ಕರ್ನಾಟಕ

ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ ಮುಗಿಸಲು ಬಿಜೆಪಿಯಲ್ಲೇ ಷಡ್ಯಂತ್ರ

Pinterest LinkedIn Tumblr


ಬಾಗಲಕೋಟೆ: ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ ಮುಗಿಸಲು ಬಿಜೆಪಿಯಲ್ಲೇ ಷಡ್ಯಂತ್ರ ನಡೆಯುತ್ತಿದೆ ಎಂದು ಬಾಗಲಕೋಟೆಯಲ್ಲಿ ಮಾಜಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿ.ಎಲ್.ಸಂತೋಷ್ ಸೇರಿ ಬಿಎಸ್ ವೈ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಹೇಳಿದ ತಿಮ್ಮಾಪುರ, ಬಿಎಸ್ ವೈ ಮುಖ ನೋಡಿ ಲಿಂಗಾಯಿತರು ವೋಟು ಹಾಕಿದ್ದಾರೆ. ನಳಿನ್ ಕುಮಾರ್ ಕಟೀಲ್ ಮುಖ ನೋಡಿ ಓಟು ಹಾಕಿಲ್ಲ. ಜೊತೆಗೆ ಕಟೀಲ್ ಗೆ ಈ ಭಾಗದ ಜನರ ಪರಿಚಯವೆ ಇಲ್ಲ ಎಂದರು.

ಜನರ ಆಶೀರ್ವಾದ ಪಡೆಯದ ಕೆಲವರು ಬಿಜೆಪಿಯಲ್ಲಿ ಕೂತಿದ್ದಾರೆ. ಅವರು ಲಿಂಗಾಯಿತ ನಾಯಕ ಬಿಎಸ್ ಯಡಿಯೂರಪ್ಪನವರನ್ನು ಮುಗಿಸಲು ಸಂಚು ಹೂಡಿದ್ದಾರೆ. ಸಂಚಿಗೆ ಸಿಕ್ಕಿ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂದು ತಿಮ್ಮಾಪುರ ಹೇಳಿದರು.

ಬಹುಮತ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ತರಲು ಬಿಎಸ್ ವೈ ಪ್ರಯತ್ನ ನಡೆಸುತ್ತಿದ್ದರೆ, ಬಿಎಸ್ ವೈ ಮುಗಿಸಲು ಸಂತೋಷ, ಕಟೀಲ್ ನಿಂತಿದ್ದಾರೆ. ಬಿಎಸ್ ವೈ ಮೇಲೆ ಡಿಸಿಎಂಗಳನ್ನು ತಂದಿದ್ದಾರೆ. ಇವೆಲ್ಲ ಆಟಗಳನ್ನು ನೋಡಿದ್ರೆ ಇನ್ನೆರಡು ತಿಂಗಳಲ್ಲಿ ಯಡಿಯೂರಪ್ಙ ಅವರನ್ನು ಈ ಇಬ್ಬರು ಮುಗಿಸುತ್ತಾರೆ. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಅವರಿಗೆ ಟಿಕೆಟ್ ಸಹ ಬಿಜೆಪಿ ಕೊಡಲ್ಲ ಎಂದರು.

ಇನ್ನು ಇದೆ ವೇಳೆ ಕೇಂದ್ರದಿಂದ ಪ್ರವಾಹ ಪರಿಹಾರ ಘೋಷಣೆ ಮಾಡದ ಹಿನ್ನೆಲೆ ಮೋದಿ ವಿರುದ್ಧ ತಿಮ್ಮಾಪುರ ವಾಗ್ದಾಳಿ ನಡೆಸಿದರು. ಮೋದಿ ಐವತ್ತಾರು ಇಂಚಿನ ಎದೆ ಇದೆ ಎಂದು ಪೋಸ್ ಕೊಡುತ್ತಾರೆ. ಆದರೆ ಅವರ ಹೃದಯದಲ್ಲಿ ಕರ್ನಾಟಕ‌ ರಾಜ್ಯದ ಜನತೆ ಬಗ್ಗೆ ಒಂದಿಂಚು ಸಹ ಜಾಗವಿಲ್ಲ ಒಂದಿಂಚು ಸಹ ಜಾಗ ಇರಲಾರದಂತ 56 ಇಂಚು ಎದೆ ಇದ್ದರೆಷ್ಟು, ಬಿಟ್ಟರೆಷ್ಟು ಕರ್ನಾಟಕ‌ ಜನತೆಗೆ ನೋವು ತಪ್ಪಲಿಲ್ಲ ಎಂದರು. ರಾಜ್ಯದ ಜನ 25 ಸಂಸದರನ್ನ ಆಯ್ಕೆ‌ ಮಾಡಿ ಕಳಿಸಿದ್ದಾರೆ. ಪ್ರಧಾನಿ ಹೃದಯದಲ್ಲಿ ನಮಗೆ ಸಣ್ಣ ಜಾಗವಿದೆ ಅಂತಾ ತಿಳಿದು ಕೊಂಡಿದ್ವಿ. ಆದರೆ ಅಲ್ಲಿ ಸ್ವಲ್ಪವೂ ಜಾಗವಿಲ್ಲ ಎಂದ ತಿಮ್ಮಾಪುರ, ಪ್ರವಾಹ ಪರಿಹಾರ ಕೇಳಲು ಲೋಕಸಭಾ ಸದಸ್ಯರಿಗೆ ಬಾಯಿ‌ ಇಲ್ಲ ಮುಖ್ಯಮಂತ್ರಿ ಬಿಎಸ್ ವೈ ಕೂಡ ಬಾಯಿ ಬಿಟ್ಟು ಕೇಳುವ ಸ್ಥಿತಿಯಲ್ಲಿಲ್ಲ ಎಂದು ಕುಟುಕಿದರು.

Comments are closed.