ನೇರಾನೇರವಾಗಿ ಮಾತನಾಡುವ ನಟಿಯರಲ್ಲಿ ಬಾಲಿವುಡ್ ನಟಿ ತಾಪ್ಸಿ ಪನ್ನು ಸಹ ಒಬ್ಬರು. ಬೋಲ್ಡ್ ಕಾಮೆಂಟ್ಗಳ ಮೂಲಕ ಇತ್ತೀಚೆಗೆ ತಾಪ್ಸಿ ಹೆಚ್ಚಾಗಿ ವೈರಲ್ ಆಗುತ್ತಿದ್ದಾರೆ. ತಾಪ್ಸಿ ಅಭಿನಯದ ಬಾಲಿವುಡ್ ಸಿನಿಮಾಗಳೂ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿವೆ. ಚಿಕ್ಕಂದಿನಲ್ಲಿ ತನಗೆ ಎದುರಾದ ಕಹಿ ಘಟನೆಯೊಂದನ್ನು ಟಿವಿ ಶೋನಲ್ಲಿ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ತಾಪ್ಸಿ ಪನ್ನು ಕಿರುತೆರೆಯ ಟಾಕ್ ಶೋನಲ್ಲಿ ಭಾಗಿಯಾಗಿದ್ದರು. ಕರೀನಾ ಕಪೂರ್ ನಿರೂಪಿಸುವ ‘ವಾಟ್ ವುಮೆನ್ ವಾಂಟ್ 2’ ಶೋನಲ್ಲಿ ಮಾತನಾಡುತ್ತಾ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬರಿಗೆ ಸರಿಯಾಗಿ ಪಾಠ ಕಲಿಸಿದ್ದಾಗಿ ಹೇಳಿಕೊಂಡಿದ್ದಾರೆ.
“ಗುರುಪರ್ಬ ಸಮಯದಲ್ಲಿ ಗುರುದ್ವಾರಕ್ಕೆ ನಾವೆಲ್ಲಾ ಹೋಗುತ್ತಿದ್ದೆವು. ಅಲ್ಲಿ ಬಹಳಷ್ಟು ಮಳಿಗೆಗಳು ಇರುತ್ತಿದ್ದವು, ಜನಕ್ಕೆ ಊಟ, ತಿಂಡಿ ಅಲ್ಲಿ ಸಿಗುತ್ತಿತ್ತು. ಸಿಕ್ಕಾಪಟ್ಟೆ ಜನಜಂಗುಳಿ. ನಡೆದಾಡುವುದೇ ಕಷ್ಟ. ಒಬ್ಬರಿಗೊಬ್ಬರು ಗುದ್ದಿಕೊಂಡೇ ಹೋಗಬೇಕಾಗಿತ್ತು. ಇದಕ್ಕೂ ಮುನ್ನ ನನಗೆ ಇಂತಹದ್ದೇ ಕೆಟ್ಟ ಘಟನೆಯೊಂದು ಎದುರಾಗಿತ್ತು. ಆದರೆ ಈ ಸಲ ಸರಿಯಾಗಿ ತಯಾರಿ ಮಾಡಿಕೊಂಡೇ ಹೋಗಿದ್ದೆ. ಈ ಸಲವೂ ಇಂತಹದ್ದು ಏನೋ ಒಂದು ನಡೆಯುತ್ತದೆ ಎಂದೇ ಭಾವಿಸಿದ್ದೆ. ಅದರಂತೆಯೇ ನಡೆಯಿತು..” ಎಂದು ತನಗೆ ಎದುರಾದ ಘಟನೆಯನ್ನು ಹೇಳಿದ್ದಾರೆ.
“ಮೊದಲೇ ನಾನು ಮಾನಸಿಕವಾಗಿ ಸಿದ್ಧಳಾಗಿದ್ದೆ. ಆ ಜನಜಂಗುಳಿಯಲ್ಲಿ ವ್ಯಕ್ತಿಯೊಬ್ಬ ನನ್ನ ಬ್ಯಾಕ್ ಸ್ಪರ್ಶಿಸಲು ಪ್ರಯತ್ನಿಸಿದ. ಕೂಡಲೆ ಅವನ ಕೈ ಬೆರಳು ಹಿಡಿದು ತಿರುಗಿಸಿದೆ. ಅವ ಅಲ್ಲಿಂದ ಕಾಲ್ಕಿತ್ತಿದ್ದ ಎಂದು ತನಗಾದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ತಾಪ್ಸಿ ಪನ್ನು ಮುಖ್ಯವಾಗಿ ಸಂದೇಶಾತ್ಮಕ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪಿಂಕ್, ಮುಲ್ಕ್ ಸಿನಿಮಾಗಳೇ ಇದಕ್ಕೆ ನಿದರ್ಶನ. ಈಗ ಶಬ್ಬಾಸ್ ಮಿಥು (ಮಿಥಾಲಿ ರಾಜ್ ಕುರಿತ ಬಯೋಪಿಕ್), ಥಪ್ಪಡ್ ಹಾಗೂ ಹಸೀನಾ ದಿಲ್ರುಬಾ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
Comments are closed.