ಕರ್ನಾಟಕ

ನಾನು ಈವರೆಗೆ ದನದ ಮಾಂಸ ತಿಂದಿಲ್ಲ, ತಿನ್ನುವುದೂ ಇಲ್ಲ: ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಇತ್ತೀಚೆಗೆ ನಾನು ಮಾತಾಡಿದ್ದೆಲ್ಲವನ್ನೂ ವಿವಾದ ಮಾಡುವುದು ಚಾಳಿಯಾಗಿಬಿಟ್ಟಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ನಾನು ಹಳ್ಳಿಯಿಂದ ಬಂದವನು, ಮಾತು ಸ್ವಲ್ಪ ಒರಟು, ಹಳ್ಳಿಭಾಷೆಯಲ್ಲಿ ಮಾತಾಡ್ತೇನೆ. ಇತ್ತೀಚೆಗೆ ನಾನು ಮಾತಾಡಿದ್ದೆಲ್ಲವನ್ನೂ ವಿವಾದ ಮಾಡುವುದು ಚಾಳಿಯಾಗಿಬಿಟ್ಟಿದೆ. ನಾ ಒಬ್ಬನೇ ಸಿಕ್ಕವನು ಟೀಕೆ ಮಾಡೋಕೆ, ಬಿಜೆಪಿ, ಜೆಡಿಎಸ್ ಎಲ್ಲರೂ ನನ್ನ ಮೇಲೆಯೇ ಬೀಳುವವರು, ನನ್ನ ರಕ್ಷಣೆಗೆ ಜನರೇ ಬರಬೇಕು ಎಂದು ಹೇಳಿದ್ದಾರೆ.

ದನದ ಮಾಂಸ ತಿನ್ನಕೆಂದರೆ ತಿನ್ತೀನಿ, ನೀ ಯಾವನಯ್ಯಾ ಕೇಳೋಕೆ ಎಂದು ಕೇಳಿದ್ದು ನಿಜ. ನಾನು ಈ ವರೆಗೆ ದನದ ಮಾಂಸ ತಿಂದಿಲ್ಲ, ತಿನ್ನುವುದೂ ಇಲ್ಲ. ಗೋಹತ್ಯೆ ನಿಷೇಧ ಕಾಯ್ದೆಯ ಹಿಂದಿನ ಬಿಜೆಪಿಯ ಆತ್ಮವಂಚಕ ನಡವಳಿಕೆಯನ್ನು ಪ್ರಶ್ನಿಸಲು ಆ ರೀತಿ ಹೇಳಿದ್ದೆ. ಇದರಲ್ಲೇನಿದೆ ವಿವಾದ? ಎಂದು ಪ್ರಶ್ನಿಸಿದ್ದಾರೆ.

ಓಟು ಹಾಕಲು ಊರಿಗೆ ಹೋಗಿದ್ದಾಗ ಕಾರ್ಯಕರ್ತರ ಮನೆಗೆ ಊಟಕ್ಕೆ ಹೋಗಿದ್ದೆ. ಅಲ್ಲಿ ಕೋಳಿ ಮಾಡಿದ್ದರು. ನಮ್ಮೂರ ಯುವಕನೊಬ್ಬ ಇಂದು ಹನುಮಜಯಂತಿ ಮಾಂಸ ತಿನ್ನೋದಿಲ್ಲ ಎಂದು ಹೇಳಿದಾಗ, ಹನುಮ ಜಯಂತಿ ದಿನ ಕೆಲವು ಕಡೆ ಮರಿ ಹೊಡೆಯುತ್ತಾರೆ, ಮಾಂಸ ತಿಂದರೆ ತಪ್ಪೇನು ಎಂದು ಕೇಳಿದ್ದೆ. ಅದನ್ನೂ ಕೂಡಾ ವಿವಾದ ಮಾಡಿಬಿಟ್ಟರು ಎಂದು ಹೇಳಿದ್ದಾರೆ.

 

Comments are closed.