ತುಮಕೂರು: ಕೆಲವು ತಿಂಗಳುಗಳ ಹಿಂದೆ ಕೋಲಾರದಲ್ಲಿ ರೈತ ಮಹಿಳೆಯೊಬ್ಬರಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ಎಂದು ನಿಂದಿಸಿ, ತೀವ್ರ ಟೀಕೆಗೆ ಗುರಿಯಾಗಿದ್ದ ಕಾನೂನು ಸಚಿವ ಮಾಧುಸ್ವಾಮಿ ಇದೀಗ ಮತ್ತೊಮ್ಮೆ ಅದೇ ಶಬ್ದಗಳ ಪ್ರಯೋಗ ಮಾಡಿರುವುದು ಬೆಳಕಿಗೆ ಬಂದಿದೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ 2020-21ನೇ ಸಾಲಿನ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿರುವ ಸಚಿವ ಮಾಧುಸ್ವಾಮಿಯವರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ತುಮಕೂರು ವಿಭಾಗದ ಪಿ.ಆರ್.ಡಿ.ಯ ಎಇಇ ವಿರುದ್ಧ ಗರಂ ಆದ ಮಾಧುಸ್ವಾಮಿಯವರು, ಜಾಡಿಸಿ ಒದ್ದರೆ ಎಲ್ಲಿಗೆ ಹೋಗಿ ಬೀಳುತ್ತೀಯಾ ಗೊತ್ತಾ ನೀನೀಗಾ…? ರಾಸ್ಕಲ್ ಕತ್ತೆ ಕಾಯೋಕೆ ಇಲ್ಲಿಗೆ ಬಂದಿದ್ದೀಯಾ? ಏನ್ ತಿಳ್ಕೊಂಡಿದ್ದೀರಾ ನಾವು…? ರೆಸಲ್ಯೂಷನ್ ಮಾಡ್ಸಿ ಸಸ್ಪೆಂಡ್ ಮಾಡ್ಸಿ ಈ ನನ್ಮಕ್ಕಳನ್ನ ಎಂದು ಕೂಗಾಡಿದ್ದಾರೆಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಕೊರೊನಾ, ನೀತಿ ಸಂಹಿತೆ ಹೆಸರಲ್ಲಿ ಅಧಿಕಾರಿಗಳು ಜಡಗಟ್ಟಿದ್ದಾರೆ. ಜಿಲ್ಲೆಯ ಪಿಆರ್ಐಡಿ ವಿಭಾಗದ ಅಧಿಕಾರಿಗಳು ಕೆಲಸ ಮಾಡುವುದನ್ನೇ ಮರೆತಿದ್ದಾರೆ. ಸಭೆ ನಡೆಯುವುದಿಲ್ಲ ಎಂಬ ಉದಾಸೀನತೆ ತಾಳಿರುವ ಅಧಿಕಾರಿಗಳು ಜಿಲ್ಲೆಯಲ್ಲಿ ಒಂದೇ ಒಂದು ಕಾಮಗಾರಿಯನ್ನೂ ಸಮರ್ಪಕವಾಗಿ ಮಾಡಿಲ್ಲ. ಯಾರು ಕೆಲಸ ಮಾಡುವುದಿಲ್ಲವೋ ಅಂತಹ ಅಧಿಕಾರಿಗಳ ಸಂಬಳ ನಿಲ್ಲಿಸಿ, ನಾನು ಹೇಳೋವರೆಗೂ ಸಂಬಳ ಕೊಡಬೇಡಿ. ಇಡೀ ಜೀವಮಾನ ಪ್ರಮೋಷನ್ ಸಿಗದಂತೆ ಮಾಡಿ.
ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗಗಳಲ್ಲಿ ಕೆಲಸಗಳು ಆಗಿಲ್ಲ. ನಾನು ಸೂಚನೆ ನೀಡಿ ಎಷ್ಟೋ ದಿನವಾಗಿದೆ. ಕೆಲಸ ಮಾಡದ ಎಇಇಯನ್ನು ಅಮಾನತು ಮಾಡುವಂತೆ ಸಿಇಒಗೆ ಮಾಧುಸ್ವಾಮಿಯವರು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.