ಕರ್ನಾಟಕ

3 ವರ್ಷದ ಬಾಲಕನನ್ನು 16 ವರ್ಷದ ಬಾಲಕನೊಬ್ಬ ಕಿಡ್ನಾಪ್ ಮಾಡಿ 5 ಲಕ್ಷಕ್ಕೆ ಬೇಡಿಕೆ

Pinterest LinkedIn Tumblr


ಧಾರವಾಡ: ಮೂರು ವರ್ಷದ ಬಾಲಕನನ್ನು 16 ವರ್ಷದ ಬಾಲಕನೊಬ್ಬ ಕಿಡ್ನಾಪ್ ಮಾಡಿ ಐದು ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟು ಸಿಕ್ಕಿಬಿದ್ದ ಘಟನೆ ವಿದ್ಯಾಕಾಶಿ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಜಯನಗರದಲ್ಲಿನ ಸಂಕಲ್ಪ ಪಿಜಿ ಸೆಂಟರ್‌ನ ಮಾಲೀಕರ ಮಗುವನ್ನು 16 ವರ್ಷದ ಅಪ್ರಾಪ್ತ ಬಾಲಕ ಇಂದು ಮಧ್ಯಾಹ್ನ ಅಪಹರಿಸಿದ್ದ. ಬಳಿಕ ಭಾರತಿ ಅವರಿಗೆ ಕರೆ ಮಾಡಿ, ನಿಮ್ಮ ಮಗ ನಮ್ಮ ಬಳಿಯೇ ಇದ್ದಾನೆ. ಐದು ಲಕ್ಷ ರೂ. ತಂದುಕೊಟ್ಟು ಮಗನನ್ನು ಕರೆದುಕೊಂಡು ಹೋಗಿ ಎಂದು ಹೇಳಿದ್ದ. ಇದರಿಂದ ಗಾಬರಿಗೊಳಗಾದ ಭಾರತಿ ಪೊಲೀಸರು ಮೊರೆ ಹೋಗಿದ್ದರು.

ಭಾರತಿ ಅವರಿಗೆ ಕರೆ ಮಾಡಿದ್ದ ಅಪ್ರಾಪ್ತನ ಮೊಬೈಲ್ ನಂಬರ್ ಅನ್ನು ಪೊಲೀಸರು ಟ್ರೇಸ್ ಮಾಡಿದ್ದರು. ಈ ವೇಳೆ ಅಪಹರಣಕಾರ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಸುತ್ತಾಡುತ್ತಿರುವುದು ಖಚಿತವಾಗಿತ್ತು. ಕವಿವಿ ಆವರಣದಲ್ಲಿ ಕಾರ್ಯಾಚರಣೆಗೆ ಇಳಿದ 30ಕ್ಕೂ ಹೆಚ್ಚು ಪೊಲೀಸರು ಕ್ಯಾಂಪಸ್ ಸುತ್ತಲೂ ನಾಕಾಬಂಧಿ ಮಾಡಿದ್ದರು. ಇತ್ತ ಭಾರತಿ ಅವರು 5 ಲಕ್ಷ ರೂ. ತೆಗೆದುಕೊಂಡು ವಿಶ್ವವಿದ್ಯಾಲಯ ಕ್ಯಾಂಪಸ್‍ಗೆ ಬಂದಿದ್ದರು.

ಬಟಾನಿಕಲ್ ಗಾರ್ಡನ್‍ನಲ್ಲಿ ಬಾಲಕನ ಸಮೇತ ಬಚ್ಚಿಟ್ಟುಕೊಂಡಿದ್ದ ಅಪ್ರಾಪ್ತನನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಬಳಿಕ ಭಾರತಿ ಅವರ ಮಗುವನ್ನ ರಕ್ಷಿಸಿ ಅಪ್ರಾಪ್ತನನ್ನು ವಶಕ್ಕೆ ಪಡಿದಿದ್ದಾರೆ.

ಅಪ್ರಾಪ್ತನು ಈ ಹಿಂದೆ ಸಂಕಲ್ಪ ಪಿಜಿ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕೆಲ ದಿನಗಳ ಹಿಂದೆ ಕೆಲಸ ಬಿಟ್ಟು ಹೋಗಿದ್ದ. ಶುಕ್ರವಾರ ಮನೆಗೆ ಬಂದು ಭಾರತಿ ಅವರನ್ನು ಮಾತನಾಡಿಸಿ ವಾಪಸ್ ಹೋಗಿದ್ದ. ಹಾಗೆಯೇ ಇವತ್ತು ಕೂಡ ಮನೆಗೆ ಬಂದು, ವಾಪಸ್ ಹೋಗುವಾಗ ಮನೆಯ ಮುಂದೆ ಆಡುತ್ತಿದ್ದ ಮಗುವನ್ನು ಎತ್ತಿಕೊಂಡು ಹೋಗಿದ್ದಾನೆ. ಕರ್ನಾಟಕ ವಿಶ್ವವಿದ್ಯಾಲಯ ಕ್ಯಾಂಪಸ್ ಸೇರಿದ ನಂತರ ಭಾರತಿ ಅವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Comments are closed.