ಮುಂಬಯಿ: ಮರಾಠಿ ಮಣ್ಣಿನಲ್ಲಿ ಇಂದು ಹೆಮ್ಮರವಾಗಿ ಬೆಳೆದು ನಿಂತಿರುವ ಹಾಗೂ ವಿಶ್ವ ಮಟ್ಟದಲ್ಲಿ ಗುರುತಿಸಲ್ಪಡುವ ಬಂಟರ ಸಂಘದ ಅಭಿವೃದ್ಧಿಗೆ ನಮ್ಮ ಹಿರಿಯರಿಂದ ಇಂದಿನ ಕಿರಿಯರವರೆಗಿನ ಸಮಾಜ ಪ್ರೀತಿ, ಸೇವಾ ಸ್ಫೂರ್ತಿ, ಸಾಮಾಜಿಕ ಕಳಕಳಿ ಹಾಗೂ ದಾನಿಗಳ ನೆರವು ಕಾರಣ. ಅವರನ್ನು ಸ್ಮರಿ ಸುವುದು ನಮ್ಮ ಕರ್ತವ್ಯವಾಗಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ನುಡಿದರು.
ನ. 29ರಂದು ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ ಬಂಟರ ಸಂಘ ಮುಂಬಯಿ ಯ 87ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಸಂಘವು ಆರಂಭದಿಂದಲೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡುತ್ತಾ ಬಂದಿದ್ದು, ಇಂದು ಶೈಕ್ಷಣಿಕವಾಗಿ ಶ್ರೀಮಂತ ಸಂಸ್ಥೆಯಾಗಿ ಶೋಭಿಸುತ್ತಿದೆ. ಸಂಘದ ಪೊವಾಯಿ ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ಕೆ.ಜಿ.ಯಿಂದ ಸ್ನಾತಕೋತ್ತರ ದವರೆಗೆ ಸುಮಾರು 8500 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದಲ್ಲದೆ, ಸಂಘದ ಉನ್ನತ ಶಿಕ್ಷಣ ಕಾಲೇಜುಗಳಲ್ಲಿ ಸುಮಾರು 3 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾನೂನು ಕಾಲೇಜನ್ನು ಆರಂಭಿಸುವ ಯೋಜನೆಯಿದ್ದು, ನವಿಮುಂಬಯಿ ಐರೋಲಿಯ ಅಥವಾ ಖಾರ್ಘರ್ನಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಲು ಸಿಡ್ಕೊಗೆ ಮನವಿ ಸಲ್ಲಿಸಲಾಗಿದೆ. ಪಶ್ಚಿಮ ಮುಂಬಯಿಯಲ್ಲಿ ಶಿಕ್ಷಣ ಸಂಸ್ಥೆಯೊಂ ದನ್ನು ಸ್ಥಾಪಿಸಲು ಸಂಸದ ಗೋಪಾಲ್ ಶೆಟ್ಟಿ ಅವರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಯುತ್ತಿದೆ. ಮಾತೃಭೂಮಿ ಕೋ – ಆಪರೇಟಿವ್ ಕ್ರೆಡಿಟ್ ಸೊಸೈಟಿಯನ್ನು ಅರ್ಬನ್ ಬ್ಯಾಂಕಾಗಿ ಪರಿವರ್ತಿಸಲು ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಗತ ವಾರ್ಷಿಕ ಮಹಾಸಭೆಯ ವರದಿ ಯನ್ನು ಗೌ| ಪ್ರ. ಕಾರ್ಯದರ್ಶಿ ಉಳ್ತೂರು ಮೋಹನ್ದಾಸ್ ಶೆಟ್ಟಿ ಮಂಡಿಸಿದರು. ವಾರ್ಷಿಕ ಲೆಕ್ಕಪತ್ರವನ್ನು ಗೌರವ ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ ಯವರು ಸಭೆಯ ಮುಂದಿಟ್ಟರು.
ಪೊವಾಯಿ ಶಿಕ್ಷಣ ಸಮಿತಿ ಕಾರ್ಯ ದರ್ಶಿ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಅವರು, ಶಿಕ್ಷಣ ಸಂಸ್ಥೆಯ ಪ್ರಗತಿಯ ವರದಿ ನೀಡಿದರು. ಉನ್ನತ ಶಿಕ್ಷಣ ಸಮಿತಿ ಉಪ ಕಾರ್ಯಾಧ್ಯಕ್ಷ ಬಿ. ಆರ್. ಶೆಟ್ಟಿ ಸಂಸ್ಥೆಯ ವರದಿಯನ್ನು ಮಂಡಿಸಿದರು. ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ವರದಿಯನ್ನು ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಕಾರ್ನಾಡ್ ಸಭೆಯ ಮುಂದಿಟ್ಟರು.
