ಕರ್ನಾಟಕ

ಗೆಳೆಯನ ಸಹೋದರಿ ಮೇಲೇ ಕಾಕ ದೃಷ್ಟಿ ಬೀರಿದ ರೌಡಿ ಶೀಟರ್‌ ನ ಹತ್ಯೆ

Pinterest LinkedIn Tumblr


ಬೆಂಗಳೂರು: ಕಾಟನ್‌ಪೇಟೆಯಲ್ಲಿ ಫೆಬ್ರವರಿ 11 ರಂದು ನಡೆದಿದ್ದ ರೌಡಿಯೊಬ್ಬನ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ರೌಡಿ ಪಟ್ಟಿಯಲ್ಲಿದ್ದ 28 ವರ್ಷದ ಪ್ರಭಾಕರ್‌ ಅಲಿಯಾಸ್‌ ಸಕ್ಕರೆ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ, ಮಹಿಳೆ ಸೇರಿ ಆರು ಆರೋಪಿಗಳನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭಕ್ಷಿಗಾರ್ಡನ್‌ ನಿವಾಸಿ ದೀಪಕ್‌ (22), ಸುನಿಲ್‌ (22), ಜಾಲಿ ಮೊಹಲ್ಲಾದ ಶಿವಾ (28), ಅಜೇಯ (23), ವಿನೋದ್‌ (27) ಹಾಗೂ ಮಾಲಾ (43) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಕೊಲೆ ಮಾಡಲು ಕಾರಣವೇನು..?

ಕೊಲೆಯಾದ ಪ್ರಭಾಕರ್‌ ಮತ್ತು ಪ್ರಮುಖ ಆರೋಪಿ ದೀಪಕ್‌ ಸ್ನೇಹಿತರಾಗಿದ್ದರು. ಕೆಲ ತಿಂಗಳ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಪ್ರಭಾಕರ್‌ ಜೈಲು ಸೇರಿದ್ದ. ಜಾಮೀನು ಪಡೆಯಲು ದೀಪಕ್‌ನಿಂದ ಪ್ರಭಾಕರ್‌ ಹಣ ಕೇಳಿದ್ದ. ಆದರೆ, ದೀಪಕ್‌ ಹಣ ನೀಡಿರಲಿಲ್ಲ. ಹೇಗೋ 40 ಸಾವಿರ ರೂ. ಹೊಂದಿಸಿಕೊಂಡ ಪ್ರಭಾಕರ್‌, ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ.

ಸ್ನೇಹಿತನಾಗಿದ್ದರೂ ಜೈಲಿನಿಂದ ಹೊರಬರಲು ಹಣ ನೀಡಲಿಲ್ಲಎಂಬ ಕಾರಣಕ್ಕೆ ಸ್ನೇಹಿತ ದೀಪಕ್‌ ಮೇಲೆ ಪ್ರಭಾಕರ್‌ ಕೋಪಗೊಂಡಿದ್ದ. ಆಗಾಗ ದೀಪಕ್‌ ಮನೆಗೆ ಹೋಗುತ್ತಿದ್ದ ಪ್ರಭಾಕರ್‌, ಹಣಕ್ಕಾಗಿ ಪೀಡಿಸುತ್ತಿದ್ದ. ಈ ವೇಳೆ ದೀಪಕ್ ಸಹೋದರಿ ಮಾಲಾ ಜೊತೆಗೆ ಅನುಚಿತವಾಗಿ ವರ್ತಿಸಿ, ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದ. 40 ಸಾವಿರ ರೂ. ಕೊಡದಿದ್ದರೆ ನಿಮ್ಮ ನಿರ್ಮಾಣ ಹಂತದ ಮನೆ ಕಾಮಗಾರಿ ಪೂರ್ಣಗೊಳ್ಳಲು ಬಿಡುವುದಿಲ್ಲ ಎಂದು ಆತನ ತಾಯಿಗೂ ಬೆದರಿಕೆ ಹಾಕಿದ್ದನಂತೆ. ಈ ವಿಚಾರ ದೀಪಕ್‌ಗೆ ಗೊತ್ತಾಗಿ, ತನ್ನ ಸ್ನೇಹಿತರ ಜತೆಗೂಡಿ ಪ್ರಭಾಕರ್‌ ಕೊಲೆಗೆ ಸಂಚು ರೂಪಿಸಿದ್ದ.

ಫೆ.11ರಂದು ರಾತ್ರಿ 7.40ಕ್ಕೆ ಭಕ್ಷಿ ಗಾರ್ಡನ್‌ ಕಡೆ ಬಂದಿದ್ದ ಪ್ರಭಾಕರ್‌ ಮೇಲೆ ದೀಪಕ್‌ ಮತ್ತು ಆತನ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿತ್ತು. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಮುಖ ಚಹರೆಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.