ಬೆಂಗಳೂರು: ಮುಂದಿನ ವರ್ಷದ ನವೆಂಬರ್ನಲ್ಲಿ ‘ಇನ್ವೆಸ್ಟ್ ಕರ್ನಾಟಕ’ ಸಮಾವೇಶ ನಡೆಯಲಿದ್ದು, ಹತ್ತು ಲಕ್ಷ ಕೋ.ರೂ. ಬಂಡವಾಳ ಹೂಡಿಕೆ ಆಗುವ ನಿರೀಕ್ಷೆ ಇದೆ. ಈ ಗುರಿ ಸಾಧನೆಗೆ ದುಬಾೖ ಎಕ್ಸ್ಪೋ ಸಹಕಾರಿ ಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ದುಬಾೖ ಎಕ್ಸ್ಪೋ-2020’ದಲ್ಲಿ 3 ದಿನಗಳ ಕಾರ್ಯಕ್ರಮ ಯಶಸ್ವಿಯಾಗಿದೆ. 190ಕ್ಕೂ ಅಧಿಕ ದೇಶಗಳು ಪಾಲ್ಗೊಂಡಿದ್ದವು. ಅಂದಾಜು 45 ಲಕ್ಷ ಮಂದಿ ಎಕ್ಸ್ಪೋಗೆ ಭೇಟಿ ನೀಡಲಿದ್ದಾರೆ. ಎಕ್ಸ್ಪೋದಲ್ಲಿ ದುಬಾೖ ಇಸ್ಲಾಮಿಕ್ ಇನ್ವೆಸ್ಟರ್ಸ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಕಚೇರಿ ತೆರೆಯಲಿದ್ದು, ಮುಂದಿನ 3 ವರ್ಷಗಳಲ್ಲಿ 3,500 ಕೋಟಿ ರೂ. ಬಂಡವಾಳ ಹೂಡಲು ಆಸಕ್ತಿ ಪ್ರದರ್ಶಿಸಿದೆ ಎಂದು ಸಚಿವರು ಹೇಳಿದರು.
ಅ. 17ರಂದು ನಡೆದ ಉದ್ಯಮಿಗಳ ಚರ್ಚೆಯಲ್ಲಿ 180ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. “ಕರ್ನಾಟಕ- ನೌ ಬಿಯಾಂಡ್’ ಕಾರ್ಯಕ್ರಮದ ಮೂಲಕ ಕೊಲ್ಲಿ ಸಹಿತ ವಿಶ್ವದ 200ಕ್ಕೂ ಹೆಚ್ಚು ಪ್ರಮುಖ ಕೈಗಾರಿಕೋದ್ಯಮಿಗಳಿಗೆ ಕರ್ನಾಟಕವು ಹೂಡಿಕೆಗೆ ಪ್ರಶಸ್ತ ಸ್ಥಳ ಎಂದು ಮನದಟ್ಟು ಮಾಡಲಾಗಿದೆ. ರಾಜ್ಯದ ಸಂಸ್ಕೃತಿಯನ್ನೂ ಅನಾವರಣ ಮಾಡಲಾಗಿದೆ ಎಂದರು.
ನ. 11 ಮತ್ತು 12ರಂದು ಕಲಬುರಗಿಯಲ್ಲಿ ಕೈಗಾರಿಕಾ ಅದಾಲತ್ ಹಮ್ಮಿಕೊಳ್ಳಲಾಗಿದೆ. ಬಳಿಕ ಬೆಳಗಾವಿ, ಕರಾವಳಿ ಸೇರಿದಂತೆ ಐದು ಕಡೆ ಆಯೋಜಿ ಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
Comments are closed.