ಸಭಿಕರ ಪರವಾಗಿ ನ್ಯಾಯವಾದಿ ಆರ್. ಸಿ. ಶೆಟ್ಟಿ, ಡಾ| ಸುನೀತಾ ಎಂ. ಶೆಟ್ಟಿ, ಸದಾನಂದ ಶೆಟ್ಟಿ ವರ್ಲಿ, ಭುಜಂಗ ಎಂ. ಶೆಟ್ಟಿ, ಕೆ. ಡಿ. ಶೆಟ್ಟಿ, ಬಿ. ವಿವೇಕ್ ಶೆಟ್ಟಿ, ಪ್ರಭಾಕರ ಎಲ್. ಶೆಟ್ಟಿ, ಸಿಎ ಸದಾಶಿವ ಶೆಟ್ಟಿ, ಸಿಎ ಶಂಕರ್ ಬಿ. ಶೆಟ್ಟಿ, ಜಯ ಎ. ಶೆಟ್ಟಿ, ಐಕಳ ಹರೀಶ್ ಶೆಟ್ಟಿ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವರದಿ ವರ್ಷದಲ್ಲಿ ನಿಧನ ಹೊಂದಿದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಉಳೂ¤ರು ಮೋಹನ್ದಾಸ್ ಶೆಟ್ಟಿ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ವೇದಿಕೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಪೊವಾಯಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಜಯರಾಮ ಎನ್. ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ಮೊದಲಾದವರಿದ್ದರು.
ಸಭೆಯಲ್ಲಿದ್ದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಂಘದ ಮಾಜಿ ಅಧ್ಯಕ್ಷರು, ವಿಶ್ವಸ್ತರು, ಮಾಜಿ ಕಾರ್ಯಾಧ್ಯಕ್ಷೆಯರು, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು, ಮಹಿಳಾ ವಿಭಾಗದ ಕಾರ್ಯದರ್ಶಿ ಕವಿತಾ ಐ. ಆರ್. ಶೆಟ್ಟಿ, ಬಂಟರ ವಾಣಿಯ ಸಂಪಾದಕ ಪ್ರೇಮನಾಥ ಶೆಟ್ಟಿ ಮುಂಡ್ಕೂರು, ಡಾ| ಪ್ರಭಾಕರ ಶೆಟ್ಟಿ ಬಿ., ಪ್ರವೀಣ್ ಎಸ್. ಶೆಟ್ಟಿ, ಲೆಕ್ಕ ಪರಿಶೋಧಕರು, ಆಂತರಿಕ ಲೆಕ್ಕ ಪರಿಶೋಧಕರು ಮೊದಲಾದವರನ್ನು ಗೌರವಿಸಲಾಯಿತು.
ಸಂಘದ ಸದಸ್ಯತ್ವ ನೋಂದಣಿಯಲ್ಲಿ ರೂ. 2 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ಸಂಗ್ರಹಿಸಿದ ಎನ್. ಸಿ. ಶೆಟ್ಟಿ, ಡಾ| ಪ್ರಭಾಕರ ಶೆಟ್ಟಿ ಬಿ., ಮಹಾಬಲ ಶೆಟ್ಟಿ, ಸಂಘದ ಮಹಾ ಪ್ರಬಂಧಕ ಪ್ರವೀಣ್ ಶೆಟ್ಟಿ ಅವರಿಗೆ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಚಿನ್ನದ ಪದಕ, ಸ್ಮರಣಿಕೆ, ಪುಷ್ಪಗುತ್ಛವಿತ್ತು ಗೌರವಿಸಿದರು.
ಸಂಘದ ಮಾಜಿ ಅಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ ಪ್ರಾಯೋಜಕತ್ವದಲ್ಲಿ ನೀಡಲಾಗುತ್ತಿರುವ ವರ್ಷದ ಅತ್ಯುತ್ತಮ ಕಾರ್ಯಕರ್ತ ಚಿನ್ನದ ಪದಕವನ್ನು ಈ ಬಾರಿ ಸಿಎ ಶಂಕರ ಬಿ. ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಸಂಘದ ಸಾಂಸ್ಕೃತಿಕ ಮತ್ತು ಸಾಹಿತ್ಯ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಅವರಿಗೆ ಪ್ರದಾನಿಸಿ ಗೌರವಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಪ್ರಾಯೋಜಕತ್ವದಲ್ಲಿ ಪ್ರಾದೇಶಿಕ ಸಮಿತಿಗಳಿಗಾಗಿ ಪ್ರತಿವರ್ಷ ನೀಡುವ ಅತ್ಯುತ್ತಮ ಪ್ರಾದೇಶಿಕ ಸಮಿತಿ ಪ್ರಶಸ್ತಿಯನ್ನು ಐಕಳ ಹರೀಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಅರುಣೋದಯ ರೈ ಅವರಿಗೆ ಪ್ರದಾನಿಸಲಾಯಿತು.
