ಮಗಳ ಮದುವೆ ಮಾಡೋ ತನಕ ಸಿನಿಮಾ ಮಾಡಲ್ಲ ಅಂತ ಕೂತಿದ್ದ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಮತ್ತೂಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಎರಡು ಕತೆಗಳನ್ನು ಮುಂದಿಟ್ಟುಕೊಂಡು ಅದೋ ಇದೋ ಎಂದು ಅತ್ತಿತ್ತ ನೋಡುತ್ತಿದ್ದವರ ನೋಟ ಈಗ ಸ್ಥಿರವಾಗಿದೆ. ಕನ್ನಡದ ಅತ್ಯುತ್ತಮ ಕಾದಂಬರಿಕಾರರ ಕಾದಂಬರಿಯೊಂದನ್ನು ನಾಗತಿಹಳ್ಳಿ ಕೈಗೆತ್ತಿಕೊಂಡಿದ್ದಾರೆ. ಇಷ್ಟರಲ್ಲೇ ಚಿತ್ರದ ಕಾರ್ಯವೂ ಶುರುವಾಗಲಿದೆ. ಒಂದು ವಿದೇಶ ಪ್ರವಾಸ ಮುಗಿಸುತ್ತಿದ್ದಂತೆ ಚಿತ್ರೀಕರಣ ಶುರು ಅನ್ನುತ್ತಿದ್ದಾರೆ ಮೇಷ್ಟ್ರು.
ಅವರು ಆರಿಸಿಕೊಂಡಿರುವುದು ದೊಡ್ಡೇರಿ ವೆಂಕಟಗಿರಿರಾವ್ ಅವರ ಇಷ್ಟಕಾಮ್ಯ ಕಾದಂಬರಿಯನ್ನು. ಇಬ್ಬರು ನಾಯಕಿಯರೂ ಒಬ್ಬ ನಾಯಕನೂ ಇರುವ ಆ ಕತೆ ನಗರ ಹಳ್ಳಿಗಳ ನಡುವೆ ಸುತ್ತುತ್ತದೆ. ಮೇಷ್ಟರಿಗೆ ಪ್ರಿಯವಾದ ಸನ್ನಿವೇಶಗಳೂ, ಭಾವಾತ್ಮಕತೆಯೂ ಇರುವ ಕತೆ ಅದು. ಅಂಥ ಕತೆಗಳನ್ನು ಪಳಗಿಸುವುದರಲ್ಲಿ ಹೆಸರಾದ ನಾಗತಿಹಳ್ಳಿ ಕತೆಯನ್ನು ಚಿತ್ರಕತೆ ರೂಪಕ್ಕೆ ತರುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಚಿತ್ರದ ಪ್ರಧಾನ ಭೂಮಿಕೆಯಲ್ಲಿ ವಿಜಯ ಸೂರ್ಯ ಇರುತ್ತಾರೆ. ನಾಯಕಿಯರಾಗಿ ಕಾವ್ಯಾ ಶೆಟ್ಟಿ, ಮಯೂರಿ ನಟಿಸಲಿದ್ದಾರೆ. ಮಲೆನಾಡು ಮತ್ತು ಬೆಂಗಳೂರಲ್ಲಿ ಚಿತ್ರೀ ಕರಣ ನಡೆಯಲಿದೆ.
-ಉದಯವಾಣಿ