ಕರ್ನಾಟಕ

ಸ್ನೇಹಿತರೊಂದಿಗೆ ಸಹಕರಿಸುವಂತೆ ಪತಿಯಿಂದಲೇ ಪತ್ನಿಗೆ ಒತ್ತಾಯ

Pinterest LinkedIn Tumblr


ಬೆಂಗಳೂರು (ಜೂ. 26): ಹೆಣ್ಣಿನ ಶೋಕಿ ಇರುವ ಗಂಡ ಹಲವು ಮಹಿಳೆಯರೊಂದಿಗೆ ಅನೈತಿಕ ಸಂಬಂಧದ ಇಟ್ಟುಕೊಂಡಿದ್ದ. ಇಷ್ಟಕ್ಕೆ ಸುಮ್ಮನಾಗದ ಈತ ಅನ್ಯ ಪುರುಷರೊಂದಿಗೆ ಸಹಕರಿಸುವಂತೆ ಹೆಂಡತಿಯನ್ನು ಕಾಡುತ್ತಿದ್ದ ಎಂದು ಹೆಂಡತಿ ಆರೋಪ ಮಾಡಿದ್ದಾಳೆ. ಗಂಡನ ವಿಕೃತ ವರ್ತನೆ ಗೆ ಬೇಸತ್ತ ಆಕೆ ರಾತ್ರಿ ವೇಳೆ ಜೀವ ಕೈಯಲ್ಲಿಟ್ಕೊಂಡು ದಿನ ಕಳೆಯುತ್ತಿದ್ದಾಳೆ.

ದೇವನಹಳ್ಳಿ ತಾಲೂಕಿನ ಚಿಕ್ಕಸಣ್ಣೆಯ ನಿವಾಸಿ ಲಲಿತಾ ತನ್ನ ಗಂಡನ ವಿಕೃತ ವರ್ತನೆಯಿಂದ ನಿತ್ಯ ಕಣ್ಣೀರಿಡುತ್ತಿದ್ದಾಳೆ. ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆ ಕೊತ್ತಕೋಟ ಗ್ರಾಮದ ಲಲಿತಾಗೆ 2000ರ ಫೆ. 24ರಂದು ತನ್ನ ಸೋದರತ್ತೆಯ ಮಗ ನಾಗರಾಜ್ ನೊಂದಿಗೆ ಮದುವೆಯಾಗಿತ್ತು. ದೇವನಹಳ್ಳಿಯ ಚಿಕ್ಕಸಣ್ಣೆ ಗ್ರಾಮದಲ್ಲಿ ಇಬ್ಬರ ದಾಂಪತ್ಯ ಶುರುವಾಗಿತ್ತು. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ನಾಗರಾಜ್ ಗೆ ಕೈ ತುಂಬ ಸಂಬಳ ಬರುತ್ತಿದ್ದು, ಇಬ್ಬರ ದಾಂಪತ್ಯ ಸುಖಕರವಾಗಿತ್ತು. ಆದರೆ ಇವರಿಗೆ ಮಕ್ಕಳಾಗಿರುವುದಿಲ್ಲ. ಮಕ್ಕಳಾಗದ ಲಲಿತಾಗೆ ಗಂಡ ನಾಗರಾಜ್ ಮತ್ತು ಅತ್ತೆ ರಾಮೇಶ್ವರಮ್ಮ ಮಾನಸಿಕ ಹಿಂಸೆ ನೀಡಲು ಪ್ರಾರಂಭಿಸಿದರು. ದೈಹಿಕವಾಗಿ ಕಿರುಕುಳ ಸಹ ನೀಡುತ್ತಿದ್ದರು. ನಾಗರಾಜ್ ವಿರುದ್ಧ ದೇವನಹಳ್ಳಿ ಸ್ಟೇಷನ್ ನಲ್ಲಿ ದೂರು ಸಹ ನೀಡಲಾಗಿದ್ದು, ಪೊಲೀಸರು ನಾಗರಾಜ್ ಕರೆದು ಬುದ್ದಿ ಹೇಳಿ ಕಳಿಸಿದ್ದರು.

ಪೊಲೀಸರ ಮಾತಿಗೆ ಬೆಲೆ ಕೊಡದ ನಾಗರಾಜ್ ಹೆಂಡತಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಡಲು ಶುರು ಮಾಡಿದ. ಮನೆಗೆ ರೇಷನ್ ತರೋದು ನಿಲ್ಲಿಸಿದ ಮನೆಯಲ್ಲಿ ಅಕ್ರಮವಾಗಿ ಸೇರಿಕೊಂಡಿದ್ದಾಳೆಂದು ಲಲಿತಾಳ ವಿರುದ್ಧ ದೂರು ನೀಡಿ ಮನೆಯಿಂದ ಹೊರ ಹಾಕಲು ಯತ್ನಿಸಿದ. ಇಷ್ಟಕ್ಕೆ ಸುಮ್ಮನಾಗದ ನಾಗರಾಜ್ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಬೆಳೆಸಿದ. ಮನೆಗೆ ಅನ್ಯಪುರುಷರನ್ನು ಕಳುಹಿಸಿ ಅವರೊಂದಿಗೆ ಸಹಕರಿಸುವಂತೆ ಬೆದರಿಸುತ್ತಿದ್ದ ಎಂದು ಆತನ ಮಡದಿ ಆರೋಪ ಮಾಡಿದ್ದಾರೆ. ಗಂಡನ ವರ್ತನೆಯಿಂದ ಬೇಸತ್ತ ಲಲಿತಾ ವರದಕ್ಷಿಣೆ ಕಿರುಕುಳಕ್ಕೆ ನಾಗರಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಲಲಿತಾಳನ್ನು ಮನೆಯಿಂದ ಹೊರಹಾಕಿ ಮತ್ತೊಬ್ಬ ಮಹಿಳೆಯನ್ನ ಮನೆಗೆ ಕರೆತರಲು ನಾಗರಾಜ್ ಯತ್ನಿಸುತ್ತಿದ್ದಾನೆ. ಗಂಡನ ಕಿರುಕುಳಕ್ಕೆ ಹೆದರಿದ ಲಲಿತಾ ಬಟ್ಟೆ ಹೊಲೆದು ಜೀವನ ನಡೆಸುತ್ತಿದ್ದಾಳೆ. ಸದ್ಯ ಒಂಟಿಯಾಗಿರುವ ಲಲಿತಾಗೆ ಗಂಡನಿಂದ ಪ್ರಾಣಾಪಯವಿದ್ದು ಪ್ರತಿ ರಾತ್ರಿ ಭಯದಿಂದಲೇ ಕಳೆಯುತ್ತಿದ್ದಾರೆ. ಗಂಡನಿಂದ ರಕ್ಷಣೆ ಕೊಡಿಯೆಂದು ಕಣ್ಣೀರಿಡುತ್ತಿದ್ದಾಳೆ.

Comments are closed.