ಮಂಡ್ಯ(ಅ. 27): ರಾಜ್ಯದಲ್ಲಿ ಉಗ್ರರ ಜಾಲ ವಿಸ್ತರಣೆಯಾಗುತ್ತಿದೆ ಎಂದು ಗುಪ್ತಚರ ಇಲಾಖೆ ಅನೇಕ ಬಾರಿ ಎಚ್ಚರಿಕೆ ಕೊಟ್ಟಿದೆ. ಇದಕ್ಕೆ ಇಂಬು ಕೊಡುವಂತೆ ಸಕ್ಕರೆ ನಾಡು ಮಂಡ್ಯ ಜಿಲ್ಲೆ ಕೆಆರ್ ಪೇಟೆಯ ಆಲಂಬಾಡಿ ಕಾವಲ್ ಎಂಬಲ್ಲಿ ಪಿಎಫ್ಐ ಸಂಘಟನೆಯು ಇಂದು ಪೆರೇಡ್ ನಡೆಸಿದೆ. ಮಂಡ್ಯ ಪೊಲೀಸರು ಕಾರ್ಯಾಚರಣೆ ನಡೆಸಿ 16 ಮಂದಿ ಶಂಕಿತ ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಹುಣಸೂರಿನ 3, ಆಲಂಬಾಡಿ ಕಾವಲ್ನ 5, ಕೆಆರ್ ಪೇಟೆಯ 8 ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಂಧಿತರಲ್ಲಿ ಕೆಆರ್ ಪೇಟೆಯ ಶಫೀವುಲ್ಲಾ ಕೂಡ ಸೇರಿದ್ದಾರೆ. ಶಫೀವುಲ್ಲಾ ಕಿಕ್ಕೇರಿ ರಸ್ತೆಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದು ಆತ ಪಿಎಫ್ಐ ಸಂಘಟನೆಯ ಕಾರ್ಯಕರ್ತನೆಂದು ಶಂಕಿಸಲಾಗಿದೆ.
ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಉಪ ವರಿಷ್ಠಾಧಿಕಾರಿ ಡಾ| ವಿ.ಜೆ. ಶೋಭಾರಾಣಿ ನೇತೃತ್ವದಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಸಂಶಯದ ಮೇಲೆ 16 ಮಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದೇವೆ. ಇವರ ಮೇಲೆ ಸಂಶಯ ಮೂಡುವಂಥ ಮಾಹಿತಿ ಬಂದಿಲ್ಲ ಎಂದು ಎಸ್ಪಿ ಪರಶುರಾಮ್ ಅವರು ನ್ಯೂಸ್18 ಕನ್ನಡಕ್ಕೆ ಸ್ಪಷ್ಟಪಡಿಸಿದ್ದಾರೆ.
2006ರಲ್ಲಿ ಪ್ರಾರಂಭವಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಮೇಲೆ ಉಗ್ರ ಚುಟುವಟಿಕೆಗಳಲ್ಲಿ ಶಾಮೀಲಾಗಿರುವ ಆರೋಪವಿದೆ. ಮಾನವ ಹಕ್ಕುಗಳ ಪರವಾಗಿ ಹೋರಾಟ ಮಾಡುವುದಾಗಿ ಹೇಳಿಕೊಳ್ಳುವ ಪಿಎಫ್ಐ ನಿಷೇಧಿತ ಸಿಮಿ ಸಂಘಟನೆಯ ಇನ್ನೊಂದು ರೂಪ ಎಂಬ ಮಾತೂ ಇದೆ. ಹಲವು ಕಡೆದ ಉಗ್ರ ದಾಳಿಗಳಲ್ಲಿ ಪಿಎಫ್ಐ ಸಂಘಟನೆಯ ಕೈವಾಡ ಇದೆ ಎಂಬ ಶಂಕೆ ಇದೆ. ಕೇರಳದಲ್ಲಿ ಕೆಲ ಆರೆಸ್ಸೆಸ್ ಮತ್ತು ಕಮ್ಯೂನಿಸ್ಟ್ ಸಂಘಟನೆಗಳ ಕಾರ್ಯಕರ್ತರನ್ನು ಹತ್ಯೆ ಮಾಡಿದ ಪ್ರಕರಣಗಳಲ್ಲಿ ಪಿಎಫ್ಐ ಕೈವಾಡ ಇರುವುದು ತಿಳಿದುಬಂದಿದೆ. ಕೇರಳ ಸರ್ಕಾರವು ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದೆ. ಕೇಂದ್ರ ಸರ್ಕಾರ ಕೂಡ ನಿಷೇಧದ ಚಿಂತನೆಯಲ್ಲಿದೆ.
Comments are closed.