ಕರಾವಳಿ

ಮಧುಮೇಹಗಳ ವಿರುದ್ಧ ಹೋರಾಡುವ ಶಕ್ತಿ ಈ ಎಲೆಗಿದೆ.

Pinterest LinkedIn Tumblr

ಮಳೆಗಾಲವು ಗುಡುಗು-ಸಿಡಿಲುಗಳ ಜೊತೆಗೆ ಹಲವಾರು ರೋಗಗಳನ್ನೂ ತರುತ್ತದೆ. ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ಹಂದಿಜ್ವರದಿಂದ 139 ಸಾವುಗಳು ಸಂಭವಿಸಿದ್ದರೆ ದಿಲ್ಲಿಯಲ್ಲಿ ಡೆಂಗ್-ಮಲೇರಿಯಾ ಉತ್ತುಂಗದಲ್ಲಿವೆ. ಇತ್ತ ಕರ್ನಾಟಕದಲ್ಲಿಯೂ ಹಲವಾರು ಡೆಂಗ್ ಪ್ರಕರಣಗಳು ವರದಿಯಾಗಿವೆ. ಇಂತಹ ರೋಗಗಳಿಗೆ ಸೂಕ್ತ ಚಿಕಿತ್ಸೆಯ ಜೊತೆಗೆ ಕೆಲವು ಮನೆಮದ್ದುಗಳೂ ಇವೆ.

ಪಪ್ಪಾಯ ಇಂತಹ ಮನೆಮದ್ದುಗಳಲ್ಲಿ ಒಂದಾಗಿದೆ. ಅದು ವ್ಯಕ್ತಿಯ ಜೀವವನ್ನು ಉಳಿಸಬಲ್ಲದು ಮತ್ತು ಶರೀರದಲ್ಲಿಯ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸಬಲ್ಲದು. ಪಪ್ಪಾಯ ಹಣ್ಣು ಮಾತ್ರವಲ್ಲ, ಅದರ ಎಲೆಗಳೂ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತವೆ. ಡೆಂಗ್ ರೋಗಿಗಳ ಪ್ರಕರಣಗಳಲ್ಲಿ ಪಪ್ಪಾಯ ಎಲೆಯ ರಸವು ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತದೆ ಎನ್ನುವುದನ್ನು ನೀವು ಕೇಳಿರಬೇಕು. ಪಪ್ಪಾಯ ಎಲೆಗಳು ಡೆಂಗ್ ರೋಗಿಗಳಿಗೆ ರಕ್ತಸ್ರಾವದ ವಿರುದ್ಧ ರಕ್ಷಣೆ ನೀಡುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಪಪ್ಪಾಯ ಎಲೆಯು ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿದೆ. ಅದು ಡೆಂಗ್ ಜ್ವರದಿಂದ ರಕ್ತಕಣಗಳಿಗೆ ಹಾನಿಯನ್ನು ತಡೆಯುತ್ತದೆ. ಡೆಂಗ್ ಜ್ವರಕ್ಕೆ ಚಿಕಿತ್ಸೆ ನೀಡುವುದು ಮಾತ್ರವಲ್ಲ,ಹಲವಾರು ಆರೋಗ್ಯ ಲಾಭಗಳನ್ನೂ ಅದು ನೀಡುತ್ತದೆ. ಅಂತಹ ಕೆಲವು ಆರೋಗ್ಯ ಲಾಭಗಳ ಕುರಿತು ಮಾಹಿತಿಗಳಿಲ್ಲಿವೆ….

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
ಪಪ್ಪಾಯ ಎಲೆಗಳ ಕಷಾಯವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯು ಉತ್ತಮಗೊಳ್ಳುತ್ತದೆ. ಈ ಕಷಾಯವು ಪಪೈನ್, ಚೈಮೊಪಪೈನ್, ಪ್ರೊಟೀಸ್, ಅಮೈಲೇಸ್‌ನಂತಹ ಹಲವಾರು ಕಿಣ್ವಗಳ ಆಗರವಾಗಿದೆ. ವಾಯು ತೊಂದರೆ, ಅಲ್ಸರ್ ಮತ್ತು ಜಠರದ ಉರಿಯೂತದಂತಹ ಹಲವಾರು ಹೊಟ್ಟೆಯ ಸಮಸ್ಯೆಗಳಿಗೂ ಪಪ್ಪಾಯ ಎಲೆಗಳು ಪರಿಹಾರವನ್ನು ನೀಡುತ್ತವೆ.

