ಮುಂಬೈ.ಜೂ.29: ಅಚ್ಚರಿಯ ಆಯ್ಕೆಯಲ್ಲಿ ಜಿಂಬಾಬ್ವೆ ವಿರುದ್ದದ ಕ್ರಿಕೇಟ್ ಸರಣಿಗೆ ಭಾರತ ತಂಡದ ನಾಯಕನಾಗಿ ಅಜಿಂಕೆ ರಹಾನೆ ಅವರನ್ನು ನೇಮಕ ಮಾಡಲಾಗಿದೆ. ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ ಸೇರಿದಂತೆ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ಆಕ್ರಮಣಕಾರಿ ಆಟಗಾರ ರಾಬಿನ್ ಉತ್ತಪ್ಪ ಹಾಗೂ ಸ್ಪಿನ್ ಮಾಂತ್ರಿಕ ಹರಭಜನ್ ಸಿಂಗ್ ಅವರಿಗೆ ಮತ್ತೆ ತಂಡದಲ್ಲಿ ಸ್ಥಾನ ಕಲ್ಪಿಸಿ ಮಹತ್ವದ ನಿರ್ಧಾರವನ್ನು ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ ಇಂದು ಸಭೆ ಸೇರಿ ನಿರ್ಧರಿಸಿದೆ.
ಕುತೂಹಲವೆಂಬಂತೆ ನಾಯಕನ ರೇಸ್ನಲ್ಲಿದ್ದ ಕೊಹ್ಲಿ ಮತ್ತು ರೋಹಿತ್ ಶರ್ಮಗೆ ವಿಶ್ರಾಂತಿ ನೀಡಿರುವುದು ಎಲ್ಲರನ್ನು ಅಚ್ಚರಿಗೊಳಿಸಿದೆ. ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಸರಣಿಯನ್ನು ಸೋತ ಭಾರತ ತಂಡ ಸಾಕಷ್ಟು ಟೀಕೆಗೆ ಒಳಗಾಗಿರುವ ನಡುವೆಯೇ ಜಿಂಬಾವ್ವೆ ಪ್ರವಾಸಕ್ಕೆ ಯುವ ಆಟಗಾರರಿಗೆ ಹೆಚ್ಚು ಒತ್ತು ನೀಡಿ ಟಾಪ್ ಪ್ಲೇಯರ್ಗಳನ್ನು ಕೈಬಿಡಲಾಗಿದೆ.
ಈಗಾಗಲೇ ಟೆಸ್ಟ್ ಕ್ರಿಕೆಟ್ನಲ್ಲಿ ಒಂದೆರಡು ಬಾರಿ ಹಂಗಾಮಿ ನಾಯಕನಾಗಿ ಪಂದ್ಯದ ನಡುವೆ ಅಜಿಂಕೆ ರಹಾನೆ ತಂಡವನ್ನು ಮುನ್ನೆಡೆಸಿದ್ದು ಬಿಟ್ಟರೆ ಹೆಚ್ಚಾಗಿ ಎಲ್ಲೂ ಸಾರಥ್ಯ ವಹಿಸಿರುವ ಬಗ್ಗೆ ಕೇಳಿಬಂದಿರಲಿಲ್ಲ. ಜಿಂಬಾವ್ವೆ ಕೂಡ ಈಗ ಬಲಿಷ್ಠವಾಗಿದ್ದು ಅದರ ನೆಲದಲ್ಲೇ ರಹಾನೆ ಸಾರಥ್ಯದಲ್ಲಿ ಭಾರತ ತಂಡ ಎರಡು ಟಿ-20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದ್ದು, ಕ್ರಿಕೆಟ್ ಪ್ರಿಯರಲ್ಲಿ ಕುತೂಹಲ ಕೆರಳಿಸಿದೆ.
ಅಜಿಂಕೆ ರಹಾನೆ -ನಾಯಕ, ಮುರುಳಿ ವಿಜಯ್, ಅಂಬಟಿ ರಾಯಡು, ಮನೋಜ್ ಕೇದಾರ್, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಹರಭಜನ್ ಸಿಂಗ್ , ಅಸ್ಕರ್, ಕರಣ್ ನಾಯರ್, ದವಾಲ್, ರೋಜರ್ ಬಿನಿ, ಭುವನೇಶ್ವರ್ ಕುಮಾರ್, ರೋಹಿತ್ ಶರ್ಮ, ಸಂದೀಪ್ ಶರ್ಮ ತಂಡದಲ್ಲಿದ್ದಾರೆ.