ಬೆಂಗಳೂರು : ರಾಜ್ಯದಲ್ಲಿ ತರಲು ನಿರ್ಧರಿಸಿರುವ ಲವ್ ಜಿಹಾದ್ ನಿಷೇಧ ಕಾಯ್ದೆಯ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ, ಹಿಂದೂ ಮುಸ್ಲಿಂ ಕ್ರಾಸ್ ಆಗಿ ಬಹಳ ಜನ ಹುಟ್ಟಿದ್ದಾರೆ ಎನ್ನುವ ಹೇಳಿಕೆ ಬಿಜೆಪಿ ನಾಯಕರ ಆಕ್ರೋಶಕ್ಕೆ ಗುರಿಯಾಗಿದೆ.
ಬೆಂಗಳೂರಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಲವ್ ಜಿಹಾದ್ ನಿಷೇಧ ವಿಚಾರಕ್ಕೆ ಗರಂ ಆಗಿದ್ದಾರೆ. ಮದುವೆ ಅನ್ನುವುದು ಪ್ರತಿಯೊಬ್ಬ ವ್ಯಕ್ತಿಯ ವಯಕ್ತಿಕ ವಿಚಾರ ಇಂತವರನ್ನೇ ಮದುವೆಯಾಗಿ ಎನ್ನುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಹಿಂದೂ ಮುಸ್ಲಿಂ ಕ್ರಾಸ್ ಆಗಿ ಬಹಳ ಜನ ಹುಟ್ಟಿದ್ದಾರೆ, ಮದುವೆ ಅನ್ನುವುದು ಅವರವರ ವಯಕ್ತಿಕ ನಿರ್ಧಾರ ಮತ್ತು ಅಭಿಪ್ರಾಯ, ಇಂತವರನ್ನೇ ಮದುವೆಯಾಗಿ ಎಂದು ಹೇಳಲು ಸಾಧ್ಯವಿಲ್ಲ. ಅಲಹಬಾದ್ ಹೈಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್ ಈ ಮಾತನ್ನೇ ಹೇಳಿದೆ. ರಾಜಕೀಯ ದುರುದ್ದೇಶದಿಂದ ಮತ್ತು ಜನರಲ್ಲಿ ಗೊಂದಲ ಮೂಡಿಸುವ ಸಲುವಾಗಿ ಬಿಜೆಪಿ ಈ ಕಾನೂನನ್ನು ಜಾರಿ ಮಾಡಲು ಹೊರಟಿದೆ. ಲವ್ ಜಿಹಾದ್ ಕಾನೂನು ಜಾರಿಗೆ ತರಲು ನಮ್ಮ ವಿರೋಧವಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಒಂದು ವರ್ಗದವರ ಒಲೈಕೆಗಾಗಿ ಈ ರೀತಿಯ ಹೇಳಿಕೆ ಸರಿಯಲ್ಲ, ಅನೇಕ ಮುಸಲ್ಮಾನರು ನಮ್ಮ ಹಿಂದೂ ಹೆಣ್ಣುಮಕ್ಕಳನ್ನು ಮದುವೆಯಾಗಿ ನಡುನೀರಿನಲ್ಲಿ ಕೈಬಿಟ್ಟ ಉದಾಹರಣೆಗಳಿವೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ , ಇಂತಹಾ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ, ಮತ್ತು ಈ ರೀತಿ ಮಾತನಾಡುವುದು ಒಬ್ಬ ನಾಯಕನಿಗೆ ಶೋಭೆ ತರುವಂತದಲ್ಲ. ಒಂದು ವರ್ಗದ ಜನರ ಓಲೈಕೆಗಾಗಿ ಈ ರೀತಿ ಮಾತನಾಡಬಾರದು ಎಂದರು.
ಗ್ರಾಮೀಣಾಭಿವೃದ್ದಿ ಸಚಿವರಾದ ಕೆ.ಎಸ್ ಈಶ್ವರಪ್ಪ ಮಾತನಾಡಿ, ಸಿದ್ದರಾಮಯ್ಯನವರೇ ನೀವು ಮುಸಲ್ಮಾನರನ್ನು ಸಂತೃಪ್ತಿ ಪಡಿಸಿದ್ದು ಸಾಕು. ಸಿದ್ದರಾಮಯ್ಯ ಈ ರೀತಿಯ ಮೂರ್ಖತನದ ಮಾತುಗಳನ್ನಾಡಬಾರದು, ಈ ರೀತಿಯ ಬಾಲಿಶ ಹೇಳಿಕೆಗಾಗಿ ಸಿದ್ದರಾಮಯ್ಯ ರಾಜ್ಯದ ಕ್ಷಮೆ ಕೋರಬೇಕು ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಲವ್ ಜಿಹಾದ್ ಕುರಿತು ಸಿದ್ದರಾಮಯ್ಯ ನೀಡಿರುವ ಹೇಳಿಕೆ ತೀವ್ರ್ ಸಂಚಲನವನ್ನು ಉಂಟು ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ಪರ ವಿರೋಧ ಚರ್ಚೆಗಳು ಜೋರಾಗಿದೆ.
Comments are closed.