ದಿ| ವೈ. ಜಿ. ಶೆಟ್ಟಿ ಅಭಿಮಾನಿ ಬಳಗ ಪ್ರಾಯೋಜಿಸಿ ಬಂಟರ ಸಂಘ ಪ್ರತಿವರ್ಷ ಕೊಡಮಾಡುವ ದಿ| ವೈ. ಜಿ. ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ಬಂಟರವಾಣಿಯ ಕಾರ್ಯಾಧ್ಯಕ್ಷ ಬಿ. ಶಾಂತಾರಾಮ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಬಂಟರವಾಣಿಯ ಸಂಪಾದಕ ಮಂಡಳಿಯ ಸದಸ್ಯ, ಹಿರಿಯ ಶಿಕ್ಷಕ ಅಚ್ಚಣ್ಣ ಎಂ. ಶೆಟ್ಟಿ ಅವರಿಗೆ ಅವರ ಅನುಪಸ್ಥಿತಿಯಲ್ಲಿ ಘೋಷಿಸಲಾಯಿತು.
ಬಂಟರವಾಣಿಯ ಯಶಸ್ಸು ಮತ್ತು ಅಪ್ರತಿಮ ಸಾಧನೆಗಾಗಿ ಅದರ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಅವರಿಗೆ ಈ ಬಾರಿ ಪ್ರಶಂಸಾರ್ಹ ಸಾಧಕ ಪ್ರಶಸ್ತಿಯೊಂದಿಗೆ ಶಾಲು ಹೊದಿಸಿ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಪ್ರಶಸ್ತಿ ವಿಜೇತರ ಯಾದಿಯನ್ನು ಉಪಾಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಅವರು ಓದಿದರು.
ಕಳೆದ ಸಾಲಿನ ಎಸ್ಎಸ್ಸಿ, ಎಚ್ಎಸ್ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ದಿ| ರಮಾನಾಥ ಪಯ್ಯಡೆ ಸ್ಮರಣಾರ್ಥ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಉದ್ಯಮಿ, ಪದ್ಮನಾಭ ಎಸ್. ಪಯ್ಯಡೆ ಮತ್ತು ಮುಂಡಪ್ಪ ಎಸ್. ಪಯ್ಯಡೆ ಸಮ್ಮುಖದಲ್ಲಿ ಪ್ರದಾನಿಸಲಾಯಿತು. ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದಿದ ವರ್ಷದ ಅತ್ಯುತ್ತಮ ಲಾಜಿಸ್ಟಿಕ್ ಕಂಪೆನಿ ಎಂಬ ಪ್ರಶಸ್ತಿ ಗಿಟ್ಟಿಸಿರುವ ಸಂಘದ ಸದಸ್ಯ, ಉದ್ಯಮಿ ಕೆ. ಡಿ. ಶೆಟ್ಟಿ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛವಿತ್ತು ಅಭಿನಂದಿಸಲಾಯಿತು. ಕಲಾವಿದ, ಕಲಾಜಗತ್ತು ವಿಜಯಕುಮಾರ್ ಶೆಟ್ಟಿ ಅವರ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸಾಧನೆಗಾಗಿ ಗೌರವಿಸಲಾಯಿತು. ಸಂಘದ ಕರ್ನಾಟಕ ಫ್ರಿ ನೈಟ್ ಹೈಸ್ಕೂಲ್ ಹಾಗೂ ಶ್ರೀ ನಿತ್ಯಾನಂದ ಫ್ರಿನೈಟ್ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಬಂಟ ಬಾಂಧವರ ಪ್ರಾಯೋಜಕತ್ವದ ನಗದು ಬಹುಮಾನ ನೀಡಲಾಯಿತು.ಎಂಜಿನಿಯರ್ ವಿದ್ಯಾರ್ಥಿಗಳಿಗಾಗಿ ಹೊಟೇಲ್ ಉದ್ಯಮಿ ದಿ| ಶಂಕರ್ ಎ. ಶೆಟ್ಟಿ ಅವರ ಸ್ಮರಣಾರ್ಥ ಪತ್ನಿ ತೇಜಮಂಜರಿ ಅವರು ನೀಡುವ ನಗದು ಬಹುಮಾನವನ್ನು ಅವರ ಮಕ್ಕಳ ಉಪಸ್ಥಿತಿಯಲ್ಲಿ ಈ ಬಾರಿ ಸ್ವಪ್ನಿಲ್ ಪದ್ಮನಾಭ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ಎಸ್ಎಸ್ಸಿ, ಎಚ್ಎಸ್ಸಿ ಅತೀ ಹೆಚ್ಚು ಅಂಕಗಳನ್ನು ಪಡೆದ ಬಂಟ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿಜೇತರ ಹೆಸರನ್ನು ಸಂಘದ ಜತೆ ಕೋಶಾಧಿಕಾರಿ ಮಹೇಶ್ ಎಸ್. ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್ ವಾಚಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್