ಕರ್ನಾಟಕ

ಪೊಲೀಸ್ ಆಯುಕ್ತ ಭಾಸ್ಕರ್ ‌ರಾವ್ ಗೆ ಕೊರೊನಾ ಪತ್ತೆ ಪರೀಕ್ಷೆ

Pinterest LinkedIn Tumblr


ಬೆಂಗಳೂರು: ಪಾದರಾಯನಪುರ ಪುಂಡರ ಹಾವಳಿ ನಿಯಂತ್ರಿಸುವಲ್ಲಿ ಬ್ಯುಸಿಯಾಗಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಟ್ವಿಟ್ಟರ್‌ನಲ್ಲಿ ತಮ್ಮ ಕಾರ್ಯದೊತ್ತಡಗಳನ್ನು ಹಂಚಿಕೊಂಡಿದ್ದಾರೆ. ಪಾದರಾಯನಪುರದಲ್ಲಿ ಕಾನೂನು ಸುವ್ಯವಸ್ಥೆಯನ್ನು ತಹಬದಿಗೆ ತರುವಲ್ಲಿ ಸಾಕಷ್ಟು ಸಮಯ ವ್ಯಯಿಸಬೇಕಾಯ್ತು ಎಂದು ಅವರು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಪಾದರಾಯನಪುರ ಪ್ರಸಂಗದಲ್ಲಿ ಭಾಗಿಯಾಗಿದ್ದ ಭಾಸ್ಕರ್‌ರಾವ್‌ ಅವರೂ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಕೊರೊನಾ ವೈರಸ್ ಪತ್ತೆ ಪರೀಕ್ಷೆ ಒಳಗಾಗಿದ್ದಾರೆ. ಇದೀಗ ಪೊಲೀಸ್ ಇಲಾಖೆ ಪರೀಕ್ಷಾ ವರದಿಗಾಗಿ ಕಾಯುತ್ತಿದೆ.

ಭಾಸ್ಕರ್‌ ರಾವ್‌ ಅವರ ಟ್ವೀಟ್‌ ಕಂಡ ಕೂಡಲೇ, ಬಹುತೇಕ ಜನರು ತಮ್ಮ ಸಮಸ್ಯೆಗಳ ಪಟ್ಟಿಯಲ್ಲೇ ಪೊಲೀಸ್ ಆಯುಕ್ತರ ಮುಂದಿಟ್ಟಿದ್ದಾರೆ. ಪತ್ನಿ ಗರ್ಭಿಣಿಯಾಗಿದ್ದಾರೆ, ಆಕೆಯನ್ನು ತವರಿಗೆ ಕಳಿಸಲು ಪಾಸ್‌ ಕೊಡಿ ಎಂದು ಮೊರೆ ಇಟ್ಟಿದ್ದಾರೆ. ಇನ್ನು ಪೃಥ್ವಿ ಕೋಣನೂರ್ ಎಂಬ ಟ್ವಿಟ್ಟರ್ ಬಳಕೆದಾರ ಪೊಲೀಸರಿಗೆ ಪಾದರಾಯನಪುರದಂಥಾ ಪ್ರದೇಶಗಳಲ್ಲಿ ಡ್ರೋನ್ ಬಳಸುವಂತೆ ಸಲಹೆ ಕೊಟ್ಟಿದ್ಧಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಭಾಸ್ಕರ್‌ ರಾವ್, ಈಗಾಗಲೇ 40 ಡ್ರೋನ್‌ಗಳು ಬಳಕೆಯಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.

ಬಹುತೇಕ ಜನರು ಭಾಸ್ಕರ್‌ ರಾವ್‌ ಅವರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ. ಅವರ ಉತ್ತಮ ಆರೋಗ್ಯಕ್ಕೆ ಶುಭ ಕೋರಿದ್ದಾರೆ. ಈ ನಡುವೆ, ಕೆಲವರು ಪೊಲೀಸರಿಂದ ಕಿರುಕುಳವಾಗ್ತಿದೆ ಎಂಬ ದೂರನ್ನೂ ಪ್ರತಿಕ್ರಿಯೆಯ ರೂಪದಲ್ಲಿ ನೀಡಿದ್ದಾರೆ. ಇನ್ನು ಪಾದರಾಯನಪುರ ಪ್ರಕರಣದಲ್ಲಿ ನಡೆದ ರಾಜಕೀಯ ಮೇಲಾಟಗಳನ್ನೂ ಪ್ರಸ್ತಾಪಿಸಿರುವ ನೆಟ್ಟಿಗರು, ಈ ವೇಳೆ ಪೊಲೀಸರು ನಡೆದುಕೊಂಡ ರೀತಿಗೆ ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ.

ಕೆಲವರು ಭಾಸ್ಕರ್‌ ರಾವ್ ಅವರಿಗೆ ಸಲಹೆ ರೂಪದಲ್ಲಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆಯೂ ಸೂಚನೆ ನೀಡಿದ್ದಾರೆ. ಟ್ಯಾನರಿ ರಸ್ತೆ, ಕಾವಲ್ ಭೈರಸಂದ್ರ, ನಾಗವಾರ, ಕೆಜಿ ಹಳ್ಳಿ, ಡಿಜೆ ಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಲಾಕ್‌ಡೌನ್‌ಗೆ ಕಿಮ್ಮತ್ತೇ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಒಟ್ಟಿನಲ್ಲಿ, ಬೆಂಗಳೂರಿನ ಪೊಲೀಸರೂ ಕೊರೊನಾ ವೈರಸ್ ಪತ್ತೆ ಪರೀಕ್ಷೆಗೆ ಒಳಗಾಗಿದ್ದಾರೆ ಅನ್ನೋ ಮಾಹಿತಿ ನಗರ ಪೊಲೀಸ್ ಆಯುಕ್ತರ ಮೂಲಕವೇ ಜನರಿಗೆ ಸಿಕ್ಕಿದೆ. ಎಲ್ಲ ಪೊಲೀಸರ ವರದಿಯೂ ನೆಗೆಟೀವ್‌ ಬರಲಿ ಅನ್ನೋದೇ ಎಲ್ಲರ ಆಶಯ. ಏಕೆಂದರೆ ಮುಂಬೈನಲ್ಲಿ 90ಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಪಾಸಿಟಿವ್‌ ಆಗಿ, ಇಬ್ಬರು ಜೀವಬಿಟ್ಟಿದ್ದಾರೆ. ಆ ರೀತಿಯ ದುರಂತಗಳು ನಮ್ಮ ಹೆಮ್ಮೆಯ ಪೊಲೀಸ್ ಇಲಾಖೆಯಲ್ಲಿ ಆಗದಿರಲಿ.

Comments are closed.