ಮುಟ್ಟಿನ ನೋವಿನಿಂದ ಮುಕ್ತಿ ನೀಡುತ್ತದೆ
ಮಹಿಳೆಯರು ತಮ್ಮ ಮುಟ್ಟಿನ ದಿನಗಳಲ್ಲಿ ಪಪ್ಪಾಯ ತಿನ್ನಕೂಡದು ಎಂಬ ತಪ್ಪುಗ್ರಹಿಕೆ ಹೆಚ್ಚಿನ ಭಾರತೀಯ ಕುಟುಂಬಗಳಲ್ಲಿವೆ. ಆದರೆ ಅದು ಮುಟ್ಟಿನ ದಿನಗಳಲ್ಲಿ ಮಹಿಳೆಯರು ಅನುಭವಿಸುವ ನೋವಿನಿಂದ ಮುಕ್ತಿ ನೀಡುತ್ತದೆ. ಪಪ್ಪಾಯ ಎಲೆಗಳ ಕಷಾಯದ ಸೇವನೆಯು ಮಹಿಳೆಯರು ಮುಟ್ಟಾಗುವ ಮುನ್ನ ಅನುಭವಿಸುವ ಸಮಸ್ಯೆಗಳನ್ನು ನಿವಾರಿಸುತ್ತದೆ. ಅದರಲ್ಲಿಯ ಕಿಣ್ವಗಳು ಋತುಚಕ್ರವನ್ನು ಕ್ರಮಬದ್ಧಗೊಳಿಸುತ್ತವೆ,ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ ಮತ್ತು ಹಾರ್ಮೋನ್ ಅಸಮತೋಲವನ್ನು ನಿವಾರಿಸುತ್ತವೆ ಎನ್ನಲಾಗಿದೆ.

ಮಧುಮೇಹಕ್ಕೆ ಚಿಕಿತ್ಸೆ ನೀಡುತ್ತದೆ
ಮಧುಮೇಹಿಗಳು ತಮ್ಮ ದೈನಂದಿನ ಆಹಾರದ ಭಾಗವಾಗಿ ಪಪ್ಪಾಯ ಎಲೆಗಳ ರಸವನ್ನು ಸೇವಿಸಬಹುದಾಗಿದೆ. ಅದು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಆದರೆ ಅತಿಯಾದರೆ ಎಲ್ಲವೂ ಕೆಟ್ಟದ್ದೇ. ಹೀಗಾಗಿ ಮಧುಮೇಹಿಗಳು ಪಪ್ಪಾಯ ಎಲೆಗಳ ರಸವನ್ನು ಸೇವಿಸುವ ಮುನ್ನ ತಮ್ಮ ವೈದ್ಯರ ಸಲಹೆ ಪಡೆದುಕೊಳ್ಳುವುದು ಅಗತ್ಯ.

ಕೊಬ್ಬು ಮುಕ್ತ ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿ
ಪಪ್ಪಾಯ ಎಲೆಗಳಲ್ಲಿಯ ಕಿಣ್ವಗಳು ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿಗಳನ್ನು ಕೊಬ್ಬು ಮುಕ್ತಗೊಳಿಸುವ ಮೂಲಕ ಅದ್ಭುತ ಪರಿಣಾಮಗಳನ್ನು ಬೀರುತ್ತವೆ. ಶರೀರದಲ್ಲಿಯ ವಿಷವಸ್ತುಗಳನ್ನು ಹೊರಗೆ ಹಾಕಲು ಸಹ ಪಪ್ಪಾಯ ಎಲೆಗಳ ರಸವನ್ನು ಸೇವಿಸಬಹುದಾಗಿದೆ.

ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ
ಹೌದು,ನೀವು ಸರಿಯಾಗಿಯೇ ಓದಿದ್ದೀರಿ. ಪಪ್ಪಾಯ ಎಲೆಗಳ ರಸವು ಟ್ಯೂಮರ್‌ಗಳು ಉಂಟಾಗುವುದನ್ನು ತಡೆಯುತ್ತದೆ. ಪಪ್ಪಾಯ ಎಲೆಯಲ್ಲಿರುವ ಕ್ಯಾನ್ಸರ್ ನಿರೋಧಕ ಗುಣದಿಂದಾಗಿ ಅದು ದೀರ್ಘಕಾಲಿಕ ಮೈಲೊಮೊನೊಸೈಟಿಕ್ ಲ್ಯುಕೇಮಿಯಾದ ವಿರುದ್ಧ ಹೋರಾಡುತ್ತದೆ. ಪಪ್ಪಾಯ ಎಲೆಗಳ ರಸದ ನಿಯಮಿತ ಸೇವನೆಯ ಬಳಿಕ ಕ್ಯಾನ್ಸರ್ ರೋಗವು ನಿಯಂತ್ರಣಕ್ಕೆ ಬಂದ ಹಲವಾರು ನಿದರ್ಶನಗಳಿವೆ. ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್ ಮತ್ತು ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ಗಳಿಗೂ ಪಪ್ಪಾಯ ಎಲೆಗಳ ರಸವು ಪರಿಣಾಮಕಾರಿಯಾಗಿದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ

Comments are closed.