ಕರ್ನಾಟಕ

ಬಳ್ಳಾರಿ: ಕೊರೋನಾದಿಂದ ಸಾವನ್ನಪ್ಪಿದ್ದವರ ಮೃತದೇಹಗಳನ್ನು ಬೇಕಾಬಿಟ್ಟಿ ಗುಂಡಿಗೆ ಎಸೆದು ಮುಚ್ಚಿದ ಸಿಬ್ಬಂದಿ

Pinterest LinkedIn Tumblr


ಬೆಂಗಳೂರು; ಕೊರೋನಾ ವೈರಸ್​ನಿಂದ ಸತ್ತವರ ಮೃತದೇಹಗಳನ್ನು ಆರೋಗ್ಯ ಸಿಬ್ಬಂದಿ ಅಮಾನವೀಯ ರೀತಿಯಲ್ಲಿ ಗುಂಡಿಗೆ ಎಸೆಯುತ್ತಿರುವ ವಿಡಿಯೋವೊಂದು ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ವಿಡಿಯೋ ನೋಡಿದವರ ಮನಸ್ಸು ಒಮ್ಮೆ ಮಮಲ ಮರುಗಿ, ಹಾಗೆ ನಡೆದುಕೊಂಡವರ ವಿರುದ್ಧ ಕಟ್ಟುನಿಟ್ಟಿನ ಕ್ರಮವಾಗಲಿ ಎಂದು ಆಗ್ರಹಿಸಿದ್ದಾರೆ.

ಸ್ವತಃ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ತವರು ಜಿಲ್ಲೆಯಾದ ಬಳ್ಳಾರಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಸಚಿವ ಶ್ರೀರಾಮುಲು ಮಾತನಾಡಿದ್ದು, ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪಿಪಿಇ ವಸ್ತ್ರ ಧರಿಸಿದ ಆರೋಗ್ಯ ಇಲಾಖೆಯ ಐದಾರು ಸಿಬ್ಬಂದಿ ಆ್ಯಂಬುಲೆನ್ಸ್​ನಲ್ಲಿ ಮೂರು ಮೃತದೇಹಗಳನ್ನು ತಂದಿದ್ದಾರೆ. ವಿಶಾಲ ಪ್ರದೇಶದಲ್ಲಿ ಜೆಸಿಬಿ ಮೂಲಕ ದೊಡ್ಡದಾಗಿ ತೆಗೆದ ಗುಂಡಿಯೊಳಗೆ ಕಪ್ಪು ಬ್ಯಾಗ್​ನಲ್ಲಿ ಮುಚ್ಚಿದ ಮೃತದೇಹಗಳನ್ನು ಒಂದೊಂದಾಗಿ ಮೂರ್ನಾಲ್ಕು ಜನ ಆ್ಯಂಬುಲೆನ್ಸ್​ನಿಂದ ತಂದು ಗುಂಡಿಯ ಒಳಗೆ ಬೇಕಾಬಿಟ್ಟಿಯಾಗಿ ಎಸೆಯುತ್ತಾರೆ.

ಇದನ್ನು ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿಕೊಂಡಿದ್ದು, ಮೃತದೇಹಗಳನ್ನು ನಿಧಾನಕ್ಕೆ ಗುಂಡಿಗೆ ಹಾಕುವಂತೆಯೂ ಹೇಳುತ್ತಾರೆ. ಆದರೂ ಆ ಸಿಬ್ಬಂದಿ ದೇಹಗಳನ್ನು ಮನಸೋಇಚ್ಛೆ ಬಂದಂತೆ ಗುಂಡಿಗೆ ಎಸೆಯುತ್ತಾರೆ. ಈ ವಿಡಿಯೋವನ್ನು ಇಂದು ಬೆಳಗ್ಗೆ ಯೂಟ್ಯೂಬ್​ಗೆ ಅಪ್​ಲೋಡ್ ಮಾಡಲಾಗಿದ್ದು, ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ಹೀಗೆ ನಡೆದುಕೊಂಡ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Comments are closed.