ಕರ್ನಾಟಕ

ಸರ್ಕಾರಿ ನೌಕರಿ ಕೊಡಿಸುವುದಾಗಿ 2 ಕೋಟಿ ವಂಚಿಸಿದ್ದವನ ಬಂಧನ

Pinterest LinkedIn Tumblr


ಚಿಕ್ಕಮಗಳೂರು : ಸರ್ಕಾರಿ ನೌಕರಿ ಕೊಡಿಸುವುದಾಗಿ ಸುಮಾರು 50ಕ್ಕೂ ಅಧಿಕ ಜನರಿಗೆ ಮೋಸ ಮಾಡಿ ಸುಮಾರು ಎರಡು ಕೋಟಿಗೂ ಅಧಿಕ ಹಣ ವಂಚಿಸಿದ್ದವನನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಹೌದು, ಈತ ನಕಲಿ ಅಧಿಕಾರಿ. ನಿರುದ್ಯೋಗಿ ಯುವಕ-ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಈತ ಊಸರವಳ್ಳಿ ಬಣ್ಣ ಬದಲಾಯಿಸುವ ಹಾಗೆ ತನ್ನ ಹುದ್ದೆಗಳನ್ನು ನಿರುದ್ಯೋಗಿ ಯುವಕ-ಯುವತಿಯರ ಕ್ವಾಲಿಫಿಕೇಶನ್ ಗೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಿದ್ದ. ಹೆಸರು, ಪ್ರಭಾಕರ್, ಬೆಂಗಳೂರಿನ ಭೈರವೇಶ್ವರ ನಗರದ ನಿವಾಸಿ. ಬಿಬಿಎಂ ಓದಿರುವ ಈತ ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ಕೆಲಸಗಳನ್ನು ಮಾಡಿಕೊಂಡಿದ್ದ. ದುಡ್ಡಿನಾಸೆಗೆ ಯುವಕ-ಯುವತಿಯರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಅವರಿಂದ ಹಣ ಪೀಕುತ್ತಿದ್ದ.

ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ಅನೇಕ ಜಿಲ್ಲೆಗಳ ಯುವಕ-ಯುವತಿಯರಿಗೆ ಈತ ಯಮಾರಿಸಿದ್ದಾನೆ. ಕೆಲಸ ಕೊಡಿಸುವುದಾಗಿ ನಂಬಿಸಿ ಒಬ್ಬೊಬ್ಬರ ಹತ್ತಿರವೂ ಕನಿಷ್ಠ 7 ಲಕ್ಷದಿಂದ 15 ಲಕ್ಷದವರೆಗೂ ವಸೂಲಿ ಮಾಡಿದ್ದಾನೆ. ಅಂದಾಗೆ ಈತ ಕಳೆದ ಒಂದೂವರೆ ವರ್ಷದಲ್ಲಿ ಬರೋಬ್ಬರಿ 2 ಕೋಟಿಗೂ ಅಧಿಕ ಹಣವನ್ನು ವಂಚಿಸಿದ್ದಾನೆ.

