂ ಅತ್ಯುತ್ತಮವಾಗಿದೆ. ಅದು ಗಾಢ ಪರಿಮಳ ಮತ್ತು ರುಚಿಯನ್ನು ಹೊಂದಿದ್ದು,ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಅದು ಜಠರದ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಪಿತ್ತರಸದ ಉತ್ಪಾದನೆಯನ್ನೂ ಹೆಚ್ಚಿಸುತ್ತದೆ. ಅರಿಷಿಣ ಸೇವನೆಯಿಂದ ಹೊಟ್ಟೆಯುಬ್ಬರ ಮತ್ತು ವಾಯು ತೊಂದರೆಗಳು ಕಡಿಮೆಯಾಗುತ್ತವೆ.

Comments are closed.