ಬೆಂಗಳೂರು: ಕರ್ನಾಟಕದಲ್ಲಿ ಮೇ 24ರವರೆಗೆ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ರಾಜ್ಯಾದ್ಯಂತ ಕಟ್ಟುನಿಟ್ಟಿನ ರೂಲ್ಸ್ ಜಾರಿಗೆ ತರಲಾಗಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಲಾಕ್ಡೌನ್ನಿಂದ ಅನೇಕರು ದುಡಿಯಲು ಅವಕಾಶವಿಲ್ಲದೆ, ಒಂದೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಮೇ 24ರವರೆಗೆ ಇಂದಿರಾ ಕ್ಯಾಂಟೀನ್ನಲ್ಲಿ ನಿರ್ಗತಿಕರು, ಕಾರ್ಮಿಕರು, ಬಡವರಿಗೆ ಉಚಿತವಾಗಿ ಊಟ-ತಿಂಡಿ ವ್ಯವಸ್ಥೆ ಮಾಡಲು ಮುಂದಾಗಿದೆ. ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಈ ಸೌಲಭ್ಯ ಸಿಗಲಿದೆ.
ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಊಟ, ಆಹಾರ ಸಿಗದೆ ಸಂಕಷ್ಟಕ್ಕೀಡಾದವರ ನೆರವಿಗೆ ಸರ್ಕಾರ ಧಾವಿಸಿದೆ. ಇಂದಿರಾ ಕ್ಯಾಂಟೀನ್ನಲ್ಲಿ ನಿರ್ಗತಿಕರು, ಕಾರ್ಮಿಕರು, ಬಡವರು, ಕೂಲಿ ಕಾರ್ಮಿಕರಿಗೆ ಉಚಿತ ಊಟ, ತಿಂಡಿ ನೀಡಲು ನಿರ್ಧರಿಸಲಾಗಿದೆ. ಊಟ, ತಿಂಡಿ ನೀಡುವಂತೆ ಪೌರಾಡಳಿತ ಇಲಾಖೆ ಆದೇಶ ನೀಡಿದೆ.
ಕರ್ನಾಟಕ ರಾಜ್ಯದ ಎಲ್ಲಾ ತಾಲೂಕು, ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿಯೂ ಇಂದಿರಾ ಕ್ಯಾಂಟೀನ್ನಲ್ಲಿ ಬಡವರು, ನಿರ್ಗತಿಕರಿಗೆ ಉಚಿತ ಊಟ-ತಿಂಡಿ ವಿತರಿಸಲಾಗುವುದು. ಬೆಂಗಳೂರು, ಮಹಾನಗರ ಪಾಲಿಕೆ ಹೊರತುಪಡಿಸಿ ನಗರ ಸಭೆ, ಪುರ ಸಭೆ, ಪಟ್ಟಣ ಪಂಚಾಯಿತಿ ಹಂತದಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಊಟ ಲಭ್ಯವಿರಲಿದೆ.
ಮೇ 24ರವರೆಗೆ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಆಹಾರ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಮೂರು ಹೊತ್ತೂ ಊಟ-ತಿಂಡಿ ವಿತರಣೆ ಮಾಡಲು ಆದೇಶಿಸಲಾಗಿದೆ. ಆದರೆ ಎಷ್ಟು ಜನರಿಗೆ ಹಂಚಿಕೆ ಮಾಡಬೇಕು ಎಂಬುದನ್ನು ಸರ್ಕಾರ ಇನ್ನೂ ನಿಗದಿಪಡಿಸಿಲ್ಲ.
ಇಂದು ರಾಜಧಾನಿ ಬೆಂಗಳೂರಿಗೆ ಆಕ್ಸಿಜನ್ ಎಕ್ಸ್ ಪ್ರೆಸ್ ಆಗಮಿಸಿದ್ದು, ಬೆಂಗಳೂರಿಗೆ ಬಂದ 6 ಕಂಟೈನರ್ ನಲ್ಲಿ 120 ಟನ್ ಲಿಕ್ವಿಡ್ ಆಕ್ಸಿಜನ್ ಲಭ್ಯವಿದೆ. ತಲಾ ಒಂದು ಕಂಟೈನರ್ ನಲ್ಲಿ 20 ಟನ್ ಆಕ್ಸಿಜನ್ ಲಭ್ಯವಿದೆ. ವೈಟ್ ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ ಆಕ್ಸಿಜನ್ ಕಂಟೈನರ್ ಲಭ್ಯವಿದೆ.
Comments are closed.