ಈ ಆಸಾಮಿ ನಿರುದ್ಯೋಗಿಗಳನ್ನೇ ಬಂಡವಾಳ ಮಾಡಿಕೊಂಡು ಇಲ್ಲಿಯವರೆಗೂ ಕೋಟಿಗಟ್ಟಲೇ ವಂಚಿಸುತ್ತಲೇ ಬರ್ತಿದ್ದ. ಹೀಗೆ ಬಂದ ಬಿಟ್ಟಿ ದುಡ್ಡಲ್ಲಿ, ತಿರುಪತಿ, ವೈಷ್ಣೋದೇವಿ ಸೇರಿದಂತೆ ಹಲವೆಡೆ ಹೆಲಿಕಾಪ್ಟರ್ ಬಾಡಿಗೆ ಮಾಡಿಕೊಂಡು ಕುಟುಂಬ ಸಮೇತ ಹೋಗಿಬರ್ತಿದ್ದ ಈ ಖತರ್ನಾಕ್. ಕೊನೆಗೆ ಈತನಿಗೆ 7 ಲಕ್ಷ ಕೊಟ್ಟು ಯಮಾರಿದ್ದ ಚಿಕ್ಕಮಗಳೂರಿನ ಉಮೇಶ್, ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರನ್ನ ಗಂಭೀರವಾಗಿ ಪರಿಗಣಿಸಿದ್ದ ನಗರ ಠಾಣೆ ಇನ್ಸ್ ಪೆಕ್ಟರ್ ತೇಜಸ್ವಿ, ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಅವರ ಜೊತೆ ಮಾತಾಡಿ ಈ ನಕಲಿ ಅಧಿಕಾರಿಯನ್ನು ಖೆಡ್ಡಾಕ್ಕೆ ಕೆಡವಲು ಅಖಾಡ ಸಿದ್ದಪಡಿಸಿದ್ದರು. ಕೊನೆಗೆ ಚಿಕ್ಕಮಗಳೂರಲ್ಲೇ ಆರೋಪಿ ಕೈಗೆ ಕೋಳ ತೊಡಿಸಿದ ಇನ್ಸ್ ಪೆಕ್ಟರ್ ತೇಜಸ್ವಿ ಮತ್ತು ಅವರ ತಂಡ, ಆರೋಪಿಯ ಜನ್ಮ ಜಾಲಾಡಿ, ಸದ್ಯ 80 ಲಕ್ಷದಷ್ಟು ಹಣ ರಿಕವರಿ ಮಾಡಿ ಖತರ್ನಾಕ್ ಆಸಾಮಿಗೆ ಜೈಲಿನ ದಾರಿ ತೋರಿಸಿದ್ದಾರೆ.

ಈ ಕಿಲಾಡಿ ಆಫೀಸರ್, ಕೇವಲ ಕೆಲಸದ ಆಸೆ ತೋರಿಸುತ್ತಿರಲಿಲ್ಲ. ಈತನ ಜೊತೆ ಯಾವಾಗಲೂ ಬಂಡಲ್ ಗಟ್ಟಲೇ ಶಿಕ್ಷಣ ಇಲಾಖೆ, ಇಸ್ರೋ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ನಕಲಿ ಆಫರ್ ಲೆಟರ್​ಗಳನ್ನ ಇಟ್ಟುಕೊಳ್ಳುತ್ತಿದ್ದ. ಈ ಆಫರ್ ಲೆಟರ್, ನೇಮಕಾತಿ ಲೆಟರ್ ನೋಡಿದ ಯಾರಿಗೂ ಕೂಡ ಅನುಮಾನವೇ ಬಾರದ ರೀತಿಯಲ್ಲಿ ವ್ಯವಹರಿಸುತ್ತಿದ್ದ. ಕೆಲವರಿಗೆ ಒಂದು ತಿಂಗಳು, ಎರಡು ತಿಂಗಳು ಸಂಬಳ ಕೂಡ ಕೊಟ್ಟು ಮತ್ತಷ್ಟು ಜನರು ಬಲೆಗೆ ಬೀಳುವಂತೆ ಪರೋಕ್ಷವಾಗಿ ಖತರ್ನಾಕ್ ಗೇಮ್ ಆಡುತ್ತಿದ್ದ. ಸದ್ಯ ಈ ಕಿಲಾಡಿ, ನಕಲಿ ಆಫೀಸರನ್ನು ಕಾಫಿನಾಡ ಪೊಲೀಸರು ಲಾಕ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.

ಒಟ್ಟಿನಲ್ಲಿ ಕೋಟಿಯ ಮಿಕ ಸಿಕ್ಕಿಬಿದ್ದಿದ್ದರಿಂದ ಭವಿಷ್ಯದಲ್ಲಿ ಇನ್ನೂ ಹಲವರು ಮೋಸ ಹೋಗೋದು ತಪ್ಪಿದಂತಾಗಿದೆ, ಆದರೆ ಈತನನ್ನ ನಂಬಿ ಹಣ ಕಳೆದುಕೊಂಡವರು ಕೆಲ್ಸನೂ ಬೇಡ, ಏನೂ ಬೇಡ. ಕೊಟ್ಟಿರುವ ಹಣ ವಾಪಸ್ ಸಿಕ್ಕಿದರೆ ಸಾಕು ಅಂತಾ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

Comments are closed.