ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಕಲಾಪದ ವೇಳೆ ತಾನು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಲ್ಲ ಎಂದ ಆಲ್ ಇಂಡಿಯಾ ಮಜ್ಲಿಸ್ ಎಇತ್ತೇಹಾದುಲ್ ಮುಸ್ಲಮೀನ್ (ಎಐಎಂಐಎಂ) ಪಕ್ಷದ ಶಾಸಕ ವಾರಿಸ್ ಪಠಾಣ್ ರನ್ನು ಅಮಾನತು ಮಾಡಲಾಗಿದೆ.
ಕಲಾಪದ ವೇಳೆ ಭಾರತ್ ಮಾತಾ ಕೀ ಜೈ ಘೋಷಣೆ ಸಂಬಂಧ ಗದ್ದಲ ವೇಳೆ ಭಾರತ್ ಮಾತಾ ಕೀ ಜೈ ಎಂದು ಕೂಗುವಂತೆ ಬಿಜೆಪಿಯ ರಾಮ ಕದಮ್ ಕೇಳಿದ್ದಾರೆ. ಈ ವೇಳೆ ಘೋಷಣೆ ಕೂಗಲು ನಿರಾಕರಿಸಿದ ವಾರಿಸ್ ರನ್ನು ಅಮಾನತು ಮಾಡುವಂತೆ ಇತರ ರಾಜಕೀಯ ಪಕ್ಷಗಳು ಒತ್ತಾಯಿಸಿದ್ದು, ಸ್ಪೀಕರ್ ಅವರನ್ನು ವಿಧಾನಸಭೆ ಬಜೆಟ್ ಅಧಿವೇಶನದಿಂದ ಅಮಾನತು ಮಾಡಿದೆ.
ಕೆಲ ದಿನಗಳ ಹಿಂದೆ ಎಐಎಂಐಎಂ ಮುಖ್ಯಸ್ಥ ಅಸಾದುಲ್ಲಾ ಓವೈಸಿ ನನ್ನ ಕುತ್ತಿಗೆಗೆ ಕತ್ತಿ ಇಟ್ಟು ಒತ್ತಾಯಿಸಿದ್ದರೂ ನಾನು ಭಾರತ ಮಾತಾ ಕೀ ಜೈ ಎಂದು ಕೂಗಲ್ಲ ಎಂದು ಹೇಳಿದ್ದರು. ಇದನ್ನೇ ಸಮರ್ಥಿಸಿಕೊಂಡ ವಾರಿಸ್ ತಾವು ಘೋಷಣೆ ಕೂಗುವುದಿಲ್ಲ ಎಂದು ಹೇಳಿದ್ದರು.