ಕರ್ನಾಟಕ

ರೂಪಾಂತರ ಕೊರೊನಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ: ಸಚಿವ ಸುಧಾಕರ್

Pinterest LinkedIn Tumblr


ಬೆಂಗಳೂರು: ‘ಹೊಸ ಪ್ರಭೇದದ ಕೊರೊನಾ ನಿಯಂತ್ರಣಕ್ಕೆ ಗೃಹ ಇಲಾಖೆಯೊಂದಿಗೆ ಸಭೆ ನಡೆಸಿ ಹೊಸ ಮಾರ್ಗಸೂಚಿ ರೂಪಿಸಲಾಗುವುದು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಸಚಿವರು, ‘ಹೊಸ ವರ್ಷಕ್ಕೆ ಹೊಸ ಮಾರ್ಗಸೂಚಿ ರೂಪಿಸಬೇಕಿದೆ. ಇದಕ್ಕಾಗಿ ಗೃಹ ಇಲಾಖೆಯ ಜೊತೆ ಸಭೆ ನಡೆಸಿ ಹೊಸ ಬಗೆಯ ಪ್ರಭೇದದ ಕೊರೊನಾ ನಿಯಂತ್ರಣಕ್ಕೆ ಮಾರ್ಗಸೂಚಿ ರೂಪಿಸಲಾಗುವುದು’ ಎಂದರು.

‘ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ಈ ಲಸಿಕೆಯನ್ನು ಪ್ರಾಯೋಗಿಕವಾಗಿ ಪಡೆಯಬಹುದು. ಕೊರೊನಾ ವಾರಿಯರ್ ಗಳಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಈ ಲಸಿಕೆಯನ್ನು ಪಡೆದು ಪ್ರಯೋಗದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದ್ದೇನೆ. ಕ್ಲಿನಿಕಲ್ ಟ್ರಯಲ್‌ನಲ್ಲಿ ಪಾಲ್ಗೊಂಡು ಸಹಾಯ ಮಾಡಬಹುದು’ ಎಂದರು.

‘ಬ್ರಿಟನ್‌ನಿಂದ ಬಂದ 2,500 ಜನ ಪೈಕಿ, 1,638 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 14 ಜನರಿಗೆ ಪಾಸಿಟಿವ್ ಆಗಿದೆ. ಇವರ ಮಾದರಿಯನ್ನು ನಿಮ್ಹಾನ್ಸ್‌ನ ಲ್ಯಾಬ್‌ಗೆ ಕಳುಹಿಸಲಾಗಿದೆ. ಈ ಮಾದರಿಗಳನ್ನು ಜೆನೆಟಿಕ್ ಸೀಕ್ವೆನ್ಸಿಂಗ್ ಮಾಡಲಾಗುತ್ತಿದೆ. ಇದಕ್ಕೆ 48 ಗಂಟೆಗಳ ಕಾಲ ಬೇಕಾಗುತ್ತದೆ. ವರದಿ ಬಂದ ಬಳಿಕ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು. ಇಡೀ ದೇಶದಲ್ಲಿ ಬ್ರಿಟನ್‌ನಿಂದ ಒಟ್ಟು 38,500 ಜನರು ಬಂದಿದ್ದಾರೆ. ಎಲ್ಲ ರಾಜ್ಯಗಳಿಂದ ಬಂದ ಮಾದರಿ, ವರದಿಯನ್ನು ಕಲೆಹಾಕಿ ಅಂತಿಮ ವರದಿಯನ್ನು ಐಸಿಎಂಆರ್ ಪ್ರಕಟಿಸಲಿದೆ’ ಎಂದು ಮಾಹಿತಿ ನೀಡಿದರು.

‘ವಿಮಾನ ನಿಲ್ದಾಣದಲ್ಲಿ ಸೂಕ್ತ ತಪಾಸಣೆ ವ್ಯವಸ್ಥೆ ಇದೆ. ನೆಗೆಟಿವ್ ವರದಿ ಇಲ್ಲದವರನ್ನೂ ನಿಲ್ದಾಣದಲ್ಲೇ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ’ ಎಂದೂ ಅವರು ವಿವರಿಸಿದರು.

Comments are closed.