ಕರ್ನಾಟಕ

ಮಾಜಿ ಮುಖ್ಯಮಂತ್ರಿ ಪರಮೇಶ್ವರ್ ಬಹಿರಂಗಪಡಿಸದ ಆಸ್ತಿ 103 ಕೋಟಿ!

Pinterest LinkedIn Tumblr


ಬೆಂಗಳೂರು: ಮಾಜಿ ಡಿಸಿಎಂ, ಕಾಂಗ್ರೆಸ್ ಮುಖಂಡ ಜಿ.ಪರಮೇಶ್ವರ್ ಬಹಿರಂಗಪಡಿಸದ ಬರೋಬರಿ 103 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ನಡೆಸಿದ ದಾಳಿಯಲ್ಲಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಪರಮೇಶ್ವರ್ ಅವರು 100 ಕೋಟಿ ರೂ. ದಾಖಲೆ ಪತ್ರಗಳಿಗೆ ಯಾವುದೇ ಉತ್ತರ ನೀಡಿಲ್ಲ. ಈ ಮೂಲಕ ಕಾಲೇಜಿನಲ್ಲಿ ದುಡಿದ ಹಣವನ್ನು ಪಂಚತಾರಾ ಹೋಟೆಲ್ ಉದ್ಯಮದ ಮೇಲೆ ಹೂಡಿಕೆ ಮಾಡಿದ್ದು ಸಾಬೀತಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

ಸಿದ್ಧಾರ್ಥ್ ಮೆಡಿಕಲ್ ಕಾಲೇಜಿನ 8 ಜನ ಸಿಬ್ಬಂದಿಗೆ ಗೊತ್ತಾಗದಂತೆ ಅವರ ಹೆಸರಲ್ಲಿ ವಿವಿಧ ಪಂಚತಾರಾ ಹೋಟೆಲ್‍ಗಳ ಮೇಲೆ 4.6 ಕೋಟಿ ಹೂಡಿಕೆ ಮಾಡಲಾಗಿದೆ. ಎರಡು ದಿನದ ದಾಳಿಯಲ್ಲಿ ಆರ್.ಎಲ್.ಜಾಲಪ್ಪ ಹಾಗೂ ಪರಮೇಶ್ವರ್ ಮನೆ ಸೇರಿದಂತೆ 4.52 ಕೋಟಿ ರೂ. ಪತ್ತೆಯಾಗಿದೆ ಎಂಬ ಹೇಳಲಾಗುತ್ತಿದೆ.

ಕೋಟಿ ಕೋಟಿ ತೆರಿಗೆ ವಂಚನೆ ಆರೋಪ ಸಂಬಂಧ ಸತತ ಎರಡನೇ ದಿನವೂ ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಮನೆ, ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ರೇಡ್ ನಡೆದಿದೆ. ಜಿ. ಪರಮೇಶ್ವರ್, ಪತ್ನಿ ಕನ್ನಿಕಾ ಪರಮೇಶ್ವರ್ ಹಾಗೂ ಸಹೋದರನ ಪುತ್ರ ಆನಂದ್ ಸಿದ್ಧಾರ್ಥ್ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸೇರಿದ 120ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಐಟಿ ಅಧಿಕಾರಿಗಳು ಬ್ಲಾಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪರಮೇಶ್ವರ್ ಮನೆಯ ಲಾಕರ್ ಓಪನ್ ಆಗದ ಹಿನ್ನೆಲೆಯಲ್ಲಿ ಕೀ ಮೇಕರ್ ಗಳನ್ನು ಕರೆಯಿಸಿ ಅಪಾರ ಪ್ರಮಾಣದ ಹಣ, ಚಿನ್ನಾಭರಣ ಹಾಗೂ ಹಲವು ದಾಖಲೆಗಳನ್ನೂ ಕೂಡ ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಯಿಂದಲೇ ಶೋಧ ಕಾರ್ಯ ಮುಂದುವರಿಸಿದ ಐಟಿ ಅಧಿಕಾರಿಗಳು ಪರಮೇಶ್ವರ್ ಅವರಿಗೆ ಸೇರಿದ ಬೆಂಗಳೂರಿನ ಸದಾಶಿವನಗರದ ಮನೆ, ತುಮಕೂರು, ನೆಲಮಂಗಲ, ಟಿ.ಬೇಗೂರಿನಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಶೋಧ ನಡೆಸಿದ್ದಾರೆ.

ದಾಳಿಯ ವೇಳೆ ಸಿಕ್ಕ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ್ದ ದಾಖಲೆಗಳನ್ನೇ ಆಧರಿಸಿ ಹೆಚ್ಚುವರಿ ಆಯುಕ್ತೆ ನಿಶಿ ಪದ್ಮ ವಿಚಾರಣೆ ನಡೆಸುತ್ತಿದ್ದಾರೆ. ಪರಮೇಶ್ವರ್ ಅಣ್ಣನ ಮಗ ಆನಂದ್ ಬಳಿ ಸಿಕ್ಕ ಡೈರಿಯಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಸೀಟು ಹಂಚಿಕೆಯಲ್ಲಿ ಸಿಕ್ಕ ಹಣವನ್ನು ಸಿನಿಮಾಗಳ ಮೇಲೆ ಹೂಡಿಕೆ ಮಾಡಿರುವುದು ಕೂಡ ಪತ್ತೆಯಾಗಿದೆ. ಕಾರ್ಪೋರೇಟ್ ಸಂಸ್ಥೆಗಳಲ್ಲೂ ಹಣ ಹೂಡಿಕೆಯಾಗಿದ್ದು, ಮತ್ತೆ ಸೋಮವಾರ ವಿಚಾರಣೆ ಬರುವಂತೆ ಐಟಿ ಸಮನ್ಸ್ ಕೊಟ್ಟಿದೆ ಎಂಬ ಮಾಹಿತಿ ಲಭಿಸಿದೆ.

ಪರಮೇಶ್ವರ್ ಆಪ್ತಸಹಾಯಕ ರಮೇಶ್ ಅವರನ್ನು ಕೂಡ ವಿಚಾರಣೆ ಮಾಡಲಾಗಿದೆ. ಈ ನಡುವೆ ಪರಮೇಶ್ವರ್ ಭೇಟಿಗೆ ಬಂದ ಮಾಜಿ ಸಚಿವ ಯು.ಟಿ ಖಾದರ್ ಅವರಿಗೆ ಅವಕಾಶ ನಿರಾಕರಿಸಲಾಯಿತು. ಅಭಿಮಾನಿಗಳು ದೇವರ ಪ್ರಸಾದ ಹೊತ್ತು ತಂದಿದ್ದರು. ಪರಮೇಶ್ವರ್ ಅಭಿಮಾನಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಐಟಿ ಶೋಧ, ವಿಚಾರಣೆ ಮುಗಿದಿಲ್ಲ. ನಾಳೆಯೂ ಪರಮೇಶ್ವರ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ, ವಿಚಾರಣೆ ಮುಂದುವರಿಯುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.