ಬೆಂಗಳೂರು; ಬಹುಮತ ಇಲ್ಲದ ಮೇಲೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ಸಾರಿ ನಿಮ್ಮ ಮೇಲೆ ಅವಿಶ್ವಾಸ ನಿರ್ಣಯ ಆದ ಮೇಲೆ ನಿಮಗೆ ಆ ಕುರ್ಚಿಯಲ್ಲಿ ಕೂರಲು ಅರ್ಹತೆಯಿಲ್ಲ. ಇದು ಇಡೀ ಜಗತ್ತಿಗೆ ಗೊತ್ತಿದೆ. ಈ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಅನೇಕ ತೀರ್ಪುಗಳಿವೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದರು.
ವಿಧಾನ ಪರಿಷತ್ನಲ್ಲಿ ಇಂದು(ಮಂಗಳವಾರ) ನಡೆದ ಹೈಡ್ರಾಮಾದ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ನಿನ್ನೆಯೇ ಬಹಿರಂಗವಾಗಿ ಉಪಸಭಾಪತಿಗಳನ್ನು ಕೂರಿಸುವುದಾಗಿ ಹೇಳಿದ್ದೇವೆ. ಅವಿಶ್ವಾಸ ನಿರ್ಣಯ ಮಂಡನೆ ಆದ ಮೇಲೆ ಉಪಸಭಾಪತಿಗಳೇ ಮುಂದುವರೆಯುತ್ತಾರೆ. ಬೆಲ್ ಆದಮೇಲೆ ಬಂದರು, ಮೊದಲು ಬಂದರು ಅದೆಲ್ಲ ಮುಖ್ಯವಲ್ಲ. ಬಹುಮತ ಇಲ್ಲ ಅನ್ನುವುದೇ ಮುಖ್ಯ. ಉಪಸಭಾಪತಿಗಳನ್ನು ಕತ್ತು ಹಿಡಿದು ಎಳೆದಾಡಿದ್ದು ದೇಶದ ಇತಿಹಾಸದಲ್ಲೇ ಮೊದಲು. ಇದು ಕಾಂಗ್ರೆಸ್ ನವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಅವಿಶ್ವಾಸ ನಿರ್ಣಯವಾದ ಬಳಿಕ, ಬಹುಮತ ಇಲ್ಲದಿದ್ದ ಮೇಳೆ ಸಭಾಪತಿಗಳಿಗೆ ಹೇಳಿ ರಾಜೀನಾಮೆ ಬಿಸಾಡಲು ಕಾಂಗ್ರೆಸ್ನವರು ಹೇಳಲಿ. ಈ ಸಂಬಂಧ ಈಗ ರಾಜಭವನಕ್ಕೆ ಮೆರವಣಿಗೆಯಲ್ಲಿ ಹೋಗಿ ಜೆಡಿಎಸ್- ಬಿಜೆಪಿಯ ಪರಿಷತ್ ಸದಸ್ಯರು ರಾಜ್ಯಪಾಲರಿಗೆ ಮನವಿ ಕೊಡುತ್ತಾರೆ. ಇಲ್ಲಿ ನಡೆದ ಪ್ರತಿಯೊಂದು ಘಟನೆಯನ್ನು ರಾಜ್ಯಪಾಲರಿಗೆ ಹೇಳುತ್ತಾರೆ ಎಂದು ಬಿಎಸ್ವೈ ಹೇಳಿದರು.