ಕರ್ನಾಟಕ

ಪತಿಯ ಒಂದೇ ಏಟಿಗೆ ಪ್ರಾಣಬಿಟ್ಟ ಪತ್ನಿ

Pinterest LinkedIn Tumblr


ಬೆಂಗಳೂರು (ಫೆ. 11): ಸಿಲಿಕಾನ್​ ಸಿಟಿಯಲ್ಲಿ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಪೊಲೀಸ್ ಇಲಾಖೆ ಎಷ್ಟೇ ಪ್ರಯತ್ನಿಸುತ್ತಿದ್ದರೂ ಪ್ರತಿದಿನ ಒಂದಿಲ್ಲೊಂದು ಕೊಲೆ ನಡೆಯುತ್ತಲೇ ಇರುತ್ತದೆ. ಇಂದು ಮಟಮಟ ಮಧ್ಯಾಹ್ನ ಬೆಂಗಳೂರಿನಲ್ಲಿ ಗಂಡ- ಹೆಂಡತಿಯ ನಡುವೆ ನಡೆದ ವಾಗ್ವಾದ ಕೊಲೆಯಲ್ಲಿ ಅಂತ್ಯವಾಗಿದೆ.

ಹೆಗ್ಗನಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಇಂದು ಮಧ್ಯಾಹ್ನ 12 ಗಂಟೆಗೆ ಗಂಡ-ಹೆಂಡತಿ ಮಧ್ಯೆ ಜಗಳ ನಡೆದಿದೆ. ಈ ವೇಳೆ ಗಂಡ ಕಪಾಲಕ್ಕೆ ಹೊಡೆದಿದ್ದರಿಂದ ಹೆಂಡತಿಯ ಕಿವಿ, ಮೂಗಿನಲ್ಲಿ ರಕ್ತ ಸುರಿದಿದೆ. ಗಂಡನ ಒಂದೇ ಒಂದು ಏಟಿಗೆ ಆ ಹೆಂಡತಿ ಪ್ರಾಣ ಬಿಟ್ಟಿದ್ದಾಳೆ. ಈ ವೇಳೆ ಆರೋಪಿ ತನ್ನ ಮಗಳ ಮೇಲೂ ಹಲ್ಲೆ ನಡೆಸಿದ್ದು, ಆಕೆಯೂ ಕುಸಿದುಬಿದ್ದಿದ್ದಾಳೆ. ನಂತರ ತಾನು ಕೂಡ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಅಮ್ಮನ ಸಾವನ್ನು ಕಂಡು ಆಘಾತಕ್ಕೊಳಗಾಗಿದ್ದ ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಕ್ಷ್ಮೀ ಎಂಬ 30 ವರ್ಷದ ಮಹಿಳೆ ಕೊಲೆಯಾದ ದುರ್ದೈವಿ. ಆಕೆಯನ್ನು ಕೊಲೆ ಮಾಡಿದ ಗಂಡ ಶಿವರಾಜ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅಪ್ಪನಿಂದ ಹಲ್ಲೆಗೊಳಗಾದ ಮಗಳು ಚೈತ್ರಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಶಿವರಾಜ್ ಚಿಲ್ಲರೆ ವ್ಯಾಪಾರಿಯಾಗಿದ್ದ. ಲಕ್ಷ್ಮೀ ಗಾರ್ಮೆಂಟ್ಸ್​​ನಲ್ಲಿ ಕೆಲಸ ಮಾಡುತ್ತಿದ್ದಳು. ಈ ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಚೈತ್ರಾ ಇನ್ನೂ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಆಕೆ ಚೇತರಿಸಿಕೊಂಡು ಹೇಳಿಕೆ ನೀಡಿದ ನಂತರ ಘಟನೆಯ ಹಿಂದಿನ ಕಾರಣ ಗೊತ್ತಾಗಲಿದೆ.

ಅದೇ ಕಟ್ಟಡದಲ್ಲಿತ್ತು ಮತ್ತೊಂದು ಶವ:ಲಕ್ಷ್ಮೀ ಕೊಲೆಯ ಬಗ್ಗೆ ಪರಿಶೀಲನೆ ನಡೆಸಲು ಆಕೆಯ ಮನೆಗೆ ಹೋದ ಪೊಲೀಸರಿಗೆ ಆಘಾತ ಕಾದಿತ್ತು. ಘಟನೆ ನಡೆದ ಕಟ್ಟಡದಲ್ಲೇ ಮತ್ತೊಂದು ಶವ ಪತ್ತೆಯಾಗಿದೆ. ಶಿವರಾಜ್​ ತನ್ನ ಹೆಂಡತಿಗೆ ಹೊಡೆದ ರೂಮಿನ ಮೇಲ್ಭಾಗದಲ್ಲಿರುವ ಮನೆಯಲ್ಲಿ ನೇತಾಡುತಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ. ರಂಗನಾಥ್ ಎಂಬಾತನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿರುವ ಶವದ ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದೆ. ಹೀಗಾಗಿ, ಒಂದು ಕೊಲೆಯ ಪರಿಶೀಲನೆಗೆ ಹೋದ ಪೊಲೀಸರಿಗೆ ಮತ್ತೊಂದು ಕೊಲೆಯ ಮಾಹಿತಿ ಸಿಕ್ಕಿದೆ.

Comments are closed.