ಕರ್ನಾಟಕ

ಚನ್ನಪಟ್ಟಣದಲ್ಲಿ ನನ್ನದೇ ಸರ್ಕಾರ: ಯೋಗೇಶ್ವರ್ ಗೆ ಕುಮಾರಸ್ವಾಮಿ ಗುಡುಗು

Pinterest LinkedIn Tumblr


ರಾಮನಗರ: ಚನ್ನಪಟ್ಟಣದಲ್ಲಿ ನನ್ನದೇ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಿ.ಪಿ. ಯೋಗೇಶ್ವರ್ ವಿರುದ್ಧ ಗುಡುಗಿದ್ದಾರೆ.

ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ವಿಧಾನ ಪರಿಷತ್​ ಸದಸ್ಯ ಸಿ.ಪಿ.ಯೋಗೇಶ್ವರ್ ಹೆಸರು ಬಳಸದೇ ಗರಂ ಆದರು. ತಾಲೂಕಿನ ನುಣ್ಣೂರು ಗ್ರಾಮದಲ್ಲಿ ಬಡವರ ಭೂಮಿ ಕಬಳಿಸಲು ಹೋದವರು ಈಗ ಮಂತ್ರಿಯಾಗಲು ಹೊರಟ್ಟಿದ್ದಾರೆಂದು ಕಿಡಿಕಾರಿದರು. ಯಾರನ್ನೋ ಮಂತ್ರಿ ಮಾಡುತ್ತಾರೆಂದು ನಾನು ಹೆದರುತ್ತೇನಾ. ನಮ್ಮ ಕುಟುಂಬದಲ್ಲಿ ಬಹಳ ಜನರನ್ನ ನೋಡಿದ್ದೇವೆ. ಮುಖ್ಯಮಂತ್ರಿಗಳನ್ನೇ ಹೆದರಿಸಿದ್ದೇವೆ ನಾವು ಎಂದು ಸಿ ಪಿ ಯೋಗೇಶ್ವರ್ ಗೆ ತಿರುಗೇಟು ಕೊಟ್ಟರು. ಇನ್ನು ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಸಿಎಂ ಅವರನ್ನು ಭೇಟಿ ಮಾಡಿದ್ದೇನೆ ಅಷ್ಟೇ, ಬೇರೆ ಯಾವ ಕಾರಣಕ್ಕೂ ಅಲ್ಲ. ಇಲ್ಲಿ 20 ಕೆರೆ ತುಂಬಿಸಿ ಭಗೀರಥ ಆದ್ರೂ, ಆದರೆ ನಾನು 128 ಕೆರೆ ತುಂಬಿಸಿದ್ದೇನೆ, ಆದರೆ ನಾನೇನು ಬೋರ್ಡ್ ಹಾಕಿಕೊಂಡಿಲ್ಲ ಎಂದರು.

ಇನ್ನು ನಾನು ಇಲ್ಲಿ ಇರುವವರೆಗೂ ಬಡವರರಿಗೆ ಅನ್ಯಾಯವಾಗಲೂ ಬಿಡಲ್ಲ, ಸಿಎಂ ಯಡಿಯೂರಪ್ಪನವರು ಈ ಜಿಲ್ಲೆಯಿಂದ ಇನ್ನು 4 ಜನರನ್ನ ಮಂತ್ರಿ ಮಾಡಲಿ ಹೆದರಿಸುವ ಶಕ್ತಿ ನನಗಿದೆ. ನನ್ನ ಬೆನ್ನಿಗೆ ಜನರಿದ್ದಾರೆ. ನಾನು ಯಾರನ್ನೋ ಮಂತ್ರಿ ಮಾಡಬೇಡಿ ಎನ್ನುವ ಕೀಳು ಮಟ್ಟಕ್ಕೆ ಇಳಿಯಲ್ಲ ಎಂದರು.

ಬಡವರ ಭೂಮಿಯನ್ನ ಮಗಳ ಹೆಸರಿಗೆ ಖಾತೆ ಮಾಡಿ ಎಂದವರು ಮಂತ್ರಿಯಾಗಲು ಹೊರಟ್ಟಿದ್ದಾರೆ. ಅದೆಲ್ಲವೂ ಗೊತ್ತಿದೆ, ಬರಲಿ ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಸಿ.ಪಿ.ಯೋಗೇಶ್ವರ್ ಹೆಸರು ಬಳಸದೇ ಕುಮಾರಸ್ವಾಮಿ ಕಿಡಿಕಾರಿದರು.

ಚನ್ನಪಟ್ಟಣದಲ್ಲಿ ಕೆಲವರು ಬಗರ್ ಹುಕುಂ ಸಾಗುವಳಿ ಹೆಸರಿನಲ್ಲಿ ಬಡವರಿಗೆ ಸಿಗಬೇಕಾದ ಭೂಮಿಯನ್ನ ಕಬಳಿಸಲು ಹೊರಟ್ಟಿದ್ದಾರೆ. ಆದರೆ, ನಾನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ನಾನು ನಮ್ಮ ಕಾರ್ಯಕರ್ತರಿಗೂ ಹೇಳುತ್ತೇನೆ. ಕೆಲವರು ನನ್ನನ್ನ ಬೈಯ್ಯಬಹುದು. ಆದರೆ, ನಾನು ಅನ್ಯಾಯಕ್ಕೆ ಬೆಂಬಲ ಕೊಡಲ್ಲ. ನ್ಯಾಯಯುತವಾಗಿ ಯಾರೇ ಬಂದರೂ ನಾನು ಬೆಂಬಲ ಕೊಡುತ್ತೇನೆ. ಆದರೆ, ಅನ್ಯಾಯದ ಮಾರ್ಗದಲ್ಲಿ ಬಂದರೆ ಯಾವುದೇ ಕಾರಣಕ್ಕೂ ನಾನು ಅವರ ಪರವಾಗಿ ನಿಲ್ಲಲ್ಲ. ನಾವು ಹೋಗುವಾಗ 6 ಅಡಿ, 3 ಅಡಿ ಅಷ್ಟೇ, ಆದರೆ ನಾವು ಗಳಿಸುವ ಪ್ರೀತಿಯಷ್ಟೇ ಮುಖ್ಯ. ಹಾಗಾಗಿ ಚನ್ನಪಟ್ಟಣದಲ್ಲಿ ಬಡವರ ಭೂಮಿ ಲಪಟಾಯಿಸಲು ನಾನು ಬಿಡಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ಲಿಂಗಾಯಿತ ಸಮುದಾಯವನ್ನ ಒಬಿಸಿಗೆ ಸೇರ್ಪಡೆ ಮಾಡುವ ವಿಚಾರಕ್ಕೆ ಮಾತನಾಡಿ ಅವರು, ರಾಜಕೀಯವಾಗಿ ನಡೆಯುತ್ತಿರುವ ಈಗಿನ ಪ್ರಸಂಗಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಮೀಸಲಾತಿ ಹಾಗೂ ಪ್ರಾಧಿಕಾರ ರಚನೆ ಮಾಡುವುದು ಅವರವರ ಇಚ್ಛೆ. ಅಧಿಕಾರ ನಡೆಸುವವರಿಗೆ ನಾನು ಸಲಹೆ ಕೊಡುತ್ತೇನೆ. ಪ್ರತಿ ಕುಟುಂಬಕ್ಕೂ ವಸತಿ, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಕಲ್ಪಿಸುವುದು ಸರ್ಕಾರದ ಕೆಲಸ ಸ್ವಾರ್ಥಕ್ಕಾಗಿ ಕಾಂಟ್ರವರ್ಸಿ ವಿಚಾರಕ್ಕೆ ಫಲಪೇಕ್ಷೆ ಇಟ್ಟುಕೊಂಡು ನಾನು ತಲೆಹಾಕುವುದಿಲ್ಲ ಎಂದರು.

Comments are closed.